ವಿಶ್ವದ ಅತೀ ಎತ್ತರದ ಪ್ರದೇಶ ಉಮ್ಲಿಂಗ್ ಲಾ ದಲ್ಲಿ ಹಾರಿತು ತುಳುನಾಡ ಧ್ವಜ – ಬೈಕ್ ನಲ್ಲೇ 18 ಸಾವಿರ ಕಿಮೀ ಸಂಚರಿಸಿದ ಉಡುಪಿಯ ಯುವಕನ ಸಾಧನೆ

ವಿಶ್ವದ ಅತೀ ಎತ್ತರದ ಪ್ರದೇಶ ಉಮ್ಲಿಂಗ್ ಲಾ ದಲ್ಲಿ ಹಾರಿತು ತುಳುನಾಡ ಧ್ವಜ – ಬೈಕ್ ನಲ್ಲೇ 18 ಸಾವಿರ ಕಿಮೀ ಸಂಚರಿಸಿದ ಉಡುಪಿಯ ಯುವಕನ ಸಾಧನೆ

ನ್ಯೂಸ್ ಆ್ಯರೋ : ನ್ಯೂಸ್ ಆ್ಯರೋ : ತುಳುನಾಡಿನ ಧ್ವಜವನ್ನು ವಿಶ್ವದ ಅತೀ ಎತ್ತರದ ಕಾಶ್ಮೀರದ ಲಡಾಖ್‌ನ ಉಮ್ಲಿಂಗ್‌ ಲಾ ಮತ್ತು ಮೌಂಟ್‌ ಎವರೆಸ್ಟ್‌ ಬೇಸ್‌ ಕ್ಯಾಂಪ್‌ನ ಮೇಲೆ ಹಾರಿಸುವ ಮೂಲಕ ಉಡುಪಿಯ ಬ್ರಹ್ಮಗಿರಿಯ ಯುವಕ ಸಿದ್ವಿನ್‌ ಶೆಟ್ಟಿ (28) ಸುದ್ದಿಯಾಗಿದ್ದಾರೆ.

ಸಾಫ್ಟ್ ವೇರ್‌ ಉದ್ಯೋಗಿಯಾಗಿದ್ದ ಅವರು ತಮ್ಮ ಕೆಲಸ ಬಿಟ್ಟು ಸುಮಾರು 18 ಸಾವಿರಕ್ಕೂ ಅಧಿಕ ಕಿ.ಮೀ. ಪ್ರಯಾಣವನ್ನು ಬೈಕಿನಲ್ಲಿಯೇ ಏಕಾಂಗಿಯಾಗಿ ಮುಗಿಸಿ ಈ ಕಾರ್ಯ ಮಾಡಿದ್ದಾರೆ.

ಟ್ರೆಕ್ಕಿಂಗ್‌ನಲ್ಲಿ ಆಸಕ್ತಿ ಹೊಂದಿದ್ದ ಇವರು 2023ರ ಮೇ 6ರಂದು ಉಡುಪಿಯಿಂದ ತನ್ನ ಹಿಮಾಲಯನ್‌ ಬೈಕ್‌ನಲ್ಲಿ ಪ್ರಯಾಣ ಆರಂಭಿಸಿ ಭಾರತದ 21 ರಾಜ್ಯಗಳು, 5 ಕೇಂದ್ರಾಡಳಿತ ಪ್ರದೇಶಗಳನ್ನು ಮತ್ತು ನೇಪಾಲ ಮತ್ತು ಭೂತಾನ್‌ ದೇಶಗಳನ್ನು ಸುತ್ತಿ ಜು. 19ರಂದು ಉಡುಪಿಗೆ ಮರಳಿದ್ದಾರೆ.

ಇದರೊಂದಿಗೆ ವಿಶ್ವದ ಅತೀ ಎತ್ತರದ ಪ್ರದೇಶವಾದ ಉಮ್ಲಿಂಗ್‌ ಲಾ (19,024 ಅಡಿ), ಮೌಂಟ್‌ ಎವರೆಸ್ಟ್‌ ಬೇಸ್‌ ಕ್ಯಾಂಪ್‌ (17,598 ಅಡಿ ಎತ್ತರ) ಮತ್ತು ವಿಶ್ವದ ಅತೀ ಎತ್ತರದ ಶಿವ ದೇವಾಲಯ ತುಂಗನಾಥ್‌ ಅನ್ನು ಕೂಡ ಸ್ಪರ್ಶಿಸಿ ಬಂದಿದ್ದಾರೆ.

