ಬೈಜೂಸ್ ಮಾಲಕನ ನಿವಾಸ, ಕಚೇರಿಗಳ ಮೇಲೆ ಇಡಿ ದಾಳಿ – ವಿಚಾರಣೆಗೆ ಹಾಜರಾಗದೇ ಡೋಂಟ್ ಕೇರ್ ಎಂದಿದ್ದ ಬೈಜೂ ರವೀಂದ್ರನ್…!!
- ವಾಣಿಜ್ಯ ಸುದ್ದಿ
- April 29, 2023
- No Comment
- 195
ನ್ಯೂಸ್ ಆ್ಯರೋ : ಬೆಂಗಳೂರು ಮೂಲದ ಎಜುಟೆಕ್ ಕಂಪನಿ ‘ಬೈಜೂಸ್’ ಸಂಸ್ಥಾಪಕ ಬೈಜೂ ರವೀಂದ್ರನ್ ಅವರ ಬೆಂಗಳೂರು ನಿವಾಸದ ಮೇಲೆ ಇಂದು ಜಾರಿ ನಿರ್ದೇಶನಾಲಯ ಶೋಧ ಕಾರ್ಯಾಚರಣೆ ನಡೆಸಿದೆ.
ವಿದೇಶಿ ವಿನಿಮಯ ಉಲ್ಲಂಘನೆ ಪ್ರಕರಣದಲ್ಲಿ ಈ ಕಾರ್ಯಾಚರಣೆ ಮಾಡಲಾಗಿದ್ದು, ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಎರಡು ವ್ಯವಹಾರ ಹಾಗೂ ಒಂದು ವಸತಿ ಸ್ಥಳ ಸೇರಿ ಒಟ್ಟು ಮೂರು ಕಡೆಗಳಲ್ಲಿ ಶೋಧ ಕಾರ್ಯ ನಡೆದಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯಡಿ ದಾಖಲಾದ ದೂರಿನ ಅನ್ವಯ ಈ ದಾಳಿ ನಡೆದಿದೆ. ಪತ್ರ ಹಾಗೂ ಡಿಜಿಟಲ್ ರೂಪದಲ್ಲಿದ್ದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.
ಹಲವು ಮಂದಿಯಿಂದ ಬಂದ ದೂರು ಆಧರಿಸಿ, ಬೈಜೂ ರವೀಂದ್ರನ್ ಅವರ ವಿರುದ್ಧ ದೂರು ದಾಖಲಿಸಿ, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಆದರೆ ಅವರು ಸತತ ನೋಟಿಸ್ ಹೊರತಾಗಿಯೂ ವಿಚಾರಣೆಗೆ ಗೈರು ಹಾಜರಾಗಿದ್ದರು.
ಸ್ಥಳೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಿಂದಲೂ ಬೈಜೂಸ್ ಗೆ ದಂಡ…!!
ಐಎಎಸ್ ಕೋಚಿಂಗ್ ಆಕಾಂಕ್ಷಿಯಾಗಿದ್ದ ವಿದ್ಯಾರ್ಥಿನಿ ಪ್ರಿಯಾಂಕಾ ದೀಕ್ಷಿತ್ ಆನ್ಲೈನ್ ನಲ್ಲಿ ನಟ ಶಾರುಖ್ ಖಾನ್ ಅವರ ಬೈಜೂಸ್ ಪರ ಜಾಹೀರಾತುಗಳಿಂದ ಪ್ರೇರಿತಗೊಂಡು ಕೋಚಿಂಗ್ ಪಡೆಯಲು ಶುಲ್ಕ ಪಾವತಿಸಿದ್ದರು.
ಉತ್ತಮ ತರಬೇತಿ ನೀಡುವುದಾಗಿ ನಂಬಿಸಿದ್ದ ಸಂಸ್ಥೆ ಯಾವ ತರಗತಿಗಳನ್ನು ನೀಡದೇ, ಹಣ ವಾಪಸ್ ಕೊಡದೆ ವಂಚಿಸಿದೆ ಎಂದು ಪ್ರಿಯಾಂಕಾ ದೀಕ್ಷಿತ್ ಇಂದೋರ್ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು.
ವಿಚಾರಣೆ ನಡೆಸಿದ ಆಯೋಗ ಪ್ರಿಯಾಂಕಾ ದೀಕ್ಷಿತ್ ಪಾವತಿಸಿದ 1.08 ಲಕ್ಷ ರೂ.ಗಳನ್ನು ವಾರ್ಷಿಕ ಶೇಕಡ 12ರಷ್ಟು ಬಡ್ಡಿ ಸೇರಿ ಮರಳಿಸಬೇಕು ಎಂದು ಸೂಚಿಸಿದೆ. ದಾವೆ ವೆಚ್ಚವಾಗಿ 5000 ರೂ., ಆಕೆಯ ಮಾನಸಿಕ, ಆರ್ಥಿಕ ಸಂಕಷ್ಟ ಪರಿಹಾರಕ್ಕೆ 50,000 ರೂಪಾಯಿ ಪರಿಹಾರವನ್ನು ಶಾರುಖ್ ಖಾನ್ ಮತ್ತು ಬೈಜೂಸ್ ಸಂಸ್ಥೆ ಸಮಾನವಾಗಿ ಪಾವತಿಸುವಂತೆ ಆದೇಶ ನೀಡಲಾಗಿದೆ.