ಸಹ ಸ್ಪರ್ಧಿಗಳ ನೆಮ್ಮದಿ ಕೆಡಿಸಿದ ಜಗದೀಶ್ ‘ಮೈಂಡ್ ಗೇಮ್’: ಎಲಿಮಿನೇಟ್ ಬಲೆಯಿಂದ ಪಾರಾಗ್ತಾರಾ “ಸಿಂಗಲ್ ಸಿಂಹ”..!?

ನ್ಯೂಸ್ ಆ್ಯರೋ : ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭವಾಗಿ ವಾರವಾಗುತ್ತ ಬಂತು. ಮೊದಲ ವಾರದಲ್ಲಿಯೇ ಸಾಕು ಸಾಕೆನಿಸುವಷ್ಟು ಜಗಳ, ಕಾದಾಟ, ವಾಗ್ವಾದಗಳಾಗಿವೆ. ಅಲ್ಲಿ ನಡೆದ ಬಹುತೇಕ ಜಗಳಗಳಲ್ಲಿ ಮುಖ್ಯ ಪಾತ್ರ ವಹಿಸಿರುವುದು ಲಾಯರ್ ಜಗದೀಶ್. ಜಗದೀಶ್ ಜಗಳ ಆಡದಿರುವ ಸ್ಪರ್ಧಿಯೇ ಇಲ್ಲ ಎನ್ನಬಹುದೇನೊ. ಯಾರನ್ನೂ ಬಿಡದೆ ಪ್ರತಿಯೊಬ್ಬ ಸ್ಪರ್ಧಿಯೊಂದಿಗೂ ಜಗದೀಶ್ ಜಗಳವಾಡಿದ್ದಾರೆ. ಅವರ ಜಗಳದ ಹಿಂದಿನ ಮರ್ಮ ಏನು ಎಂಬುದು ಸ್ವತಃ ಸ್ಪರ್ಧಿಗಳಿಗೆ ತಿಳಿಯುತ್ತಿಲ್ಲ.
ನರಕವಾಸಿಗಳಿಗೆ ಆರಂಭದಿಂದಲೇ ನೀರು, ಮೊಟ್ಟೆ ನೀಡಿ, ಅವರ ಕೆಲಸಗಳನ್ನು ಇವರೇ ಮಾಡಿಕೊಟ್ಟು ಸಹಾನುಭೂತಿ ತೋರಿದ ಜಗದೀಶ್, ಸ್ವರ್ಗವಾಸಿಗಳ ಕೆಂಗಣ್ಣಿಗೆ ಗುರಿಯಾದರು. ಅಷ್ಟೆ ಅಲ್ಲ, ಸ್ವರ್ಗವಾಸಿಗಳಿಗೆ ಲಭ್ಯವಿದ್ದ ಸ್ವರ್ಗದ ಆಹಾರವೂ ಸಿಗದಂತೆ ಮಾಡಿದರು. ಇದರಿಂದಾಗಿ ಬಿಗ್ ಬಾಸ್ ಆದೇಶದವರೆಗೆ ನರಕವಾಸಿಗಳು ತಿನ್ನುವ ಆಹಾರವನ್ನೇ ಸ್ವರ್ಗವಾಸಿಗಳು ತಿನ್ನುವ ಶಿಕ್ಷೆ ಅನುಭವಿಸುವಂತಾಯಿತು.
ಅತ್ತ ನರಕವಾಸಿ ಮಾನಸ ಸಂತೋಷ್ ಅವರೊಂದಿಗೆ ಜಗಳವಾಡಿದ್ದರಿಂದ ಸ್ವರ್ಗವಾಸಿಗಳೂ ಸೇರಿ ಜಗದೀಶ್ ವಿರುದ್ಧ ಎಲ್ಲ ಸ್ಪರ್ಧಿಗಳು ತಿರುಗಿಬಿದ್ದರು. ಏಕಾಂಗಿಯಾಗಿ ಎಲ್ಲರನ್ನೂ ಎದುರು ಹಾಕಿಕೊಳ್ಳುತ್ತಿರುವ ಜಗದೀಶ್, ಬಿಗ್ ಬಾಸ್ ಮನೆಯಲ್ಲಿ ‘ಮೈಂಡ್ ಗೇಮ್’ ಆಡುತ್ತಿರುವುದಾಗಿ ಸ್ವತಃ ಬಿಗ್ ಬಾಸ್ ಬಳಿಯೇ ಹೇಳಿಕೊಂಡಿದ್ದಾರೆ. ಅಲ್ಲದೆ ಗೌತಮಿ ಜಾದವ್ ಬಳಿಯೂ ಈ ಬಗ್ಗೆ ಸುಳಿವು ನೀಡಿದ್ದಾರೆ. ‘ನರಕದಲ್ಲಿ ಗಿಂಡೋದು, ಸ್ವರ್ಗದಲ್ಲಿ ತೊಟ್ಟಿಲು ತೂಗೋದು…ಎರಡೂ ಕಡೆ ನಂದೇ ಆಟ’ ಎಂದು ನೇರವಾಗಿಯೇ ಗೌತಮಿ ಬಳಿ ಹೇಳಿದ್ದಾರೆ.
