ಉದ್ಯೋಗಿಗಳಿಗೆ ವೇತನ ನೀಡಲು ಆರ್ಥಿಕ ಅಡಚಣೆ – ಸ್ವಂತ ಮನೆಯನ್ನೇ ಅಡವಿಟ್ರು ಬೈಜುಸ್ ಸಂಸ್ಥಾಪಕ…!
- ಲೈಫ್ ಸ್ಟೈಲ್
- December 5, 2023
- No Comment
- 113
ನ್ಯೂಸ್ ಆ್ಯರೋ : ವ್ಯವಹಾರ ನಡೆಸುವ ಅದ್ಯಾವುದೇ ಸಂಸ್ಥೆಯಾಗಿರಲಿ ಲಾಭಾಂಶ ಎನ್ನುವುದು ಇರದೇ ಹೋದರೆ ಕಂಪೆನಿಗೆ ನಷ್ಟ ಆಗೋದು ಮಾತ್ರವಲ್ಲದೆ ಅಲ್ಲಿ ಕಾರ್ಯ ನಿರ್ವಹಿಸುವ ಉದ್ಯೋಗಿಗಳ ಬದುಕು ಸಂಕಷ್ಟಕ್ಕೆ ಬಂದು ನಿಲ್ಲುತ್ತದೆ. ಈ ಸಂದರ್ಭದಲ್ಲಿ ಕಂಪೆನಿಗೆ ನಷ್ಟ ಭರಿಸುವುದು ಒಂದು ಸವಾಲಾದರೆ ಉದ್ಯೋಗಿಗಳು ಕೆಲಸ ಬಿಡದಂತೆ ನೋಡಿಕೊಳ್ಳುವುದು ಮತ್ತೊಂದು ಸವಾಲು.
ಎಜುಟೆಕ್ ಕಂಪನಿ ಬೈಜುಸ್ ಸಾಲು ಸಾಲು ಸವಾಲು ಎದುರಿಸುತ್ತಿದೆ. ಆನ್ಲೈನ್ ಶಿಕ್ಷಣ, ಕೋಚಿಂಗ್, ಮಾರ್ಗದರ್ಶನ ಸೇರಿದಂತೆ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮಾಡಿದ್ದ ಬೈಜುಸ್ ಕಂಪನಿ ಇದೀಗ ಸಾಲದ ಸುಳಿಯಲ್ಲಿದೆ. 22 ಬಿಲಿಯನ್ ಡಾಲರ್ ಕಂಪನಿ ಇದೀಗ 3 ಸಾವಿರ ಡಾಲರ್ಗೆ ಕುಸಿದಿದೆ. ಕಳೆದ ಹಲವು ತಿಂಗಳಿನಿಂದ ಉದ್ಯೋಗಿಗಳಿಗೆ ಸರಿಯಾಗಿ ವೇತನ ನೀಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ.
ಇದೀಗ ಉದ್ಯೋಗಿಗಳಿಗೆ ಸ್ಯಾಲರಿ ನೀಡಲು ಬೈಜುಸ್ ಸಂಸ್ಥಾಪಕ ರವೀಂದ್ರನ್ ತಮ್ಮ ಸ್ವಂತ ಮನೆ ಹಾಗೂ ಕುಟುಂಬದವರ ಮನೆಯನ್ನು ಶೂರಿಟಿಯಾಗಿ ನೀಡಿ ಫಂಡ್ ರೈಸ್ ಮಾಡಲು ಮುಂದಾಗಿದ್ದಾರೆ. ಬೈಜುಸ್ ಬರೋಬ್ಬರಿ 15,000 ಉದ್ಯೋಗಿಗಳಿಗೆ ವೇತನ ಬಾಕಿ ಉಳಿಸಿದೆ.
ಸದ್ಯ ಬೈಜುಸ್ ಕಂಪನಿಯ ಉದ್ಯೋಗಳಿಗೆ ಸ್ಯಾಲರಿ ಹಾಗೂ ಕಂಪನಿ ಮುನ್ನಡೆಸಲು ತಕ್ಷಣವೇ 12 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತದಷ್ಟು ಅವಶ್ಯಕತೆ ಇದೆ. ಹೀಗಾಗಿ ಬೆಂಗಳೂರು ದಕ್ಷಿಣದಲ್ಲಿರುವ 2 ಮನೆ, ನಿರ್ಮಾಣ ಹಂತದಲ್ಲಿರುವ ವಿಲ್ಲಾ ಸೇರಿದಂತೆ ಕುಟುಂಬಸ್ಥರ ಕೆಲ ಮನೆಗಳನ್ನು ಅಡವಿಟ್ಟಿದ್ದಾರೆ.