ಸಿದ್ವಿನ್ ಅವರು ಉಡುಪಿಯ ಸುರೇಶ್‌ ಕೃಷ್ಣ ಶೆಟ್ಟಿ ಮತ್ತು ಸುಜಯಾ ಎಸ್‌. ಶೆಟ್ಟಿ ಅವರ ಪುತ್ರ. ಪ್ರಾಥಮಿಕ ಹಾಗೂ ಹೈಸ್ಕೂಲ್ ಶಿಕ್ಷಣವನ್ನು ಉಡುಪಿಯ ಸೈಂಟ್ ಮೇರಿಸ್ ಶಾಲೆಯಲ್ಲಿ ಪೂರೈಸಿ, ಪಿಯು ಶಿಕ್ಷಣವನ್ನು ಬ್ರಹ್ಮಾವರದ ಜಿಎಮ್ ವಿದ್ಯಾನಿಕೇತನದಲ್ಲಿ ಮಾಡಿದ್ದಾರೆ. ಬಳಿಕ ಕಂಪ್ಯೂಟರ್ ಸೈನ್ಸ್ ನಲ್ಲಿ ಎಂಜಿನಿಯರಿಂಗ್ ಪದವಿಯನ್ನು ನಿಟ್ಟೆ ಕಾಲೇಜಿನಿಂದ ಪಡೆದಿದ್ದು ಚಿಕ್ಕಂದಿನಿಂದಲೇ ಚಾರಣದ ಬಗ್ಗೆ ವಿಶೇಷ ಆಸಕ್ತಿ ಹೊಂದಿದವರಾಗಿದ್ದಾರೆ.

ಚಾರಣದೊಂದಿಗೆ ಇಡೀ ದೇಶವನ್ನು ಸುತ್ತಿ ಅಲ್ಲಿನ ಶಿವ ದೇವಾಲಯಗಳನ್ನು ಸಂದರ್ಶಿಸಬೇಕು ಎನ್ನುವುದು ಅವರ ಆಸೆಯಾಗಿತ್ತು. ಅದರೊಂದಿಗೆ ತುಳುನಾಡಿನ ಧ್ವಜವನ್ನು ವಿಶ್ವದ ಎತ್ತರದ ಪ್ರದೇಶದಲ್ಲಿ ಇದುವರೆಗೆ ಉಡುಪಿಯ ಯಾವುದೇ ಚಾರಣಿಗರು ಹಾರಿಸಿಲ್ಲ. ಈ ಸಾಧನೆಯನ್ನು ತಾನು ಮಾಡಬೇಕು ಎನ್ನುವ ಆಸೆಯಿಂದ ಕಠಿಣ ಪರಿಶ್ರಮದೊಂದಿಗೆ ತನ್ನ ಕನಸನ್ನು ನನಸು ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಸಿದ್ವಿನ್ ಶೆಟ್ಟಿ “ನಾನು ನನ್ನ ಪ್ರಯಾಣವನ್ನು ಯಾವುದೇ ರೀತಿಯ ಸುದ್ದಿಯನ್ನು ಮಾಡದೇ ಕೇವಲ ನನ್ನ ತಂದೆ ತಾಯಿ ಮತ್ತು ಸಹೋದರಿಗೆ ತಿಳಿಸುವ ಮೂಲಕ ಮೌನವಾಗಿ ಆರಂಭಿಸಿದೆ. ಏಕೆಂದರೆ 18,000 ಕಿಮೀ ಪ್ರಯಾಣ ಕ್ರಮಿಸುವುದು ಎಷ್ಟು ಕಷ್ಟ ಸಾಧ್ಯ ಎನ್ನುವ ಅರಿವು ನನಗಿತ್ತು. ಆದರೆ ನನ್ನ ಮನೆಯವರ ಬೆಂಬಲ ನನ್ನೊಂದಿಗೆ ಇದ್ದ ಕಾರಣ ನಾನು ಅದನ್ನು ಕ್ರಮಿಸಲು ಸಾಧ್ಯವಾಯಿತು.

ನನ್ನ ಬೈಕ್ ಸವಾರಿಯ ಸಮಯದಲ್ಲಿ ಹಲವಾರು ಸೇತುವೆಗಳು, ಭೂಕುಸಿತಗಳು, ಪ್ರವಾಹ ಪ್ರದೇಶಗಳು, ಹೊಳೆಗಳು, ಮಂಜುಗಡ್ಡೆಯ ಪ್ರದೇಶಗಳು, ಮರಳು, ಕಲ್ಲುಗಳು, ಪರ್ವತಗಳು, ದಟ್ಟವಾದ ಕಾಡುಗಳನ್ನು ದಾಟಿ ಮುಂದುವರೆದಿದ್ದೇನೆ. ನನ್ನ ಕ್ರೀಡಾ ಟೀ ಶರ್ಟ್ನಲ್ಲಿ +50 ಡಿಗ್ರಿಗಳಿಂದ -16 ರವರೆಗೆ ತಾಪಮಾನವನ್ನು ತಡೆದುಕೊಂಡು ಪ್ರಯಾಣಿಸಿದ್ದೇನೆ. ಯಾವುದೇ ಚರ್ಮ ರಕ್ಷಕ ಕ್ರೀಮ್ಗಳು ಅಥವಾ ಥರ್ಮಲ್ಗಳಿಲ್ಲದೆ ಪ್ರಯಾಣಿಸಿದ್ದು ಮನೆ ಬಿಟ್ಟಾಗಿನಿಂದ ಇಂದಿನ ತನಕ ಯಾವುದೇ ರೀತಿ ಮಾತ್ರೆಗಳನ್ನು ಕೂಡ ಉಪಯೋಗಿಸದೆ ಇರುವುದು ಕೂಡ ವಿಶೇಷವಾಗಿದೆ.

