ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಚಂಪಾಷಷ್ಠಿ ಮಹೋತ್ಸವ ಆರಂಭ – ಲಕ್ಷದೀಪೋತ್ಸವ, ಬ್ರಹ್ಮರಥೋತ್ಸವದ ವಿವರ ಇಲ್ಲಿದೆ..
- ಧಾರ್ಮಿಕ
- December 11, 2023
- No Comment
- 560
ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ಪಾವಿತ್ರ್ಯತೆಯನ್ನು ಉಳಿಸಿಕೊಂಡು ಭಕ್ತರ ನಂಬಿಕೆಯ ತಾಣವಾಗಿ ಉಳಿದಿರುವ ಅನೇಕ ಪುರಾಣಪ್ರಸಿದ್ಧ ದೇವಾಲಯಗಳಿವೆ. ದೇವಾಲಯದಲ್ಲಿ ಜರಗುವ ರಥೋತ್ಸವ, ಜಾತ್ರಾ ಮಹೋತ್ಸವವನ್ನು ಕಣ್ತುಂಬಿಸಿಕೊಳ್ಳುವುದೇ ಖುಷಿ.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಡಿಸೆಂಬರ್ 10 ರಿಂದ ಕುಕ್ಕೆ ಚಂಪಾಷಷ್ಠಿ ಮಹೋತ್ಸವ” ಆರಂಭಗೊಂಡಿದೆ. ದೇವರು ಕೊಪ್ಪರಿಗೆ ಏರುವುದರ ಮೂಲಕ ಜಾತ್ರೆ ಆರಂಭವಾಗಿದೆ. ಈಗಾಗಲೇ ಭಕ್ತರು ಕುಕ್ಕೆಗೆ ಆಗಮಿಸುತ್ತಿದ್ದಾರೆ. ಚಂಪಾಷಷ್ಠಿ ಅಂಗವಾಗಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಡಿ.12ರಂದು ಲಕ್ಷದೀಪೋತ್ಸವ, ಡಿ.16ರಂದು ಚೌತಿ ಹೂವಿನ ತೇರಿನ ಉತ್ಸವ ನಡೆಯಲಿವೆ. ಇದಕ್ಕಾಗಿ ತಯಾರಿಯೂ ಜೋರಾಗಿದೆ.
ಷಷ್ಠಿ ಮಹೋತ್ಸವ ಆರಂಭ ಯಾವಾಗ..?
ಚಂಪಾಷಷ್ಠಿ ಭಾಗವಾಗಿ ಪ್ರಮುಖವಾಗಿ ನಡೆಯುವುದು ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ. ಡಿ.17ರಂದು ಪಂಚಮಿ ರಥೋತ್ಸವ ಡಿ.18 ರಂದು ಬೆಳಗ್ಗೆ “ಚಂಪಾಷಷ್ಠಿ” ಬ್ರಹ್ಮರಥೋತ್ಸವ ಡಿ.19 ರಂದು ಅವಭ್ರಥೋತ್ಸವ ಮತ್ತು ನೌಕವಿಹಾರ, ಡಿ.24 ರಂದು ಕೊಪ್ಪರಿಗೆ ಇಳಿಯುವುದರ ಮೂಲಕ ಜಾತ್ರೆ ಸಮಾಪನಗೊಳ್ಳಲಿದೆ.
ಅಂದು ರಾತ್ರಿ ನೀರಿನಲ್ಲಿ ಬಂಡಿ ಉತ್ಸವ ನೆರವೇರಲಿದೆ ಹಾಗೂ ಪುರುಷರಾಯ, ಹೊಸಳಿಗಮ್ಮ ಹಾಗೂ ಪರಿವಾರ ದೈವಗಳ ನಡಾವಳಿ ನಡೆಯಲಿವೆ.
ಕುಕ್ಕೆ ಸುಬ್ರಹ್ಮಣ್ಯ ಷಷ್ಠಿಯ ವಿಶೇಷತೆ ಏನು..?
