ಪತ್ನಿಯನ್ನು ಕೊಲ್ಲಲೆಂದೇ 230ಕಿಮೀ ಪ್ರಯಾಣಿಸಿ ಬಂದ ಪತಿ – 150 ಮಿಸ್ ಕಾಲ್, 15 ನಿಮಿಷ ಲಾಕ್ ಆಗಿತ್ತು ರೂಂ : ಏನಿದು ವೈರಲ್ ಸ್ಟೋರಿ?
- ಕರ್ನಾಟಕ
- November 9, 2023
- No Comment
- 178
ನ್ಯೂಸ್ ಆ್ಯರೋ : ತನ್ನ 150 ಕರೆಗಳನ್ನು ನಿರ್ಲಕ್ಷಿಸಿದ ಕಾರಣಕ್ಕೆ ಪತ್ನಿಯನ್ನು ಕತ್ತು ಹಿಸುಕಿ ಪೊಲೀಸ್ ಪೇದೆಯೊಬ್ಬ ಕೊಲೆ ಮಾಡಿದ ಘಟನೆ ನಡೆದಿದೆ.
ಪೊಲೀಸ್ ಕಾನ್ಸ್ಟೇಬಲ್ ಕಿಶೋರ್ ಡಿ. (32) ಚಾಮರಾಜನಗರದ ರಾಮಸಮುದ್ರದ ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು. 11 ದಿನಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ ಪತ್ನಿ ತನಗೆ ಮೋಸ ಮಾಡುತ್ತಿದ್ದಾಳೆ ಎಂಬ ಶಂಕೆಯಿಂದ ಹತ್ಯೆ ಮಾಡಿದ್ದಾನೆ.
ಪತ್ನಿಯ ಮೇಲಿನ ಅನುಮಾನದಿಂದ ಕಿಶೋರ್ ಹೊಸಕೋಟೆಯಲ್ಲಿದ್ದ ಪತ್ನಿ ತವರು ಮನೆಗೆ 230 ಕಿಲೋ ಮೀಟರ್ ದೂರ ಪ್ರಯಾಣ ಮಾಡಿ ಬಂದಿದ್ದಾನೆ. ಬಳಿಕ ತಾನು ಕೀಟನಾಶಕ ಸೇವಿಸಿ ಪತ್ನಿಯನ್ನು ದುಪ್ಪಟ್ಟಾದಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಸದ್ಯ ಕಿಶೋರ್ ಸ್ಥಿತಿ ಚಿಂತಾಜನಕವಾಗಿದ್ದು, ಹೊಸಕೋಟೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆತ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ವಶಕ್ಕೆ ಪಡೆಯುವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರತಿಭಾ (24 ) ಮೃತರು. ಕಿಶೋರ್ ಮತ್ತು ಪ್ರತಿಭಾ ಕಳೆದ ವರ್ಷ ನವೆಂಬರ್ನಲ್ಲಿ ಮದುವೆಯಾಗಿತ್ತು.
ಭಾನುವಾರ ಸಂಜೆ ಕಿಶೋರ್ ಪ್ರತಿಭಾಗೆ ಕರೆ ಮಾಡಿ ಗದರಿಸುತ್ತಿದ್ದ. ಇದನ್ನು ನೋಡಿದ ಪ್ರತಿಭಾ ಅವರ ತಾಯಿ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಅವರ ಯಾವುದೇ ಕರೆಗಳನ್ನು ಸ್ವೀಕರಿಸದಂತೆ ಕೇಳಿಕೊಂಡರು. ಮರುದಿನ ಬೆಳಗ್ಗೆ ಕಿಶೋರ್ನಿಂದ 150 ಮಿಸ್ ಕಾಲ್ಗಳು ಬಂದಿರುವುದನ್ನು ಪ್ರತಿಭಾ ನೋಡಿದ್ದಳು.
ಸೋಮವಾರ ಬೆಳಗ್ಗೆ 11.30 ರ ಸುಮಾರಿಗೆ ಕಿಶೋರ್ ತನ್ನ ಅತ್ತೆಯ ಮನೆಗೆ ಬಂದು ಮೊದಲ ಮಹಡಿಯ ಕೋಣೆಯ ಬಾಗಿಲನ್ನು ಒಳಗಿನಿಂದ ಲಾಕ್ ಮಾಡಿ ತಾನು ಮೊದಲು ಕೀಟನಾಶಕವನ್ನು ಸೇವಿಸಿ, ಬಳಿಕ ಹೆಂಡತಿಯನ್ನು ಕತ್ತು ಹಿಸುಕಿ ಕೊಂದಿದ್ದಾನೆ. ಪ್ರತಿಭಾ ಅವರ ತಾಯಿ ಹಲವಾರು ಬಾರಿ ಬಾಗಿಲು ಬಡಿದರೂ ತೆರೆಯಲಿಲ್ಲ. 15 ನಿಮಿಷಗಳ ಬಳಿಕ ತಾನು ಹೆಂಡತಿಯನ್ನು ಕೊಂದಿರುವುದಾಗಿ ಬಾಗಿಲು ತೆರೆದು ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.