ಅಂಬಾರಿ ಹೊತ್ತು ಮೆರೆಸಿದ ಅರ್ಜುನನ ಸಾವಿಗೆ ನಿಜವಾದ ಕಾರಣ ಏನ್ ಗೊತ್ತಾ? – ಅರಣ್ಯ ಇಲಾಖೆ ಸಿಬ್ಬಂದಿಗಳ ಮತ್ತೊಂದು ಎಡವಟ್ಟು ಬಯಲು..!!
- ಕರ್ನಾಟಕ
- December 5, 2023
- No Comment
- 258
ನ್ಯೂಸ್ ಆ್ಯರೋ : ಮೈಸೂರು ದಸರಾದಲ್ಲಿ ಆತನೇ ಕೇಂದ್ರಬಿಂದು. ಗತ್ತಿನ ನಡಿಗೆ, ಎಲ್ಲೆಲ್ಲೂ ರಾಜ ಮರ್ಯಾದೆ. ಮೈಸೂರು ದಸರಾ ಸಮಯದಲ್ಲಿ 8 ಬಾರಿ ಅಂಬಾರಿ ಹೊತ್ತು ನಾಡದೇವತೆ ಚಾಮುಂಡೇಶ್ವರಿಯನ್ನು ಮೆರೆಸಿದ್ದ ಅರ್ಜುನ ಆನೆ ಸೋಮವಾರ ಮೃತಪಟ್ಟಿದೆ. ಈ ಸಾವು ನಿಜಕ್ಕೂ ಅನಿರೀಕ್ಷಿತ ಮತ್ತು ಅತ್ಯಂತ ಶಾಕ್ ಕೊಟ್ಟಿದೆ.
ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಅರ್ಜುನನಿಗೆ ಒಂಟಿ ಸಲಗವೊಂದು ಕಿಬ್ಬೊಟ್ಟೆಗೆ ತಿವಿದಿದ್ದರಿಂದ ಅರ್ಜುನ ಸಾವಿಗೀಡಾಗಿದ್ದಾನೆ ಎಂದು ಹೇಳಲಾಗುತ್ತಿದ್ದರೂ ಅರ್ಜುನ ಸಾವಿನ ಬಗ್ಗೆ ಮಾವುತರೊಬ್ಬರು ನೀಡಿದ ಹೇಳಿಕೆ ಹಲವು ಅನುಮಾನಗಳನ್ನು ಹುಟ್ಟಿಸಿದೆ.
ಕಾಲಿಗೆ ಗುಂಡು ಬಿದ್ದ ನಂತರ ಅರ್ಜುನನಿಗೆ ನಡೆದಾಡಲು ಆಗಲಿಲ್ಲ. ಇದೇ ವೇಳೆ ಕಾಡಾನೆ ದಾಳಿ ಮಾಡಿದ್ದರಿಂದ ಸಾವಾಗಿದೆ ಎಂದು ಸ್ಥಳೀಯರೊಬ್ಬರು ಮಾವುತರೊಂದಿಗೆ ಮಾತನಾಡಿದ ಕಾವಾಡಿಗರ ವಿಡಿಯೋ ವೈರಲ್ ಆಗಿದೆ. ಗುರಿ ತಪ್ಪಿ ಬಿದ್ದ ಅದೊಂದು ಗುಂಡೇಟಿನಿಂದ ಶಕ್ತಿ ಕಳೆದುಕೊಂಡು ಕಾದಾಡಲಾಗದೆ ಅರ್ಜುನ ಆನೆ ಮೃತಪಟ್ಟಿದೆ ಎನ್ನಲಾಗುತ್ತಿದೆ.
ಮದದಲ್ಲಿರುವ ಕಾಡಾನೆ ಹುಚ್ಚನಂತೆ ಆಡುತ್ತದೆ ಎಂಬ ಮಾಹಿತಿ ಗೊತ್ತಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿ ತಪ್ಪು ನಿರ್ಧಾರ ಮಾಡಿದ್ದಾರೆ ಎಂಬ ಬಗ್ಗೆ ತಜ್ಞರು ಟೀಕೆ ಮಾಡಿದ್ದಾರೆ.
ಗುಂಡೇಟಿಗೆ ಬಲಿಯಾದನೇ ಅರ್ಜುನ…?
ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಕಾಡಾನೆ ದಾಳಿ ಮಾಡಿದಾಗ ತಪ್ಪಿಸಿಕೊಳ್ಳಲು ಅರಣ್ಯ ಇಲಾಖೆ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಗುಂಡು ಹಾರಿಸಿದಾಗ ಅದು ಅರ್ಜುನನ ಕಾಲಿಗೆ ತಗುಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸ್ಥಳದಲ್ಲಿದ್ದ ಆನೆ ಮಾವುತರೊಬ್ಬರ ಹೇಳಿಕೆಯ ವಿಡಿಯೋ ವೈರಲ್ ಆಗುತ್ತಿದೆ.
