ಮಕ್ಕಳಿಗಾಗಿ ಆಸ್ತಿ ಮಾಡಬೇಡಿ ಅನ್ನೋದು ಇದಕ್ಕೆ ನೋಡಿ; 80 ಕೋಟಿ ಆಸ್ತಿ ಒಡೆಯ ವೃದ್ಧಾಶ್ರಮದಲ್ಲಿ ಹೆಣವಾದ !
ನ್ಯೂಸ್ ಆ್ಯರೋ: ಲಕ್ನೋ: 400ಕ್ಕೂ ಅಧಿಕ ಪುಸ್ತಕಗಳನ್ನು ಬರೆದಿರುವ ಖ್ಯಾತ ಲೇಖಕ ಶ್ರೀನಾಥ್ ಖಂಡೇಲ್ವಾಲ್ ಡಿಸೆಂಬರ್ 30ರಂದು ವಿಧಿವಶರಾಗಿದ್ದು, ಅವರ ಅಂತ್ಯಸಂಸ್ಕಾರದಲ್ಲಿ ಕುಟುಂಬದ ಯಾವ ಸದಸ್ಯರು ಭಾಗಿಯಾಗದ ಕಾರಣಕ್ಕೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
86 ವರ್ಷದ ಶ್ರೀನಾಥ್ ಖಂಡೇಲ್ವಾಲ್, 80 ಕೋಟಿ ಆಸ್ತಿ ಹೊಂದಿದ್ದರೂ ಜೀವನದ ಕೊನೆಯ ದಿನಗಳನ್ನು ವೃದ್ಧಾಶ್ರಮದಲ್ಲಿ ಕಳೆಯುವ ಪರಿಸ್ಥಿತಿ ಬಂದಿತ್ತು. 2024ನೇ ಮಾರ್ಚ್ ತಿಂಗಳಲ್ಲಿ ಉತ್ತರ ಪ್ರದೇಶದ ವಾರಣಾಸಿಯ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದುಕೊಂಡಿದ್ದರು. ಲೇಖಕ ಶ್ರೀನಾಥ್ ಖಂಡೇಲ್ವಾಲ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.
ಲೇಖಕ ಶ್ರೀನಾಥ್ ಖಂಡೇಲ್ವಾಲ್ ಅವರಿಗೆ ಒಬ್ಬ ಮಗ ಮತ್ತು ಮಗಳಿದ್ದಾರೆ. ಮಗ ಉದ್ಯಮಿಯಾಗಿದ್ದು, ಕೊನೆ ಕಾಲದಲ್ಲಿ ತಂದೆಯನ್ನು ನೋಡಿಕೊಂಡಿಲ್ಲ. ವೃದ್ಧಾಶ್ರಮದಲ್ಲಿದ್ದ ಶ್ರೀನಾಥ್ ಖಂಡೇಲ್ವಾಲ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಆಸ್ಪತ್ರೆ ಸಿಬ್ಬಂದಿ ಶ್ರೀನಾಥ್ ಅವರ ಮಗ ಮತ್ತು ಮಗಳನ್ನು ಸಂಪರ್ಕಿಸಲು ಪ್ರಯತ್ನಿಸಿದ್ರು. ಆದ್ರೂ ಯಾರೂ ಶ್ರೀನಾಥ್ ಅವರ ಆರೋಗ್ಯ ವಿಚಾರಿಸಲು ಬಂದಿರಲಿಲ್ಲ ಎಂದು ವರದಿಯಾಗಿದೆ.
ಇನ್ನು ಶ್ರೀನಾಥ್ ಖಂಡೇಲ್ವಾಲ್ ನಿಧನದ ಸುದ್ದಿಯನ್ನು ತಿಳಿಸಿದಾಗ ಅಂತಿಮ ದರ್ಶನ ಪಡೆಯಲು ಮಕ್ಕಳು ಬಂದಿಲ್ಲ. ಕೊನೆಗೆ ಶ್ರೀನಾಥ್ ಖಂಡೇಲ್ವಾಲ್ ಅವರ ಸ್ನೇಹಿತರು ಮತ್ತು ಆಪ್ತರು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಮಗಳು ಸುಪ್ರೀಂಕೋರ್ಟ್ ವಕೀಲೆ ಎಂದು ತಿಳಿದು ಬಂದಿದೆ.
ಕಾಶಿಯಲ್ಲಿ ಜನಿಸಿದ ಶ್ರೀನಾಥ್ ಖಂಡೇಲ್ವಾಲ್, 15ನೇ ವಯಸ್ಸಿನಲ್ಲಿಯೇ ಪುಸ್ತಕ ಬರೆಯಲು ಆರಂಭಿಸಿದರು. ಹಿಂದಿ, ಸಂಸ್ಕೃತ, ಅಸ್ಸಾಮಿ ಮತ್ತು ಬಂಗಾಳಿ ಸೇರಿದಂತೆ 400ಕ್ಕೂ ಅಧಿಕ ಪುಸ್ತಕಗಳನ್ನು ಬರೆದಿದ್ದಾರೆ. ಆನ್ಲೈನ್ನಲ್ಲಿ ಶ್ರೀನಾಥ್ ಖಂಡೇಲ್ವಾಲ್ ಅವರ ಪುಸ್ತಕಗಳು ಸಿಗುತ್ತವೆ. ಜೀವನದ ಕೊನೆಯ ದಿನಗಳನ್ನು ಕಾಶಿಯ ಕುಷ್ಠ ರೋಗ ಸೇವಾ ಸಂಘದ ವೃದ್ಧಾಶ್ರಮದಲ್ಲಿ ಕಳೆದಿದ್ದರು.
ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಶ್ರೀನಾಥ್ ಖಂಡೇಲ್ವಾಲ್ ಅವರು, ಮಗ, ಮಗಳು ಎಲ್ಲಾ ಸಂಬಂಧಗಳು ಮುಗಿದು ಹೋಗಿವೆ. ಈಗ ಯಾರೂ ನನ್ನ ಬದುಕಿನ ಭಾಗವಾಗಿಲ್ಲ. 80 ಕೋಟಿ ಆಸ್ತಿಯನ್ನು ಕಬಳಿಸಿದ ಮಗ ನನ್ನನ್ನು ಮನೆಯಿಂದ ಹೊರಗೆ ಹಾಕಿದ್ದಾನೆ. ಒಂದು ವೇಳೆ ನಾನು ಇಲ್ಲಿ ಸತ್ತರೇ ನನ್ನ ದೇಹವನ್ನು ಹೊರಗೆ ಎಸೆದುಬಿಡಿ ಎಂದು ಹೇಳಿ ಕಣ್ಣೀರು ಹಾಕಿದ್ದರು.
Leave a Comment