ಹಾವಿನ ತಲೆ ಕಚ್ಚಿ ತುಂಡರಿಸಿ ರೀಲ್ಸ್ ಮಾಡಿದ ಪಾಪಿಗಳು -ಸೋಶಿಯಲ್ ಮೀಡಿಯಾದಲ್ಲಿ ಮಿಂಚಲು ಹೀಗೆಲ್ಲ ಮಾಡ್ತಾರಾ? ಮೂವರು ಅರೆಸ್ಟ್..!!
- ವೈರಲ್ ನ್ಯೂಸ್
- April 7, 2023
- No Comment
- 351
ನ್ಯೂಸ್ ಆ್ಯರೋ : ಹಾವುಗಳು ಎಂದರೆ ಮನುಷ್ಯ ಕೊಂಚ ಹಿಂಜರಿಯುತ್ತಾನೆ ಕಾರಣ ಅವುಗಳು ವಿಷಕಾರಿ ಎಂದು. ಆದಾಗ್ಯೂ ಆಗೊಮ್ಮೆ, ಈಗೊಮ್ಮೆ ಹಾವುಗಳು ಕಚ್ಚಿ ಮನುಷ್ಯ ಸಾಯುವ ಸುದ್ದಿಯನ್ನು ಕೇಳುತ್ತಲೇ ಇರುತ್ತೇವೆ. ಆದರೆ ಮನುಷ್ಯನೇ ಹಾವನ್ನು ಕಚ್ಚಿ ಕೊಲ್ಲುವುದನ್ನು ಎಂದಾದರೂ ಕೇಳಿದ್ದೀರಾ. ಕೌತುಕವಾದರೂ ಇದು ಸತ್ಯ ಸಂಗತಿ. ತಮಿಳುನಾಡು ಮೂಲದ ಯುವಕನೊಬ್ಬ ತನಗೆ ಕಚ್ಚಿದ ಹಾವಿನ ಮೇಲೆ ಸೇಡು ತೀರಿಸಿಕೊಳ್ಳಲು, ಹಾವಿನ ತಲೆಯನ್ನು ಕಚ್ಚಿ ತುಂಡರಿಸಿ ವಿಕೃತಿ ಮೆರೆದಿದ್ದಾನೆ.
ಇಷ್ಟಕ್ಕೇ ಸುಮ್ಮನಾಗದ ಆ ಯುವಕ ಮತ್ತು ಆತನ ಗೆಳೆಯರು ಈ ವಿಕೃತಿಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಈ ಘಟನೆ ತಮಿಳುನಾಡಿನ ಅರಕ್ಕೊಣಂನಲ್ಲಿ ನಡೆದಿದ್ದು, ಇದನ್ನು ಕಂಡವರೆಲ್ಲ ಬೆಚ್ಚಿ ಬಿದ್ದಿದ್ದಾರೆ. ಈ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಜೀವಂತ ಹಾವನ್ನೇ ಕಚ್ಚಿ ಕೊಂದರು!
ಈ ವಿಕೃತ ಘಟನೆ ನಡೆದಿರುವುದು ತಮಿಳುನಾಡಿನ ಅರಕ್ಕೊಣಂನಲ್ಲಿ. ವರದಿಗಳ ಪ್ರಕಾರ, ಅಲ್ಲಿನ ನಿವಾಸಿಗಳಾದ ಮೋಹನ್, ಸೂರ್ಯ ಮತ್ತು ಸಂತೋಷ್ ಎಂಬ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಯುವಕನೊಬ್ಬ ಜೀವಂತ ಹಾವಿನ ತಲೆಯನ್ನು ಕಚ್ಚುತ್ತಿದ್ದು, ಹಾವು ವಿಲವಿಲ ಒದ್ದಾಡುತ್ತಿದೆ. ಮತ್ತಿಬ್ಬರು ಸ್ನೇಹಿತರು ಹಾವಿನ ತಲೆ ತುಂಡರಿಸು ಎನ್ನುತ್ತಿದ್ದಾರೆ. ಈ ಮೂವರು ಹಾವಿಗೆ ಚಿತ್ರಹಿಂಸೆ ನೀಡುತ್ತಿದ್ದು, ಅದನ್ನು ವಿಡಿಯೋ ಮಾಡಿದ್ದಾರೆ. ಇದೇ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.
