ನಟ ಸುದೀಪ್ ಗೆ ಬೆದರಿಕೆ ಹಾಕಿದ್ದ ಆರೋಪಿಯ ಬಂಧನ – ಬೆನ್ನಿಗೆ ಚೂರಿ ಹಾಕಿದ ಆಪ್ತ, ಸುದೀಪ್ ಮೇಲೆ ಅಂಥಾ ದ್ವೇಷವೇನಿತ್ತು?
- ಮನರಂಜನೆ
- May 6, 2023
- No Comment
- 642
ನ್ಯೂಸ್ ಆ್ಯರೋ : ಅಭಿನಯ ಚಕ್ರವರ್ತಿ, ನಟ ಸುದೀಪ್ ಅವರಿಗೆ ಇತ್ತೀಚೆಗೆ ಅಪರಿಚಿತ ಬೆದರಿಕೆ ಪತ್ರವೊಂದು ಬಂದಿದ್ದು ಭಾರೀ ಸಂಚಲನ ಸೃಷ್ಟಿಸಿತ್ತು. ಇದೀಗ ಪ್ರಕರಣವನ್ನು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಅಚ್ಚರಿ ಎಂದರೆ ಸುದೀಪ್ ಆಪ್ತ, ನಿರ್ದೇಶಕ ರಮೇಶ್ ಕಿಟ್ಟಿ ಆರೋಪಿ ಎಂದು ಗುರುತಿಸಲಾಗಿದೆ.
ಕಿಚ್ಚ ಸುದೀಪ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾಗಿದ್ದ ರಮೇಶ್ ಕಿಟ್ಟಿ ಸುದೀಪ್ ಜೊತೆಗೆ ಹಣಕಾಸು ವಿಷಯವಕ್ಕೆ ಭಿನ್ನಾಭಿಪ್ರಾಯ ಉಂಟಾದ ಹಿನ್ನಲೆಯಲ್ಲಿ ಅನಾಮಧೇಯ ಬೆದರಿಕೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಚಾರಿಟೇಬಲ್ ಟ್ರಸ್ಟ್ಗೆ ರಮೇಶ್ ಎರಡು ಕೋಟಿ ರೂ. ಹೂಡಿಕೆ ಮಾಡಿದ್ದರಂತೆ. ಆ ಹಣವನ್ನು ವಾಪಸ್ ಕೇಳಿದಾಗ ಸುದೀಪ್ ಕೊಡಲಿಲ್ಲ ಎಂಬ ಕಾರಣಕ್ಕೆ ಸುದೀಪ್ಗೆ ಅನಾಮಧೇಯ ಬೆದರಿಕೆ ಪತ್ರ ಬರೆದಿದ್ದಾರೆ. ತಾವೇ ಬೆದರಿಕೆ ಪತ್ರ ಬರೆದಿರುವುದಾಗಿ ಸಿಸಿಬಿ ಪೊಲೀಸರ ಬಳಿ ರಮೇಶ್ ಕಿಟ್ಟಿ ಒಪ್ಪಿಕೊಂಡಿದ್ದಾರೆಂದು ಹೇಳಲಾಗುತ್ತಿದೆ. ತನಿಖೆ ಮುಂದುವರಿದಿದೆ.
ಪ್ರಕರಣದ ಹಿನ್ನೆಲೆ
ಇತ್ತೀಚೆಗೆ ಸುದೀಪ್ಗೆ ಎರಡು ಬೆದರಿಕೆ ಪತ್ರಗಳು ಬಂದಿದ್ದವು. ಖಾಸಗಿ ವೀಡಿಯೋ ಲೀಕ್ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು. ಅಲ್ಲದೆ ಅವಾಚ್ಯ ಶಬ್ದಗಳನ್ನು ಸಹ ಬಳಸಲಾಗಿತ್ತು. ಈ ಬಗ್ಗೆ ಸುದೀಪ್ ಆಪ್ತ, ನಿರ್ಮಾಪಕ ಜಾಕ್ ಮಂಜು ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರಂಭದಲ್ಲಿ ಸುದೀಪ್ ಬಿಜೆಪಿ ಸೇರ್ಪಡೆ ಹಿನ್ನೆಲೆಯಲ್ಲಿ ಈ ರೀತಿಯ ಬೆಳವಣಿಗೆ ನಡೆದಿದೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಇದನ್ನು ತಳ್ಳಿ ಹಾಕಿದ್ದ ಸುದೀಪ್, ”ಇದು ರಾಜಕೀಯದವರ ಕೃತ್ಯ ಅಲ್ಲ. ಇದನ್ನು ನಮ್ಮವರೇ ಮಾಡಿದ್ದಾರೆ. ಅದು ಯಾರೆಂದು ಗೊತ್ತಿದೆ. ಅವರಿಗೆ ಕಾನೂನಾತ್ಮಕವಾಗಿ ತಕ್ಕ ಉತ್ತರವನ್ನೇ ನೀಡಲಿದ್ದೇನೆ” ಎಂದಿದ್ದರು.
ತನಿಖೆ ಮುಂದುವರಿಸಿದ ಸಿಸಿಬಿ ಪೊಲೀಸರು, ಆಪ್ತರೇ ಈ ಕೃತ್ಯ ಎಸಗಿರುವುದಾಗಿ ಸುದೀಪ್ ಅನುಮಾನ ವ್ಯಕ್ತಪಡಿಸಿದ್ದ ಕಾರಣ ವಿಚಾರಣೆ ನಡೆಸಿದಾಗ ರಮೇಶ್ ಕಿಟ್ಟಿ ಸಿಕ್ಕಿ ಬಿದ್ದಿದ್ದು, ಅವರನ್ನು ಇದೀಗ ಬಂಧಿಸಲಾಗಿದೆ. ಈ ಹಿಂದೆ ಹಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ರಮೇಶ್ ಕಿಟ್ಟಿ, 2004ರಲ್ಲಿ ಒಂದು ಕನ್ನಡ ಸಿನಿಮಾ ನಿರ್ದೇಶನವನ್ನೂ ಮಾಡಿದ್ದಾರೆ. ಆ ಬಳಿಕ ಕಿಚ್ಚ ಸುದೀಪ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾಗಿದ್ದರು.