ಅರ್ಜುನ ಆನೆ ಮೊದಲ ಬಾರಿಗೆ ಕಾಡಾನೆ ಮೇಲೆ ದಾಳಿ ಮಾಡಿತು. ಆಗ ಅರಣ್ಯ ಇಲಾಖೆ ಸಿಬ್ಬಂದಿ ಕೋವಿನಿಂದ ಗುಂಡು ಹಾರಿಸಿದರು. ಅದು ಅರ್ಜುನನ ಕಾಲಿಗೆ ತಗುಲಿತು. ಅರ್ಜುನ ಶಕ್ತಿ ಕಳೆದುಕೊಂಡ. ನಾವು ಆನೆ ಮೇಲಿಂದ ಇಳಿದು ಓಡಿದೆವು. ಗುಂಡು ಬಿದ್ದ ನಂತರ ಅರ್ಜುನನಿಗೆ ನಡೆದಾಡಲು ಆಗಲಿಲ್ಲ. ಇದೇ ವೇಳೆ ಕಾಡಾನೆ ಸಾಕಾನೆ ಅರ್ಜುನನ ಮೇಲೆ ಹಠಾತ್ ದಾಳಿ ಮಾಡಿತು ಎಂದು ಸ್ಥಳೀಯರೊಬ್ಬರು ಮಾವುತರೊಂದಿಗೆ ಮಾತನಾಡಿದ ಕಾವಾಡಿಗರ ವಿಡಿಯೋ ವೈರಲ್ ಆಗಿದ್ದು, ಅರ್ಜುನನ ಸಾವಿನ ಬಗ್ಗೆ ಸೂಕ್ತ ತನಿಖೆ ಆಗಬೇಕಿದೆ.
ಇಂದು ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ…
8ಬಾರಿ ಅಂಬಾರಿ ಹೊತ್ತ ಸಾಮರ್ಥ್ಯ ಅಂದ್ರೆ ಸಾಮಾನ್ಯ ಏನೂ ಅಲ್ಲ. ವೀರ ಮರಣ ಹೊಂದಿದ ಅರ್ಜುನನಿಗೆ ಇಂದು ಬೆಳಗ್ಗೆ 11 ಗಂಟೆ ಬಳಿಕ ಸಕಲ ಸರ್ಕಾರಿ ಗೌರವ ಹಾಗು ರಾಜ ಮರ್ಯಾದೆಯೊಂದಿಗೆ ಅಂತ್ಯಕ್ರಿಯೆ ನಡೆಯಿತು. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಯಸಳೂರು ಸಮೀಪದ ನೆಡುತೋಪಿನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಮೈಸೂರು ಅರಮನೆಯ ರಾಜ ವಂಶಸ್ಥರೂ ಅರ್ಜುನನಿಗೆ ಅಂತಿಮ ಗೌರವ ಸಲ್ಲಿಸಿದ್ದಾರೆ. ಅರಮನೆಯ ಪೊರೋಹಿತರು ಅಂತಿಮ ವಿಧಿ ವಿಧಾನ ನೆರವೇರಿಸಿದ್ದಾರೆ.
ದಬ್ಬಳ್ಳಿ ಕಟ್ಟೆಯಲ್ಲಿ ಸ್ಥಳೀಯರ ಒತ್ತಾಯದ ನಡುವೆಯೂ ಪೊಲೀಸರು ಎರಡು ಜೆಸಿಬಿ ಬಳಸಿ ಅರ್ಜುನನ್ನು ಅಂತ್ಯಕ್ರಿಯೆ ನೆರವೇರಿಸಲು ಮುಂದಾದರು. ಮೈಸೂರು ಅರಮನೆಯಿಂದ ಬಂದಂತ ರಾಜಪುರೋಹಿತರು ಪೂಜೆ ಕೂಡ ಮಾಡಿ ಅಂತ್ಯಕ್ರಿಯೆ ನೆರೆವೇರಿಸೋದಕ್ಕೆ ತಯಾರಿ ನಡೆಸಿದ್ದರು. ಈ ವೇಳೆಯಲ್ಲಿ ಸ್ಥಳೀಯರು ಇಲ್ಲಿ ನೆರವೇರಿಸೋದು ಬೇಡ. ಸೂಕ್ತ ಸ್ಥಳದಲ್ಲಿ ಅಂತ್ಯಕ್ರಿಯೆ ನೆರವೇರಿ, ಸ್ಮಾರಕ ನಿರ್ಮಾಣಕ್ಕೆ ಒತ್ತಾಯಿಸಿದರು. ಸ್ಥಳೀಯರ ಪ್ರತಿಭಟನೆ ತೀವ್ರಗೊಂಡಾಗ, ಪೊಲೀಸರು ಇಂದು ದಬ್ಬಳ್ಳಿಯ ಕಟ್ಟೆಯಲ್ಲಿ ಲಘು ಲಾಠಿ ಪ್ರಹಾರವನ್ನು ನಡೆಸಲಾಗಿದೆ.
ಒಟ್ಟಿನಲ್ಲಿ ಆನೆಯ ಸಾವಿನ ಸುತ್ತ ಗೊಂದಲದ, ಸಂಶಯಾಸ್ಪದ ಮಾತುಗಳು ಕೇಳಿ ಬರುತ್ತಿದೆ. ಅರಣ್ಯ ಇಲಾಖೆಯ ತಾತ್ಸಾರದಿಂದಲೇ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗ್ತಿದೆ. ಯಾವುದಕ್ಕೂ ಅರ್ಜುನನ ಸಾವಿನ ಬಗ್ಗೆ ತನಿಖೆಯಿಂದಲೇ ನೈಜತೆ ತಿಳಿದುಬರಬೇಕು.