ಇಬ್ಬರು ಮಕ್ಕಳನ್ನು ಕೊಂದು ಟೆಕ್ಕಿ ದಂಪತಿ ಆತ್ಮಹತ್ಯೆ; ಡೆತ್ ನೋಟ್ ನಲ್ಲಿ ಏನಿತ್ತು, ದುರಂತ ನಿರ್ಧಾರಕ್ಕೆ ಕಾಣವೇನು?
ನ್ಯೂಸ್ ಆ್ಯರೋ: ಇಬ್ಬರು ಮಕ್ಕಳನ್ನು ಹತ್ಯೆ ಮಾಡಿ ದಂಪತಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಸದಾಶಿವ ನಗರದ ಆರ್.ಎಂ.ವಿ ಎರಡನೇ ಹಂತದ ಟೆಂಪಲ್ ರಸ್ತೆಯಲ್ಲಿ ನಡೆದಿದೆ.
ಪತಿ ಅನೂಪ್ (38), ರಾಖಿ(35), ಅನುಪ್ರಿಯಾ (5) ವರ್ಷ ಮತ್ತು ಪ್ರಿಯಾಂಶ್ (2) ಮೃತಪಟ್ಟಿದ್ದಾರೆ. ಅನೂಪ್ ಉತ್ತರ ಪ್ರದೇಶ ಮೂಲದವರಾಗಿದ್ದು ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಇಂದು ಬೆಳಗ್ಗೆ ಮನೆಗೆ ಕೆಲಸವರು ಬಂದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.
ರಾತ್ರಿ ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ ಬಳಿಕ ದಂಪತಿ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಸದಾಶಿವ ನಗರ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ಅನೂಪ್ ಮನೆಯಲ್ಲಿ ಮೂರು ಜನ ಕೆಲಸ ಮಾಡುತ್ತಿದ್ದರು. ಅನುಪ್ರಿಯಾಗೆ ಆರೋಗ್ಯ ಸಮಸ್ಯೆ ಇತ್ತು. ಈ ವಿಚಾರಕ್ಕೆ ದಂಪತಿ ಬಹಳ ಬೇಸರದಲ್ಲಿದ್ದರು.
ಇಂದು ಬೆಳಗ್ಗೆ 11 ಗಂಟೆಗೆ ಪಾಂಡಿಚೇರಿಗೆ ಹೋಗಲಿದ್ದೇವೆ. ಬೇಗ ಕೆಲಸಕ್ಕೆ ಬನ್ನಿ ಎಂದು ಕೆಲಸದವರಿಗೆ ಅನೂಪ್ ಹೇಳಿದ್ದರು. ಹೀಗಾಗಿ ಇಂದು ಬೆಳಗ್ಗೆ ಕೆಲಸವರು ಮನೆಗೆ ಬಂದಿದ್ದಾರೆ. ಭಾನುವಾರ ಸಹ ಪ್ಯಾಕಿಂಗ್ ಮಾಡಲು ಕೆಲಸದವರನ್ನು ಕರೆಸಿಕೊಂಡಿದ್ದರು.
ಮೂವರು ಕೆಲಸಗಾರರ ಪೈಕಿ ಇಬ್ಬರು ಅಡುಗೆಗೆ ನಿಯೋಜನೆಗೊಂಡಿದ್ದರೆ ಒಬ್ಬರು ಮಗು ನೋಡಿಕೊಳ್ಳಲು ಇದ್ದರು. ಮೂವರಿಗೂ ತಿಂಗಳಿಗೆ 15 ಸಾವಿರ ರೂ. ಸಂಬಳ ನೀಡುತ್ತಿದ್ದರು. ಟೆಕ್ಕಿ ಕುಟುಂಬ ಆರ್ಥಿಕವಾಗಿ ಸದೃಢವಾಗಿತ್ತು.
ಮೊದಲ ಮಗುವಿಗೆ ಮಾನಸಿಕ ತೊಂದರೆ ಇದ್ದ ಕಾರಣ ದಂಪತಿ ಬಹಳ ಕುಗ್ಗಿ ಹೋಗಿದ್ದರು. ನಿನ್ನೆ ರಾತ್ರಿ 10 ಗಂಟೆಯವರೆಗೂ ದಂಪತಿ ಖುಷಿಯಾಗಿಯೇ ಇದ್ದರು ಎಂದು ಕೆಲಸದವರು ತಿಳಿಸಿದ್ದಾರೆ.
ಇನ್ನು ಮಕ್ಕಳ ಸಾವಿಗೂ ಮುನ್ನ ಅನೂಪ್ ಕುಮಾರ್ ಡೆತ್ ನೋಟ್ ಬರೆದಿದ್ದಾರೆ ಎನ್ನಲಾಗಿದೆ. ಅದರಲ್ಲಿ ಕುಟುಂಬಸ್ಥರು ಸರಿಯಾಗಿ ನನ್ನನ್ನು ನೋಡುತ್ತಿರಲಿಲ್ಲ. ರಾಕೇಶ್ ಎಂಬ ಸಂಬಂಧಿ ಹಣ ಪಡೆದು ಮೋಸ ಮಾಡಿದ್ದಾನೆ ಎಂದು ಬರೆದಿದ್ದಾರೆ. ಮೊದಲನೇ ಮಗುವಿಗೆ ಬುದ್ಧಿ ಮಾಂದ್ಯತೆಯಿದೆ. ಈ ಮಗು ನೋಡಿಕೊಳ್ಳುವುದ್ರಲ್ಲೂ ಸಹ ತಮಗೆ ಮಾನಸಿಕ ಖಿನ್ನತೆ ಉಂಟಾಗಿದೆ. 2ನೇ ಮಗು ಆದರೂ ಸಹ ಯಾರೂ ತನ್ನನ್ನು ಮಾತಾಡಿಸಿಲ್ಲ. ಒಂದು ವಿಡಿಯೋ ಕಾಲ್ ಸಹ ಮಾಡಿಲ್ಲ. ಎಲ್ಲಿ ತನ್ನನ್ನು ಮಾತಾಡಿಸಿದ್ರೆ ಆಸ್ತಿ ಕೇಳ್ತಿವಿ ಎಂದು ಮಾತಾಡಿಲ್ವ. ತನ್ನ ತಂದೆ ಸರಿಯಾಗಿ ಮಾತಾಡಿಸುವುದಿಲ್ಲ. ಹೀಗಾಗಿ ಮನನೊಂದು ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಅನೂಪ್ ಕುಮಾರ್ ಅವರ ಡೆತ್ನೋಟ್ನಲ್ಲಿ ಉಲ್ಲೇಖವಾಗಿದೆ.
Leave a Comment