ಕೊಟ್ಟಾಯಂನ ಘಾಟ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಬಸ್ ಅಪಘಾತ; ದೊಡ್ಡ ಪ್ರಪಾತಕ್ಕೆ ಜಾರಿದ ಅಯ್ಯಪ್ಪ ಮಾಲಾಧಾರಿಗಳಿದ್ದ ಬಸ್
ನ್ಯೂಸ್ ಆ್ಯರೋ: ಕೇರಳದಲ್ಲಿ ಅಯ್ಯಪ್ಪ ಮಾಲಾಧಾರಿಗಳಿದ್ದ ಬಸ್ ಅಪಘಾತಕ್ಕೀಡಾಗಿದೆ. ಕೊಟ್ಟಾಯಂನ ಘಾಟ್ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ದೊಡ್ಡ ಪ್ರಪಾತದ ಕಡೆಗೆ ಜಾರಿದೆ. ಅದೃಷ್ಟವಶಾತ್ ರಸ್ತೆಯ ಪಕ್ಕ ಮರಗಳಿದ್ದ ಕಾರಣದಿಂದ ದೊಡ್ಡ ದುರಂತವೊಂದು ಸ್ವಲ್ಪದರಲ್ಲೇ ತಪ್ಪಿದೆ.
ಓಲ್ಡ್ ಹೈದರಾಬಾದ್ನ ನಿವಾಸಿಗಳು ಮಾಲೆ ಧರಿಸಿ ಬಸ್ನಲ್ಲಿ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಹೊರಟಿದ್ದರು. ಕೊಟ್ಟಾಯಂನಿಂದ ಶಬರಿಮಲೆಗೆ ಹೋಗುವಾಗ ಪಂಬಾ ನದಿಯಿಂದ 15 ಕಿಮೀ ದೂರದಲ್ಲಿ ಈ ಬಸ್ ಅಪಘಾತ ಸಂಭವಿಸಿದೆ.
ಹೈದರಾಬಾದ್ನಿಂದ 30 ಅಯ್ಯಪ್ಪ ಸ್ವಾಮಿಯ ಭಕ್ತರು ಈ ಬಸ್ನಲ್ಲಿ ಶಬರಿಮಲೆಗೆ ಹೊರಟಿದ್ದರು. ದುರಂತದಲ್ಲಿ ಬಸ್ ಚಾಲಕ ಜೀವ ಕಳೆದುಕೊಂಡಿದ್ದಾರೆ. ಬಸ್ನಲ್ಲಿದ್ದ 30 ಅಯ್ಯಪ್ಪ ಮಾಲಾಧಾರಿಗಳಿಗೆ ಗಾಯಗಳಾಗಿದೆ. ಗಾಯಾಳುಗಳಿಗೆ ಕೊಟ್ಟಾಯಂ ಮೆಡಿಕಲ್ ಕಾಲೇಜಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಈ ಘಟನೆಯ ಬಳಿಕ ಕೇಂದ್ರ ಸಚಿವರಾದ ಬಂಡಿ ಸಂಜಯ್ ಕುಮಾರ್ ಅವರು ಕೂಡಲೇ ಕೊಟ್ಟಾಯಂ ಡಿಸಿ ಜೊತೆ ಮಾತನಾಡಿದ್ದಾರೆ. ಜಿಲ್ಲಾಡಳಿತ ಅಪಘಾತದಲ್ಲಿ ಗಾಯಗೊಂಡ ಭಕ್ತರಿಗೆ ಸೂಕ್ತ ಚಿಕಿತ್ಸೆ ಹಾಗೂ ಅಯ್ಯಪ್ಪ ಸ್ವಾಮಿಯ ವಿಶೇಷ ದರ್ಶನ ಪಡೆಯಲು ಅವಕಾಶ ನೀಡಿದ್ದಾರೆ. ಬಸ್ ಚಾಲಕನ ಮೃತದೇಹವನ್ನು ಆ್ಯಂಬುಲೆನ್ಸ್ನಲ್ಲಿ ಹೈದರಾಬಾದ್ಗೆ ಸಾಗಿಸುವ ವ್ಯವಸ್ಥೆ ಕೂಡ ಮಾಡಿದ್ದಾರೆ. ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್ ಅವರ ಈ ಸಹಾಯಕ್ಕೆ ಅಯ್ಯಪ್ಪನ ಭಕ್ತರು ವಿಶೇಷ ಧನ್ಯವಾದ ತಿಳಿಸಿದ್ದಾರೆ.
Leave a Comment