ಕುರಿ ಮೇಯಿಸುತ್ತಲೇ ಮಹಾತ್ಮನಾಗಿದ್ದ ಬಿರ್ಸಾ ಮುಂಡಾ; ಆದರೆ ಆತ ಬದುಕಿದ್ದು ಕೇವಲ 25 ವರ್ಷ
ನ್ಯೂಸ್ ಆ್ಯರೋ: ಇಂದಿಗೂ ಬಿರ್ಸಾ ಮುಂಡಾ ಅವರಿಗೆ ಜಾರ್ಖಂಡ್ ಸೇರಿದಂತೆ ಅನೇಕ ರಾಜ್ಯಗಳಲ್ಲಿ ದೇವರ ಸ್ಥಾನವನ್ನು ನೀಡಲಾಗಿದೆ. ಅತ್ಯಂತ ಕಿರಿಯ ವಯಸ್ಸಿನಲ್ಲೇ ಬುಡಕಟ್ಟುಗಳ ಹಕ್ಕು ಮತ್ತು ದೇಶದ ಸ್ವಾತಂತ್ರ್ಯದಲ್ಲಿ ಅನುಪಮ ಪಾತ್ರ ವಹಿಸಿದ್ದ ಬಿರ್ಸಾ ಮುಂಡಾ ಅವರು, ಸಣ್ಣ ಹಳ್ಳಿಯಲ್ಲಿ ಕುರಿ ಮೇಯಿಸುತ್ತಲೇ ಜಾರ್ಖಂಡ್ನ ದೇವರು ಎಂದು ಹೇಗೆ ಕರೆಯಲ್ಪಟ್ಟರು. ಇವರ ಕುರಿತು ಮತ್ತಷ್ಟು ಮಾಹಿತಿ ಇಲ್ಲಿದೆ. . .
ಕುರಿ ಮೇಯಿಸುವಿಕೆಯಿಂದ ಕ್ರಾಂತಿಯತ್ತ ಪಯಣ
ಬಿರ್ಸಾ ಮುಂಡಾ 1875ರ ನವೆಂಬರ್ 15ರಂದು ಜಾರ್ಖಂಡ್ನ ಉಲಿಹಾಟು ಎಂಬ ಸಣ್ಣ ಹಳ್ಳಿಯಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದರು. 25 ವರ್ಷ ವಯಸ್ಸಿನ ಬಿರ್ಸಾ ಮುಂಡಾ ಅವರು 9 ಜೂನ್ 1900 ರಂದು ರಾಂಚಿ ಕೇಂದ್ರ ಕಾರಾಗೃಹದಲ್ಲಿ ಬ್ರಿಟಿಷ್ ಅಧಿಕಾರಿಗಳ ವಶದಲ್ಲಿದ್ದಾಗ ತೀವ್ರ ಚಿತ್ರಹಿಂಸೆಯನ್ನು ಅನುಭವಿಸಿ ನಿಧನರಾಗುತ್ತಾರೆ.
.ಬಿರ್ಸಾ ಮುಂಡಾ ಅವರ ಪೋಷಕರು ನಾಗ್ಪುರ ಪ್ರಸ್ಥಭೂಮಿ ಪ್ರದೇಶದ ಮುಂಡಾ ಬುಡಕಟ್ಟಿನಿಂದ ಬಂದವರು. ಕಿತ್ತು ತಿನ್ನುವ ತೀವ್ರ ಬಡತನದಿಂದ ಅವರ ಕುಟುಂಬದ ಸ್ಥಿತಿ ತುಂಬಾ ಕೆಟ್ಟದಾಗಿತ್ತು. ಅವರ ತಂದೆ-ತಾಯಿ ಇಬ್ಬರೂ ಬೇರೆ ಹಳ್ಳಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ತನ್ನ ಮಗನನ್ನು ನೋಡಿಕೊಳ್ಳಲು ಅವರ ತಾಯಿಯ ಚಿಕ್ಕಪ್ಪನ ಬಳಿಗೆ ಕಳುಹಿಸಿದರು. ಅಲ್ಲಿ ಕುರಿ ಕಾಯುವುದರ ಜೊತೆ ಜೊತೆಗೆ ಗಣಿತ ಮತ್ತು ವರ್ಣಮಾಲೆಯ ಶಿಕ್ಷಣವನ್ನು ಬಿರ್ಸಾ ಮುಂಡಾ ಪಡೆದರು.