ಕೆಲವೊಮ್ಮೆ ದಿನಕ್ಕೆ ಒಂದೇ ಬಾರಿ ಊಟವನ್ನು ಮಾಡುತ್ತಿದ್ದೆ. ಈ ಎಲ್ಲಾ ಪರೀಕ್ಷೆಗಳನ್ನು ನಾನು ಉದ್ದೇಶಪೂರ್ವಕವಾಗಿ ಮಾಡಿದ್ದು ನಾನು ಈ ಪ್ರಯಾಣಕ್ಕೆ ಎಷ್ಟೊಂದು ಸಮರ್ಥನಿದ್ದೇನೆ ಮತ್ತು ಹೇಗೆ ನಿಭಾಯಿಸುತ್ತೇನೆ ಎನ್ನುವುದನ್ನು ಅರಿಯುವ ನಿಟ್ಟಿನಲ್ಲಿ ಹೊರಟಿದ್ದು ಅದರಲ್ಲಿ ನಾನು ಉತ್ತೀರ್ಣನಾಗಿದ್ದೇನೆ ಎಂಬ ಹೆಮ್ಮೆ ಇದೆ” ಎಂದಿದ್ದಾರೆ.

ನನ್ನ ಬೈಕ್ ಪ್ರಯಾಣದಲ್ಲಿ 100ಕ್ಕೂ ಅಧಿಕ ದೇವಸ್ಥಾನಗಳು, ಗುರುದ್ವಾರ, ಚರ್ಚ್ ಮತ್ತು ಮಸೀದಿಗಳ ವಾಸ್ತು ಶಿಲ್ಪವನ್ನು ಅನುಭವಿಸುವ ಅವಕಾಶ ದೊರಕಿತು. ಈ ವೇಳೆ ಬಹುತೇಕ ಎಲ್ಲಾ ಧರ್ಮದ ಜನರೊಂದಿಗೆ ಬೆರೆಯುವ ಅವರೊಂದಿಗೆ ಸಂವಾದ ಮಾಡುವುದರೊಂದಿಗೆ ಅವರ ಸಂಸ್ಕೃತಿ ಆಚಾರ ವಿಚಾರಗಳನ್ನು ತಿಳಿಯಲು ಕೂಡ ಸಾಧ್ಯವಾಯಿತು. ಇದರೊಂದಿಗೆ ಭಾರತ, ನೇಪಾಳ, ಭೂತಾನ್ ದೇಶಗಳ ಸಶಸ್ತ್ರ ಪಡೆಗಳ ಅಧಿಕಾರಿಗಳನ್ನು ಕೂಡ ಭೇಟಿಯಾಗಿದ್ದು ಮತ್ತೊಂದು ವಿಶೇಷತೆ ಆಗಿದೆ.

ನನ್ನ ಪ್ರಯಾಣದ ಉದ್ದಕ್ಕೂ ಎಲ್ಲಾ ರೀತಿಯ ಸಹಕಾರ ಪ್ರತಿ ಭಾಗದ ಜನರು ನನಗೆ ನೀಡಿದರು. ನನ್ನ ಪ್ರಯಾಣದ ಮುಖ್ಯವಾದ ಸಾಧನೆ ಎಂದರೆ ಸುಮಾರು 17,598 ಅಡಿ ಎತ್ತರ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪನ್ನು ಕೇವಲ 6 ದಿನಗಳಲ್ಲಿ ಯಾವುದೇ ರೀತಿ ಮಾರ್ಗದರ್ಶಕರಿಲ್ಲದೆ ಆರೋಹಣ ಮಾಡಿ ಪೂರ್ಣಗೊಳಿಸಿರುವುದಾಗಿದೆ. ಈ ಎತ್ತರದ ಪ್ರದೇಶಕ್ಕೆ ತೆರಳಿ ಅಲ್ಲಿ ತುಳುನಾಡಿನ ಧ್ವಜವನ್ನು ಹಾರಿಸಿದ್ದೇನೆ ಎಂಬ ಹೆಮ್ಮೆ ನನಗಿದೆ.

ಒಂದು ವರ್ಷದ ಹಿಂದೆ ಅಪಘಾತದಿಂದ ನನ್ನ ಮಂಡಿಯ ಚಿಪ್ಪು ಮುರಿದ್ದಿದ್ದು ಇದರ ನಡುವೆಯೂ ಈ ಚಾರಣ ಮಾಡುವ ಅದೃಷ್ಠ ನನಗೆ ಸಿಕ್ಕಿದೆ. ಈ ನನ್ನ ಸಾಧನೆಗೆ ಅಲ್ಲಿನ ಅಧಿಕಾರಿಗಳು ಪ್ರಶಂಸಾ ಪತ್ರವನ್ನು ಕೂಡ ನೀಡಿದ್ದಾರೆ ಎಂದಿದ್ದಾರೆ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *