ದೇಶಾದ್ಯಂತ ಭಕ್ತಿ- ಭಾವದಿಂದ ಮಕರ ಸಂಕ್ರಾಂತಿಯ ಸಂಭ್ರಮ; ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ ಯಾವಾಗ, ಎಷ್ಟೊತ್ತಿಗೆ?

ನ್ಯೂಸ್ ಆ್ಯರೋ: ದೇಶಾದ್ಯಂತ ಮಕರ ಸಂಕ್ರಾಂತಿಯನ್ನ ಭಕ್ತಿ-ಭಾವದಿಂದ ಆಚರಿಸಲಾಗುತ್ತಿದೆ. ಪವಿತ್ರ ನದಿಗಳಿಗೆ ತೆರಳಿ ಭಕ್ತಿಭಾವದಿಂದ ಅಸಂಖ್ಯೆ ಭಕ್ತಕೋಟಿ ಮಿಂದು ಪೂಣ್ಯಸ್ನಾನ ಮಾಡುತ್ತಿದ್ದಾರೆ. ಇತ್ತ, ಶಬರಿಮಲೆಯ ಅಯ್ಯಪ್ಪನ ಸನ್ನಿಧಿಯಲ್ಲಿ ಅದೃಶ್ಯ ಜ್ಯೋತಿಯ ವಿಸ್ಮಯಕ್ಕೆ ಜಾಗರಣೆ ನಡೆದಿದೆ. ಇನ್ನು, ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯ ನಮಸ್ಕಾರದ ಘಳಿಗೆ ನೋಡಲು ಕಾತರದಿಂದ ಜನ ಕಾದಿದ್ದಾರೆ.
ಸಂಕ್ರಾಂತಿ, ಇದು ಸುಗ್ಗಿ ಹಬ್ಬ. ಸಂಕ್ರಾಂತಿ ಸಮೃದ್ಧಿಯ ಸಂಕೇತ. ಮನೆ-ಮನಗಳಲ್ಲಿ ಶಾಂತಿ-ನೆಮ್ಮದಿ ಬೇಡುವ ಸಂಭ್ರಮದ ಹಬ್ಬ. ಎಳ್ಳು-ಬೆಲ್ಲದ ಸಮ್ಮಿಶ್ರಣ. ಇಂಗ್ಲೀಷ್ ಕ್ಯಾಲೆಂಡರ್ನ ವರ್ಷದ ಮೊದಲ ಹಬ್ಬ. ಸಂಕ್ರಾಂತಿ ಸೂರ್ಯದೇವ ತನ್ನ ಪಥ ಬದಲಿಸುವ ಘಳಿಗೆ. ಅಂದ್ಹಾಗೆ ಇವತ್ತು ಇಡೀ ದೇಶಾದ್ಯಂತ ಮಕರ ಸಂಕ್ರಾಂತಿ ಸಂಭ್ರಮ-ಸಡಗರ ಎಲ್ಲೆಡೆ ಬೀರಿದೆ.
ಹಗಲು ಜಾಸ್ತಿಯಾಗಿ, ಕತ್ತಲು ಕರಗುವ ಕಾಲ ಆರಂಭ ಆಗಲಿದೆ. ದಕ್ಷಿಣಾಯನದಲ್ಲಿ ಮುಚ್ಚಿದ ಸ್ವರ್ಗದ ಬಾಗಿಲು, ಉತ್ತರಾಯಣದಲ್ಲಿ ತೆರೆಯುತ್ತದೆ ಎಂಬ ನಂಬಿಕೆ ಇದೆ. ಈ ಬಾರಿ ಸಂಕ್ರಾಂತಿ ಬಲು ವಿಶೇಷವಾಗಿದೆ. 30 ವರ್ಷಗಳ ಬಳಿಕ ಹುಣ್ಣಿಮೆ ಮರುದಿನವೇ ಮಕರ ಸಂಕ್ರಾಂತಿ ಆಗಮಿಸಿದೆ. ಅಂದ್ಹಾಗೆ ಅಯ್ಯಪ್ಪನ ಸನ್ನಿಧಾನ ಶಬರಿಮಲೆಯಲ್ಲಿ ಭಕ್ತಸಾಗರ ನೆರೆದಿದೆ.
ಇನ್ನು ಈ ವರ್ಷದ ಮಂಡಲ ಪೂಜೆ ಆರಂಭವಾದಾಗಿನಿಂದ ಶಬರಿಮಲೆ ಭಕ್ತರಿಂದ ತುಂಬಿ ತುಳುಕುತ್ತಿದೆ. ಮಕರವಿಳಕ್ಕು ಪೂಜೆಗಾಗಿ ದೇವಾಲಯವನ್ನು ತೆರೆಯಲಾಗಿದ್ದು, ಜನವರಿ 9 ರಾತ್ರಿಯಿಂದ 11 ದಿನಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದಾರೆ. ಮಂಡಲ ಮತ್ತು ಮಕರವಿಳಕ್ಕು ಅವಧಿಯಲ್ಲಿ ದೇವಾಲಯಕ್ಕೆ ಭೇಟಿ ನೀಡಿದ ಭಕ್ತರ ಸಂಖ್ಯೆ 42 ಲಕ್ಷ ಮೀರಿದೆ. ಮಕರ ಜ್ಯೋತಿ ದರ್ಶನವು ಇವತ್ತು ಸಂಜೆ 6 ಗಂಟೆಗೆ ಪ್ರಾರಂಭವಾಗಿ 7 ಗಂಟೆಗೆ ಕೊನೆಗೊಳ್ಳಲಿದೆ. ಶಬರಿಮಲೆಯಲ್ಲಿ ಭಕ್ತಸಂದಣಿಯನ್ನು ನಿಯಂತ್ರಿಸಲು ದೇವಸ್ವಂ ಮಂಡಳಿಯು ವಿವಿಧ ನಿರ್ಬಂಧಗಳನ್ನ ಜಾರಿಗೊಳಿಸಿದೆ.
Leave a Comment