ಸ್ವಲ್ಪ ಸಮಯದ ನಂತರ, ಬಿರ್ಸಾ ಮುಂಡಾ ಅವರನ್ನು ಮಿಷನರಿ ಶಾಲೆಗೆ ಸೇರಿಸಲಾಯಿತು. ವರದಿಯ ಪ್ರಕಾರ, ಅವರ ಕುಟುಂಬವು ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುತ್ತಿತ್ತು. ಅವರ ತಂದೆ ಕೂಡ ಧಾರ್ಮಿಕ ಬೋಧಕರಾಗಿದ್ದರು. ನಂತರ ಬಿರ್ಸಾ ಮುಂಡಾ ಕೂಡ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು, ನಂತರ ದಾವೂದ್ ಮುಂಡಾ ಎಂದು ಹೆಸರಿನ ಮರುನಾಮಕರಣ ಮಾಡಲಾಯಿತು. ಸ್ವಲ್ಪ ಸಮಯದ ನಂತರ, ಅವರು ಕ್ರಿಶ್ಚಿಯನ್ ಬೋಧಕರ ಸಂಪರ್ಕಕ್ಕೆ ಬಂದರು. ಆದರೆ ಅಲ್ಲಿ ಯಾವುದೂ ಸರಿ ಕಾಣದೇ ಇದ್ದಾಗ ಬಿರ್ಸಾ ಮುಂಡಾ ಪುನಃ ತಮ್ಮ ಮೂಲ ಬುಡಕಟ್ಟು ಸಮುದಾಯಕ್ಕೆ ಮರಳಲು ನಿರ್ಧರಿಸಿದರು. ನಂತರ ಅವರು ಮುಂಡಾ ಸಮುದಾಯದ ಜನರನ್ನು ಸಂಘಟಿಸುವ ಮೂಲಕ ಬುಡಕಟ್ಟು ಸಮಾಜದಲ್ಲಿ ಸುಧಾರಣೆಗಳಿಗಾಗಿ ಕೆಲಸ ಮಾಡಿದರು.
ರಾಜಕೀಯ ಶೋಷಣೆಯ ವಿರುದ್ಧ ಬಿರ್ಸಾ ಮುಂಡಾ ಜನರಲ್ಲಿ ಜಾಗೃತಿ ಮೂಡಿಸಿದರು. ಈ ರೀತಿಯಾಗಿ, 1894 ರಲ್ಲಿ, ಅವರು ಮೊದಲ ಬಾರಿಗೆ ಚಳುವಳಿಯನ್ನು ಪ್ರವೇಶಿಸಿದರು. 1894 ರಲ್ಲಿ ಬುಡಕಟ್ಟು ಜನಾಂಗದವರ ಹಕ್ಕುಗಳಿಗಾಗಿ ಆಂದೋಲನವನ್ನು ಪ್ರಾರಂಭಿಸಿದ ಬಿರ್ಸಾ ಮುಂಡಾ ಅವರು ಸರ್ದಾರ್ ಚಳವಳಿಯನ್ನು ಸೇರಿದರು. ಆಂದೋಲನದ ಸಮಯದಲ್ಲಿ ಅವರು ಈ ಚಳವಳಿಯನ್ನು ಕ್ರಿಶ್ಚಿಯನ್ನರು ಅಥವಾ ಬುಡಕಟ್ಟು ಜನಾಂಗದವರು ಬೆಂಬಲಿಸುತ್ತಿಲ್ಲ ಎಂದು ಭಾವಿಸಿದರು. ಹೀಗಾಗಿ ಅವರು ಹೊಸ ಆಧ್ಯಾತ್ಮಿಕ ಸಂಸ್ಥೆ ‘ಬಿರ್ಸೇಟ್’ ಅನ್ನು ಪ್ರಾರಂಭಿಸಿದರು. ಆಗ ಅವರ ಏಕಮಾತ್ರ ಗುರಿ ಏನಿತ್ತೆಂದರೆ ಬುಡಕಟ್ಟುಗಳನ್ನು ಜಾಗೃತಗೊಳಿಸುವುದು.
