ʼಭಯೋತ್ಪಾದಕ ಎಸ್.ಮಾರನ್ ಅವರನ್ನು ಬಿಡುಗಡೆ ಮಾಡಿʼ; ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ

Airport
Spread the love

ನ್ಯೂಸ್ ಆ್ಯರೋ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಬಂದಿದೆ. ನವೆಂಬರ್ 30 ರಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೊದಲ ಬಾರಿಗೆ ಬಾಂಬ್ ಬೆದರಿಕೆ ಬಂದಿತ್ತು. ರಾಮೇಶ್ವರಂ ಕೆಫೆ ಸ್ಫೋಟದ ಮಾದರಿಯಲ್ಲಿ ಸ್ಫೋಟಿಸುವುದಾಗಿ ಬಾಂಬ್ ಬೆದರಿಕೆ ಬಂದಿತ್ತು. ಈಗ ಬಂದಿರುವ ಇ-ಮೇಲ್ ಮೂಲಕ ಕಳುಹಿಸಲಾದ ಸಂದೇಶದಲ್ಲಿ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಡಲಾಗಿದೆ ಎಂದು ಹೇಳಲಾಗಿದೆ.

ಬೆಳಗ್ಗೆ 10 ಗಂಟೆಗೆ ಅಕ್ರಂ ವೈಕರ್ ಎಂಬ ಹೆಸರಿನ ಐಡಿಯಿಂದ ಇ-ಮೇಲ್ ಬಂದಿದೆ. ಡ್ರಗ್ ಕಿಂಗ್‌ಪಿನ್ ಜಾಫರ್ ಸಾದಿಕ್ ಮತ್ತು ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರ ಪತ್ನಿ ಕೃತಿಗಾ ಉದಯನಿಧಿ ವಿರುದ್ಧದ ಪ್ರಕರಣವನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.

ಈಗ ತಿರುಚ್ಚಿ ಸೆಂಟ್ರಲ್ ಜೈಲಿನಲ್ಲಿ ಬಂಧಿಯಾಗಿರುವ ಟಿಎನ್‌ಎಲ್‌ಎ ಭಯೋತ್ಪಾದಕ ಗುಂಪಿನ ಮುಖ್ಯಸ್ಥ ಎಸ್.ಮಾರನ್ ಅವರನ್ನು ಬಿಡುಗಡೆ ಮಾಡುವಂತೆಯೂ ಇ-ಮೇಲ್ ಒತ್ತಾಯಿಸಿದೆ. ಬೆದರಿಕೆಯ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಅಧಿಕಾರಿಯೊಬ್ಬರು ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ತಮಿಳುನಾಡು ಡಿಜಿಪಿಯ ಪುತ್ರಿ ದೌದಿ ಜೀವಾಲ್‌ ಅವರನ್ನು ಬಳಸಿಕೊಂಡು ಪಾಕಿಸ್ತಾನದ ಐಎಸ್‌ಐ ನಡೆಸಿದೆ ಎನ್ನಲಾದ 2006ರ ರಾಮೇಶ್ವರಂ ಕೆಫೆ ಸ್ಫೋಟದ ಬಗ್ಗೆಯೂ ಇಮೇಲ್‌ನಲ್ಲಿ ಉಲ್ಲೇಖಗಳಿವೆ. ಅಕ್ಟೋಬರ್ 25 ರಂದು ತಿರುಪತಿಯ ಎರಡು ಪ್ರಸಿದ್ಧ ಹೋಟೆಲ್‌ಗಳಿಗೆ ಬೆದರಿಕೆ ಇಮೇಲ್ ಕಳುಹಿಸಲಾದ ಘಟನೆಯ ಬೆನ್ನಲ್ಲೇ ಮಂಗಳೂರು ವಿಮಾನ ನಿಲ್ದಾಣಕ್ಕೆ ಈ ಬಾಂಬ್ ಬೆದರಿಕೆ ಬಂದಿದೆ.

ಹಿಂದಿನ ಬೆದರಿಕೆಯಲ್ಲಿ ಜಾಫರ್ ಸಾದಿಕ್ ಮತ್ತು ಕೃತಿಗಾ ಉದಯನಿಧಿ ಹೆಸರು ಕೂಡ ಉಲ್ಲೇಖಿಸಲ್ಪಟ್ಟಿದ್ದು, ಇದಕ್ಕೆ ಕಾರಣವಾದ ವ್ಯಕ್ತಿಗಳು ತಮಿಳುನಾಡಿಗೆ ಸಂಪರ್ಕ ಹೊಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಾಂಬ್ ದಾಳಿಗೆ ಗುರಿಯಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ, ವಿಮಾನ ನಿಲ್ದಾಣಕ್ಕೆ ಎರಡು ಬಾರಿ ಹುಸಿ ಬಾಂಬ್ ಕರೆ ಬಂದಿತ್ತು.

Leave a Comment

Leave a Reply

Your email address will not be published. Required fields are marked *

error: Content is protected !!