ಜೆಮಿನಿ ಸರ್ಕಸ್ ಮತ್ತು ಜಂಬೋ ಸರ್ಕಸ್ನ ಸಂಸ್ಥಾಪಕ ಇನ್ನು ನೆನಪು ಮಾತ್ರ – ಭಾರತದಲ್ಲಿ ಸರ್ಕಸ್ಗೆ ಹೊಸ ಸ್ಪರ್ಶ ಕೊಟ್ಟಿದ್ದ ಜೆಮಿನಿ ಶಂಕರನ್ ನಿಧನ
- ರಾಷ್ಟ್ರೀಯ ಸುದ್ದಿ
- April 25, 2023
- No Comment
- 110
ನ್ಯೂಸ್ ಆ್ಯರೋ : ಭಾರತದಲ್ಲಿ ಸರ್ಕಸ್ಗೆ ಹೊಸ ರೂಪ ಕೊಟ್ಟಿದ್ದ ಜೆಮಿನಿ ಶಂಕರನ್ ಅಲಿಯಾಸ್ ಎಂ.ವಿ. ಶಂಕರನ್ (99) ಭಾನುವಾರ ಕಣ್ಣೂರಿನಲ್ಲಿ ನಿಧನರಾದರು.
ಜೆಮಿನಿ ಸರ್ಕಸ್ ಮತ್ತು ಜಂಬೋ ಸರ್ಕಸ್ನ ಸಂಸ್ಥಾಪಕರಾಗಿದ್ದ ಜೆಮಿನಿ ಶಂಕರನ್ ಕೆಲ ಸಮಯದಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರು ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಮಂಗಳವಾರ ಕಣ್ಣೂರಿನ ಪಯ್ಯಂಬಳಂನಲ್ಲಿ ನಡೆಯಲಿದೆ.
1924ರಲ್ಲಿ ಜನಿಸಿದ ಅವರು, ಮೂರು ವರ್ಷಗಳ ಕಾಲ ಪ್ರಸಿದ್ಧ ಸರ್ಕಸ್ ಕಲಾವಿದ ಕೀಲೇರಿ ಕುಂಞಿಕಣ್ಣನ್ ಅವರಲ್ಲಿ ತರಬೇತಿ ಪಡೆದು, ನಂತರ ಮಿಲಿಟರಿಗೆ ಸೇರಿ, ಎರಡನೇ ಮಹಾಯುದ್ದದ ನಂತರ ನಿವೃತ್ತರಾಗಿದ್ದರು.
ನ್ಯಾಷನಲ್ ಸರ್ಕಸ್ ಮತ್ತು ಗ್ರೇಟ್ ಬಾಂಬೆ ಸರ್ಕಸ್ ಸೇರಿದಂತೆ ದೇಶದ ನಾನಾ ಸರ್ಕಸ್ ಕಂಪೆನಿಗಳಲ್ಲಿ ಕೆಲಸ ಮಾಡಿದ ಅವರು, ಸ್ನೇಹಿತನೊಂದಿಗೆ ಸೇರಿ 1951ರಲ್ಲಿ ವಿಜಯ ಸರ್ಕಸ್ ಕಂಪೆನಿಯನ್ನು ಖರೀದಿಸಿದ್ದರು. ಬಳಿಕ ಅದನ್ನೇ ಜೆಮಿನಿ ಸರ್ಕಸ್ ಎಂದು ನಾಮಕರಣ ಮಾಡಿದ್ದರು. ಇದಾದ ನಂತರ ಜಂಬೋ ಸರ್ಕಸ್ ಕಂಪೆನಿಯನ್ನೂ ಶುರು ಮಾಡಿದ್ದರು.
ಭಾರತದಲ್ಲಿ ಸರ್ಕಸ್ಗೆ ಹೊಸ ರೂಪ ಕೊಟ್ಟಿದ್ದ ಶಂಕರನ್ ಅವರ ಸಾಧನೆಯನ್ನು ಗುರುತಿಸಿ ಅಂದಿನ ಕೇಂದ್ರ ಸರ್ಕಾರ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಪ್ರಧಾನಿಗಳಾದ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ಮೊರಾರ್ಜಿ ದೇಸಾಯಿ ಮತ್ತು ರಾಜೀವ್ ಗಾಂಧಿ ಅವರೊಂದಿಗೆ ಶಂಕರ್ ಉತ್ತಮ ಸಂಬಂಧವನ್ನು ಹೊಂದಿದ್ದರು. ದೇಶದ ಅತ್ಯಂತ ಹಿರಿಯ ಸರ್ಕಸ್ ಕಲಾವಿದರಾಗಿರುವ ಶಂಕರನ್ ಅವರು ಇಂಡಿಯಾ ಸರ್ಕಸ್ ಫೆಡರೇಶನ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.