ಬಿರ್ಸಾ ಮುಂಡಾ ಅಬು ದಿಶೋಮ್ ಅಬು ರಾಜ್ ಅಂದರೆ ‘ಅಬುವಾ ದಿಶೋಮ್’ ಅಂದರೆ ನಮ್ಮ ದೇಶ ಮತ್ತು ‘ಅಬುವಾ ರಾಜ್’ ಅಂದರೆ ನಮ್ಮ ರಾಜ ಎಂಬ ಘೋಷಣೆಗಳನ್ನು ಸ್ವಾತಂತ್ರ್ಯದ ಕರೆಯಾಗಿ ಬಳಸಿದರು. ಒಂದು ರೀತಿಯಲ್ಲಿ ಈ ಘೋಷಣೆಯು ಆದಿವಾಸಿಗಳ ಬೇಡಿಕೆಗಳ ಘೋಷಣೆಯಾಗಿ ಮಾರ್ಪಟ್ಟಿತ್ತು. ಆದಿವಾಸಿಗಳು ಬಾಹ್ಯ ಆಡಳಿತ ಅಥವಾ ಯಾವುದೇ ರೀತಿಯ ಶೋಷಣೆಯನ್ನು ಒಪ್ಪಿಕೊಳ್ಳದೆ, ತಮ್ಮ ಆಳ್ವಿಕೆಯಲ್ಲಿ ಸ್ವತಂತ್ರ ಮತ್ತು ಸ್ವಾಭಿಮಾನದ ಜೀವನ ನಡೆಸಬೇಕು ಎಂಬುದು ಬಿರ್ಸಾ ಮುಂಡಾ ಅವರ ಸಂದೇಶವಾಗಿತ್ತು.
ಬಿರ್ಸಾ ಮುಂಡಾ ಮಹಾತ್ಮರಾಗಿದ್ದು ಹೇಗೆ?
ವರದಿಯ ಪ್ರಕಾರ, ಅವರು ಬಿರ್ಸೈಟ್ ಧರ್ಮವನ್ನು ಸ್ಥಾಪಿಸಿದರು. ಇದರಲ್ಲಿ ಪ್ರಪ್ರಥಮ ಬಾರಿಗೆ 12 ಮಂದಿ ಶಿಷ್ಯರಿಗೆ ಈ ಧರ್ಮ ಪ್ರಚಾರದ ಜವಾಬ್ದಾರಿ ನೀಡಿದರು. ಈ ಸಮಯದಲ್ಲಿ ಅವರು ಧಾರ್ಮಿಕ ಪುಸ್ತಕವನ್ನು ತಮ್ಮ ಮುಖ್ಯ ಶಿಷ್ಯ ಸೋಮ ಮುಂಡಾ ಅವರಿಗೆ ಹಸ್ತಾಂತರಿಸಿದರು. ಈ ಮೂಲಕ ಅವರು 1894-95ರ ನಡುವೆ ಬಿರ್ಸಾಯಿ ಧರ್ಮವನ್ನು ಸ್ಥಾಪಿಸಿದ್ದರು ಎಂದು ಮಾಧ್ಯಮ ವರದಿಯಲ್ಲಿ ಹೇಳಲಾಗಿದೆ. ಇಂದು, ಲಕ್ಷಾಂತರ ಜನರು ಬಿರ್ಸಾ ಅವರನ್ನು ದೇವರೆಂದು ಪರಿಗಣಿಸುತ್ತಾರೆ ಮತ್ತು ಸಾವಿರಾರು ಸಂಖ್ಯೆಯಲ್ಲಿ ಅವರ ಧರ್ಮದ ಅನುಯಾಯಿಗಳು ಇದ್ದಾರೆ. ಈ ಧರ್ಮವು ವಿಶೇಷವಾಗಿ ಖುಂತಿ, ಸಿಮ್ಡೆಗಾ ಮತ್ತು ಚೈಬಾಸಾ ಜಿಲ್ಲೆಗಳಲ್ಲಿ ಕಂಡುಬರುತ್ತದೆ.
