ಬಿಳಿನೆಲೆ ಸಂದೀಪ್‌ ಕೊಲೆ ಪ್ರಕರಣ; ಗ್ರಾಮ ಪಂಚಾಯತ್ ಮುಂದೆ ಶವವಿಟ್ಟು ಪ್ರತಿಭಟನೆ

Sandeep
Spread the love

ನ್ಯೂಸ್ ಆ್ಯರೋ: ಬಿಳಿನೆಲೆ ಸಂದೀಪ್‌ ಕೊಲೆ ಪ್ರಕರಣದಲ್ಲಿ ಪೊಲೀಸರು ಸಮರ್ಪಕ ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಬಿಳಿನೆಲೆ ಗ್ರಾ. ಪಂ ಮುಂಭಾಗ ಮಂಗಳವಾರ ಶವವಿಟ್ಟು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂದೀಪ್‌ ಕೊಲೆ ಕೇಸ್‌ ನಲ್ಲಿ ಓರ್ವ ಆರೋಪಿಯನ್ನು ಮಾತ್ರ ಪೊಲೀಸರು ಬಂಧಿಸಿದ್ದು, ಉಳಿದವರನ್ನು ರಕ್ಷಿಸಲಾಗುತ್ತಿದೆ. ರಾಜಕೀಯ ಪ್ರಭಾವಕ್ಕೆ ಒಳಗಾಗಿ ಪೊಲೀಸರು ಹತ್ಯೆಯ ಸಮರ್ಪಕ ತನಿಖೆ ನಡೆಸುತ್ತಿಲ್ಲ ಎಂದು ಕುಟುಂಬಸ್ತರು ಆರೋಪಿಸಿದ್ದಾರೆ.

ಆರಂಭದಲ್ಲಿ ಸಂದೀಪ್‌ ಮನೆಯವರು ನಾಪತ್ತೆ ದೂರು ದಾಖಲಿಸಲು ಬಂದಾಗ ಅದನ್ನು ಸ್ವೀಕರಿಸದೆ ಅವರನ್ನು ಠಾಣೆಯಿಂದ ಓಡಿಸಲಾಯಿತು. ಕುಟುಂಬಸ್ಥರ ಹಾಗೂ ಗ್ರಾಮಸ್ಥರ ಒತ್ತಾಯ, ಹೋರಾಟದ ಬಳಿಕ ಪೊಲೀಸರು ಆರೋಪಿ ಪ್ರತಿಕ್‌ ನನ್ನು ವಶಕ್ಕೆ ಪಡೆದರು. ವಿಚಾರಣೆ ವೇಳೆ ಆರೋಪಿ ಕೊಲೆ ನಡೆಸಿದನ್ನು ಬಾಯ್ಬಿಟ್ಟು, 24 ಗಂಟೆ ಕಳೆದರೂ ಪೊಲೀಸರು ಶವ ಪತ್ತೆಗೆ ಮುಂದಾಗಿಲ್ಲ. ಪ್ರತಿಭಟನೆಯ ಬಳಿಕವಷ್ಟೇ ಪೊಲೀಸರು ಆರೋಪಿಯ ಜತೆ ಬಂದು ಶವ ಪತ್ತೆ ಹಚ್ಚಿದ್ದಾರೆ. ಈ ವಿಳಂಬದ ಹಿಂದೆ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರವಿದೆ ಎಂದು ಪ್ರತಿಭಟನ ನಿರತರು ಆರೋಪ ಮಾಡಿದ್ದಾರೆ.

ಪ್ರಕರಣ ನಡೆದು ವಾರವಾದರೂ ಬಿಳಿನೆಲೆ ಗ್ರಾ.ಪಂ ಅಧ್ಯಕ್ಷರಾಗಲಿ, ಸದಸ್ಯರಾಗಲಿ ಸಂದೀಪ್‌ ಮನೆಗೆ ಬಂದಿಲ್ಲ . ಮನೆಯವರ ನೋವನ್ನು ಆಲಿಸುವ ಯತ್ನ ನಡೆಸಿಲ್ಲ . ತನಿಖೆಯಲ್ಲಿ ಗುರುತರ ಲೋಪವಾಗುತ್ತಿದ್ದರೂ, ಅವರ ಬೆಂಬಲಕ್ಕೆ ನಿಂತಿಲ್ಲ ಎಂದು ಇದೆ ವೇಳೆ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. ಬಿಳಿನೆಲೆ ಗ್ರಾಮದಲ್ಲಿ ಮಾದಕ ವಸ್ತು ಹಾವಳಿ ಕಂಡು ಬರುತ್ತಿದ್ದು, ಈ ಕೊಲೆಯ ಹಿಂದೆಯೂ ಡ್ರಗ್ಸ್‌ ಕಮಟು ಕಂಡು ಬರುತ್ತಿದೆ ಇದರ ನಿಯಂತ್ರಣದ ಕಡೆಗೆ ಪಂಚಾಯತ್‌ ಆಸಕ್ತಿ ಹೊಂದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.

ರಸ್ತೆಯಿಂದ ಶವ ಬಿಸಾಡಿದ ಸ್ಥಳ ಬಹಳಷ್ಟು ದೂರವಿದ್ದು, ಅಷ್ಟು ದೂರ ಶವವನ್ನು ಒಬ್ಬನೇ ವ್ಯಕ್ತಿ ಕೊಂಡು ಹೋಗಲು ಸಾಧ್ಯವಿಲ್ಲ. ಶವ ಸಾಗಿಸಲು ಪ್ರಮುಖ ಆರೋಪಿ ಜತೆ ಇನ್ನಷ್ಟು ಜನ ಕೈ ಜೋಡಿಸಿದ್ದಾರೆ. ಇವರನ್ನು ಪೊಲೀಸ್‌ ಇಲಾಖೆ ತಕ್ಷಣ ಬಂಧಿಸಬೇಕು. ಕೊಲೆಗೆ ಹಾಗೂ ಶವ ವಿಲೇವಾರಿಗೆ ಯಾರೆಲ್ಲ ಸಹಾಯ ಮಾಡಿದ್ದಾರೆಯೋ ಅವರೆನ್ನೆಲ್ಲ ಜೈಲಿಗಟ್ಟಬೇಕು ಎಂದು ಪ್ರತಿಭಟನ ನಿರತ ಗ್ರಾಮಸ್ಥರು ಆಗ್ರಹಿಸಿದರು.

Leave a Comment

Leave a Reply

Your email address will not be published. Required fields are marked *

error: Content is protected !!