ಮತ್ತೆ ‘ದಿ ಕೇರಳ ಸ್ಟೋರಿ’ ಚಿತ್ರತಂಡದ ಬೆಂಬಲಕ್ಕೆ ನಿಂತ ಯೋಗಿ ಆದಿತ್ಯನಾಥ್ ಹೇಳಿದ್ದೇನು? – ಸುಪ್ರೀಂ ಕೋರ್ಟ್ ನೀಡಿದ ಶಾಕ್ ಏನು?
- ಮನರಂಜನೆ
- May 12, 2023
- No Comment
- 208
ನ್ಯೂಸ್ ಆ್ಯರೋ : ‘ದಿ ಕೇರಳ ಸ್ಟೋರಿ’ ಎಲ್ಲಾ ಅಡೆತಡೆಗಳನ್ನು ಮೀರಿ ಬಾಕ್ಸ್ ಅಫೀಸ್ ನಲ್ಲಿ ಸದ್ದು ಮಾಡುತ್ತಿದೆ. ಈ ನಡುವೆ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿ ಉತ್ತರ ಪ್ರದೇಶ ಸರ್ಕಾರ ಪ್ರೋತ್ಸಾಹ ನೀಡಿತ್ತು. ಇದೀಗ ಇನ್ನಷ್ಟು ಕೊಡುಗೆಗಳನ್ನು ಒದಗಿಸುವ ಭರವಸೆ ನೀಡಿದೆ.
ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿದಕ್ಕೆ ಚಿತ್ರತಂಡವು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ, ಧನ್ಯವಾದಗಳನ್ನು ತಿಳಿಸಿದೆ. ಈ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶ ಸರಕಾರದಿಂದ ಸರ್ವ ರೀತಿಯ ಸಹಕಾರವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ. ಹೀಗಾಗಿ ಚಿತ್ರತಂಡಕ್ಕೆ ಆನೆಬಲ ಬಂದಂತಾಗಿದೆ. ಈ ಖುಷಿಯನ್ನು ಚಿತ್ರತಂಡ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ನಿರ್ದೇಶಕ ಸುದಿಪ್ತೊ ಸೇನ್, ನಿರ್ಮಾಪಕ ವಿಫುಲ್ ಅಮೃತ್ ಲಾಲ್ ಶಾ ಹಾಗೂ ನಟಿ ಅದಾ ಶರ್ಮಾ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿದ್ದರು.
ಖುಷಿಯ ನಡುವೆ ಶಾಕ್
ಈ ಮಧ್ಯೆ ಸುಪ್ರೀಂ ಕೋರ್ಟ್ ಚಿತ್ರತಂಡಕ್ಕೆ ಶಾಕ್ ಕೂಡ ನೀಡಿದೆ. ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಚಿತ್ರ ಪ್ರದರ್ಶನಕ್ಕೆ ಅಡ್ಡಿ ಉಂಟಾಗಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು ಈ ವಿಷಯವನ್ನು ಬುಧವಾರ ತುರ್ತು ಪಟ್ಟಿಗೆ ಸೇರಿಸಿದ ನಂತರ ಮೇ 12ರಂದು ವಿಚಾರಣೆಗೆ ಮುಂದೂಡಿತು. ಅಲ್ಲದೆ ನ್ಯಾಯಮೂರ್ತಿ ಪಿಎಸ್ ನರಸಿಂಹ ಅವರನ್ನೊಳಗೊಂಡ ಪೀಠವು ಚಿತ್ರದ ಬಿಡುಗಡೆಗೆ ತಡೆ ನೀಡಲು ನಿರಾಕರಿಸಿದ್ದ ಕೇರಳ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಲು ಸೋಮವಾರ ಒಪ್ಪಿಕೊಂಡಿತ್ತು.
ಚಿತ್ರ ತಂಡದ ಪರ ವಕೀಲ ಹರೀಶ್ ಸಾಳ್ವೆ ವಾದ ಮಂಡಿಸಿದ್ದಾರೆ. ‘ಪಶ್ಚಿಮ ಬಂಗಾಳ ಚಿತ್ರವನ್ನು ನಿಷೇಧ ಮಾಡಿರುವುದರಿಂದ ಆರ್ಥಿಕವಾಗಿ ನಷ್ಟವಾಗುತ್ತಿದೆ. ಅಲ್ಲದೆ ತಮಿಳುನಾಡು ಸಹ ಚಿತ್ರ ನಿಷೇಧಕ್ಕೆ ಮುಂದಾಗಿದೆ. ಚಿತ್ರವನ್ನು ನಿಷೇಧ ಮಾಡುತ್ತಿರುವುದು ಸಂವಿಧಾನದ 19 (1) (ಎ) ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಯತ್ನ’ ಎಂದು ಹೇಳಿದ್ದಾರೆ.