ಇಂದು, ಬಿರ್ಸಾ ಮುಂಡಾ ಅವರನ್ನು ಬುಡಕಟ್ಟು ಜನಾಂಗದ ಮಹಾನ್ ನಾಯಕ ಎಂದು ನೆನಪಿಸಿಕೊಳ್ಳಲಾಗುತ್ತದೆ , ಅವರ ಕ್ರಾಂತಿಯ ಮೂಲಕ ಬುಡಕಟ್ಟು ಜನಾಂಗದವರ ಹಕ್ಕುಗಳು ಮತ್ತು ಸುಧಾರಣೆಗಳಿಗಾಗಿ ಹೋರಾಡಿದ ಮಹಾನ್ ನಾಯಕ ಬಿರ್ಸಾ ಮುಂಡಾ. ಇಡೀ ಬುಡಕಟ್ಟು ಸಮಾಜವು ಬ್ರಿಟಿಷರ, ಭೂಮಾಲೀಕರ, ಜಾಗೀರದಾರರ ಶೋಷಣೆಯಲ್ಲಿ ದಮನಗೊಂಡಾಗ, ಆ ಸಮಯದಲ್ಲಿ ಅವರು ಇಡೀ ಸಮಾಜವನ್ನು ಮೇಲೆತ್ತಿ ಹೊಸ ಬದುಕು ಕಟ್ಟುವ ಕೆಲಸ ಮಾಡಿದರು.
ಬಿರ್ಸಾ ಮುಂಡಾ ಅವರ ಹೋರಾಟದ ನೆನಪಿಗೆ ಕೇಂದ್ರ ಸರ್ಕಾರವು ದೆಹಲಿಯ ಹೊಸ ಸಂಸತ್ ಭವನದ ಎದುರು ಶುಕ್ರವಾರ ಮುಂಡಾ ಅವರ ಪ್ರತಿಮೆ ಸ್ಥಾಪಿಸಿದ್ದಾರೆ. ಇದನ್ನು ಉದ್ಘಾಟಿಸಿ ಗೌರವವನ್ನು ಸಲ್ಲಿಸಲಾಯಿತು.
ಇನ್ನು ಇಂದು ದೇಶದ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಲು ನವೆಂಬರ್ ೧೫ ರಿಂದ ನವೆಂಬರ್ 26 ,2024 ರವರೆಗೆ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಪ್ರಧಾನಿ ನರೇಂದ್ರ ಮೋದಿ ಜಮುಯಿ, ಬಿಹಾರದಲ್ಲಿ ಬುಡಕಟ್ಟು ಹೆಮ್ಮೆಯ ದಿನವನ್ನು ಉದ್ಘಾಟಿಸಲಿದ್ದಾರೆ, ಇದು ಈ ಮಹತ್ವದ ಸಂದರ್ಭದ ರಾಷ್ಟ್ರೀಯ ಕಾರ್ಯಕ್ರಮಗಳ ಆರಂಭವಾಗಲಿದೆ. ಇದಲ್ಲದೆ, ಬಿರ್ಸಾ ಮುಂಡಾ ಅವರ 150ನೇ ಜನ್ಮದಿನಾಚರಣೆಯ ಐತಿಹಾಸಿಕತೆಯನ್ನು ಉಳಿಸಿಕೊಳ್ಳಲು ಸರ್ಕಾರವು 2025ನೇ ವರ್ಷವನ್ನು “ಬುಡಕಟ್ಟು ಹೆಮ್ಮೆಯ ವರ್ಷ” ಎಂದು ಘೋಷಿಸಿದೆ.
Leave a Comment