ಹಾವಿನ ಮೇಲೆ ಸೇಡು ತೀರಿಸಿಕೊಂಡ..!
ಹಾವಿನ ತಲೆಯನ್ನು ಕಚ್ಚಿ ತುಂಡರಿಸುವ ಮುನ್ನ ಹಾವನ್ನು ಹಿಡಿದುಕೊಂಡ ಯುವಕ ಮೋಹನ್ ‘ಈ ಹಾವು ನನಗೆ ಕಚ್ಚಿದೆ, ಆದ್ದರಿಂದ ಇದರ ಮೇಲೆ ನಾನು ಸೇಡು ತೀರಿಸಿಕೊಳ್ಳುತ್ತಿದ್ದೇನೆ’ ಎಂದಿದ್ದಾನೆ. ಅನಂತರ ಹಾವನ್ನು ನರ ರಾಕ್ಷಸನಂತೆ ಕಚ್ಚಿ ಕೊಂದಿದ್ದಾನೆ. ಇದನ್ನು ಆತನ ಇನ್ನಿಬ್ಬರು ಸ್ನೇಹಿತರು ವಿಡಿಯೋ ಮಾಡಿದ್ದಾರೆ.
ವಿಡಿಯೋ ವೈರಲ್, ಯುವಕರು ಜೈಲಿಗೆ
ಹಾವನ್ನು ಹಿಂಸಿಸಿ ಕೊಂದ ಘಟನೆಯನ್ನು ವಿಡಿಯೋ ಮಾಡಿದ್ದ ಈ ಪಾಪಿಗಳು, ಸೋಶಿಯಲ್ ಮಿಡಿಯಾಗಳಲ್ಲಿ ಮೆಚ್ಚುಗೆ ಪಡೆಯುವ ಉದ್ದೇಶದಿಂದ ವಿಡಿಯೋ ವೈರಲ್ ಮಾಡಿದ್ದಾರೆ. ಫೇಸ್ ಬುಕ್ ನಲ್ಲಿ ಪೋಸ್ಟ್ ಆದ ಈ ವಿಡಿಯೋವನ್ನು ಗಮನಿಸಿದ ಪರಿಸರವಾದಿಗಳು ವನ್ಯ ಜೀವಿ ಅಪರಾದ ನಿಯಂತ್ರಣ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ನಂತರ ಪೊಲೀಸರು ಆ ಮೂವರನ್ನು ಕಾನೂನಾತ್ಮಕವಾಗಿ ಬಂಧಿಸಿದ್ದಾರೆ.
ಹಿಂದೊಮ್ಮೆ ಹೀಗೆಯೇ ಆಗಿತ್ತು! ನೆನಪಿದೆಯಾ?
ಹಿಂದೊಮ್ಮೆ ಛತ್ತೀಸ್ಗಢನ ಜೋಶ್ ಪುರ್ ನಲ್ಲಿ ಬಾಲಕನೊಬ್ಬ ಹಾವನ್ನು ಕಚ್ಚಿ ಕೊಂದು ಸುದ್ದಿಯಾಗಿದ್ದ. ಬುಡಕಟ್ಟು ಸಮುದಾಯದ ದೀಪಕ್ ಎನ್ನುವ ಬಾಲಕ ಹಾವು ತನಗೆ ಕಚ್ಚಿತೆಂಬ ಕೋಪದಿಂದ ಹಾವಿಗೆ ಎರಡು ಬಾರಿ ಕಚ್ಚಿದ್ದ. ಬಾಲಕ ಕಚ್ಚಿದ ವ್ಯಾಘ್ರತೆಗೆ ಹಾವಿನ ಚರ್ಮ ಕಿತ್ತು ಸತ್ತು ಹೋಗಿತ್ತು. ಬಾಲನನ್ನು ಅನಂತರ ಆಸ್ಪತ್ರೆ ಕರೆದುಕೊಂಡು ಹೋದ ಕಾರಣ ಆತ ಬದುಕಿದ್ದ. ಅಲ್ಲಿನ ಬುಡಕಟ್ಟು ಜನಾಂಗದ ನಂಬಿಕೆಯ ಪ್ರಕಾರ, ಕಚ್ಚಿದ ಹಾವಿಗೆ ತಿರುಗಿ ಕಚ್ಚಿದರೆ ಮನುಷ್ಯ ಸಾಯುವುದಿಲ್ಲವಂತೆ..!