ಇಷ್ಟಾದರೂ ಸರ್ಗ-ನರಕವಾಸಿಗಳಿಗೆ ಜಗದೀಶ್ ಆಟ ನಿತ್ಯ ತಲೆನೋವೇ. ಇತ್ತ ಸ್ವರ್ಗದವರ ಪ್ಲಾನಿಂಗ್ ಗಳನ್ನು ನರಕನಿವಾಸಿಗಳ ಬಳಿ ಹೋಗಿ ತಿಳಿಸುತ್ತಾರೆ. ನರಕದವರ ಬಗ್ಗೆ ಸ್ವರ್ಗ ನಿವಾಸಿಗಳ ಬಳಿ ಹೋಗಿ ಹೇಳುತ್ತಾರೆ. ಹೀಗೆ ಮಾಡುತ್ತಲೇ ಎಲ್ಲರಲ್ಲಿಯೂ ಜಗಳ ತೆಗೆಯುತ್ತಾರೆ. ಅತ್ತ ನರಕನಿವಾಸಿಗಳು ಜಗದೀಶ್ ಅವರನ್ನು ಪೂರ್ತಿ ನಂಬುವ ಸ್ಥಿತಿಯಲ್ಲಿಯೂ ಇಲ್ಲದೆ ತೊಳಲಾಡಿದರೆ, ಇತ್ತ ಸ್ವರ್ಗ ನಿವಾಸಿಗಳು ಅವರ ಮಾತನ್ನು ನಿರ್ಲಕ್ಷ್ಯಿಸಲಾಗದ ಸಂದಿಗ್ಧ ಸ್ಥಿತಿಯಲ್ಲಿದ್ದಾರೆ.
ಬಿಗ್ ಬಾಸ್ ಕೊಟ್ಟ ಪ್ರತಿ ಟಾಸ್ಕ್ ನ ವಿಚಾರದಲ್ಲಿಯೂ ಜಗದೀಶ್ ಜಗಳ ಇದ್ದದ್ದೇ. ಯಾವುದಾದರೊಂದು ತಕರಾರೆತ್ತಿ ಜಗಳ ಆಡುತ್ತಾರೆ. ಮೊದಲ ಕ್ಯಾಪ್ಟನ್ ಆಯ್ಕೆ ವಿಚಾರದಲ್ಲಿಯೂ ಜಗಳವಾಡಿ ಬಿಗ್ ಬಾಸ್ ಮನೆ ತೊರೆಯುವುದಾಗಿ ತಿಳಿಸಿ ಬ್ಯಾಗ್ ಪ್ಯಾಕ್ ಮಾಡಲು ತಿಳಿಸಿದ್ದರು. ಬಳಿಕ ಬಿಗ್ ಬಾಸ್ ಅವರನ್ನು ಕನ್ಫೆಶನ್ ರೂಂಗೆ ಕರೆದು, ಚರ್ಚಿಸಿದ ಬಳಿಕ ಮರಳಿದ್ದಾರೆ.
ಒಟ್ಟಿನಲ್ಲಿ ಬಿಗ್ ಬಾಸ್ ಮನೆಯೊಳಗೆ ಜಗದೀಶ್ ಒಂಟಿ ಸಲಗದಂತೆ ಆಡುತ್ತಿದ್ದಾರೆ. ‘ಸಿಂಹ ಸಿಂಗಲ್ಲಾಗೇ ಇರೋದು’ ಎನ್ನುತ್ತ ಆಗಾಗ ಪಂಚಿಂಗ್ ಡೈಲಾಗ್ ಹೊಡೆಯುತ್ತಲೇ ಮುನ್ನುಗ್ಗುವ ಜಗದೀಶ್ ಬಿಗ್ ಬಾಸ್ ನ ಅತ್ಯಂತ ಎಂಟರ್ ಟೇನಿಂಗ್ ಸ್ಪರ್ಧಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಮಿನೇಷನ್ ಪಟ್ಟಿಯಲ್ಲಿಯೂ ಕಾಣಿಸಿಕೊಂಡಿರುವ ಲಾಯರ್ ಜಗದೀಶ್ ಅವರನ್ನು ಬಿಗ್ ಬಾಸ್ ಈ ವಾರ ಉಳಿಸುತ್ತದೆಯೇ ಅಥವಾ ಮನೆಯಿಂದ ಹೊರಗೆ ಕಳಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಒಂದಂತೂ ನಿಜ, ಜಗದೀಶ್ ಹೊರಹೋದರೆ ಬಿಗ್ ಬಾಸ್ ಮನೆ ತನ್ನ ಕಳೆಯನ್ನು ಕಳೆದುಕೊಳ್ಳುವುದಂತೂ ಖಚಿತ.
Leave a Comment