ಬೈಜು ರವೀಂದ್ರನ್ ಕಂಪನಿಯನ್ನು ಉಳಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಕೊರೋನಾ ಹಾಗೂ ಅದಕ್ಕಿಂತ ಮೊದಲು ಬೈಜುಸ್ ದೇಶದ ಅತೀ ದೊಡ್ಡ ಎಜುಟೆಕ್ ಕಂಪನಿಯಾಗಿ ಬೆಳೆದಿತ್ತು. ಸಾವಿರಾರು ಕೋಟಿ ರೂಪಾಯಿ ವ್ಯವಹಾರದಲ್ಲಿ ತೊಡಗಿಸಿಕೊಂಡಿತ್ತು. ಇದೀಗ ಆರ್ಥಿಕ ನಷ್ಟ, ಸಾಲದ ಸುಳಿ, ಕಾನೂನು ಹೋರಾಟ ಸೇರಿದಂತೆ ಹಲವು ಸಂಕಷ್ಟಗಳು ಎದುರಾಗಿದೆ.
5 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದಷ್ಟು ಆಸ್ತಿ ಹೊಂದಿದ್ದ ರವೀಂದ್ರನ್ ಇದೀಗ 400 ಮಿಲಿಯನ್ ಡಾಲರ್ ನಷ್ಟು ಆರ್ಥಿಕ ನಷ್ಟದಲ್ಲಿದ್ದಾರೆ. ಉದ್ಯೋಗಿಗಳು ವೇತನ ಸಿಗದೆ ಪರದಾಡುವಂತಾಗಿದೆ. ಹಲವರು ಕಂಪನಿ ತೊರೆದಿದ್ದಾರೆ. ಉದ್ಯೋಗಿಗಳ ಕಂಪನಿ ತೊರೆಯುವ ಮುನ್ನ ನಷ್ಟದಲ್ಲಿರುವ ಕಂಪನಿಯನ್ನು ಸರಿದೂಗಿಸಿ ಮುನ್ನಡೆಸಲು ರವೀಂದ್ರನ್ ಹೆಣಗಾಡುತ್ತಿದ್ದಾರೆ.
ಕೊರೋನಾ ಸಮಯದಲ್ಲಿ ಬೈಜುಸ್ ಆದಾಯದಲ್ಲಿ ದಾಖಲೆ ಬರೆದಿತ್ತು. ಕೊರೋನಾದಿಂದ ಆನ್ಲೈನ್ ಶಿಕ್ಷಣ ದೇಶಾದ್ಯಂತ ಚಾಲ್ತಿಗೆ ಬಂದಿತ್ತು. ಇದು ಬೈಜುಸ್ ಬಂಡವಾಳವನ್ನು ಹೆಚ್ಚಿಸಿತ್ತು. ಆದರೆ ಕೊರೋನಾ ಸರಿಯುತ್ತಿದ್ದಂತೆ ಬೈಜುಸ್ ಪತನ ಆರಂಭಗೊಂಡಿತ್ತು. ಉದ್ಯೋಗ ಕಡಿತ ಸೇರಿದಂತೆ ಹಲವು ಕಾಸ್ಟ್ ಕಟ್ಟಿಂಗ್ ಕ್ರಮಗಳನ್ನು ಕಂಪನಿ ತೆಗೆದುಕೊಂಡರೂ ಸಾಲದ ಸುಳಿಯಿಂದ ಹೊರಬರಲು ಸಾಧ್ಯವಾಗಲಿಲ್ಲ.
ಹಲವು ಹೂಡಿಕೆದಾರರೂ ಕೂಡ ಹಿಂದೆ ಸರಿದಿದ್ದು, ಇದೀಗ ರವೀಂದ್ರನ್ ಹೋರಾಟ ತೀವ್ರಗೊಳಿಸಿದ್ದಾರೆ. ನಷ್ಟದ ವಿರುದ್ಧ ಹೋರಾಡುತ್ತಿರುವ ಇವರ ಹೋರಾಟಕ್ಕೆ ಜಯ ಲಭಿಸುತ್ತಾ ನೋಡಬೇಕು. ಆದರೆ ಉದ್ಯೋಗಿಗಳಿಗಾಗಿ ಮನೆಯನ್ನೇ ಅಡವಿಡಲು ನಿರ್ಧರಿಸುವ ಇಂತಹ ವ್ಯಕ್ತಿಯ ಕಠಿಣ ನಿರ್ಧಾರಕ್ಕೆ ಶಹಬ್ಬಾಶ್ ಎನ್ನಲೇಬೇಕು.