ಕುಕ್ಕೆ ಸುಬ್ರಮಣ್ಯ ದೇವರನ್ನು ಬೆಳಕಿಗೆ ತಂದಂತಹ ಪ್ರತೀತಿ ಇರುವ ಮಲೆಕುಡಿಯ ಆದಿವಾಸಿ ಜನಾಂಗದವರು ಚಂಪಾಷಷ್ಠಿ ವೇಳೆಯಲ್ಲಿ ವಿಶಿಷ್ಟವಾಗಿ ಬೆತ್ತದಿಂದ ಬ್ರಹ್ಮರಥವನ್ನು ನಿರ್ಮಿಸುವುದು ಪಾರಂಪರಿಕ ವಾಡಿಕೆಯಾಗಿದೆ. ಬೃಹತ್ ಬ್ರಹ್ಮರಥವನ್ನು ಪ್ರತ್ಯೇಕವಾಗಿ ಹಗ್ಗಗಳ ಬಳಕೆ ಇಲ್ಲದೆ ಬರೀ ಬಿದುರು ಮತ್ತು ಬೆತ್ತದಲ್ಲಿ ಕೌಶಲ್ಯಕರವಾಗಿ ನಿರ್ಮಿಸುವುದು ಇದರ ವಿಶಿಷ್ಟತೆ.
ಹೂವಿನಂತೆ ಬೆತ್ತ ಸುರಿದು, ಯಾವುದೇ ಗಂಟುಗಳಿಲ್ಲದೆ, ಹಗ್ಗ ಬಳಸದೆ ಬೆತ್ತದಿಂದ ರಥ ರಚಿಸುವುದನ್ನು ನೋಡುವುದೇ ಒಂದು ಆನಂದ. ಕುಕ್ಕೆ ಸುಬ್ರಹ್ಮಣ್ಯ ಚಂಪಾಷಷ್ಠಿ ವೇಳೆ ಸುಬ್ರಹ್ಮಣ್ಯ ಕ್ಷೇತ್ರದ ಮೂಲ ನಿವಾಸಿಗಳ ಕೈಚಳಕದಲ್ಲಿ ಬೆತ್ತದ ತೇರು ಸುಂದರ ಕಲಾಕೃತಿಯಂತೆ ನಿರ್ಮಾಣಗೊಳ್ಳುತ್ತಿದೆ.ನಾಗರಾಧನೆಗೆ ಪ್ರಸಿದ್ಧಿ ಪಡೆದ ಪುಣ್ಯಕ್ಷೇತ್ರ ಕುಕ್ಕೆಯಲ್ಲಿ ಚಂಪಾಷಷ್ಠಿಗೆ ಚಾಲನೆ ದೊರಕಿದೆ. ಇಲ್ಲಿನ ಮೂಲ ನಿವಾಸಿಗಳಾದ ಮಲೆಕುಡಿಯರಿಂದ ಬೆತ್ತದ ರಥ ನಿರ್ಮಾಣ ನಡೆಯುತ್ತಿದೆ. ಭಾರೀ ಗಾತ್ರದ ಬೆತ್ತವನ್ನು ಎಂಟು ಆಕಾರದಲ್ಲಿ ರಥದ ಮೇಲ್ಭಾಗಕ್ಕೆ ಬಿಗಿದು, ರಥದ ಅಟ್ಟೆಯನ್ನು ಬಿದಿರು ಹಾಗೂ ಬೆತ್ತಗಳಿಂದ ರಚಿಸುತ್ತಾರೆ. ಇಲ್ಲಿ ಯಾವುದೇ ಗಂಟುಗಳನ್ನು ಹಾಕುವುದಿಲ್ಲ. ಬೆತ್ತವನ್ನು ಹೂವಿನಂತೆ ಪೋಣಿಸಿ ರಥವನ್ನು ಗಟ್ಟಿ ಮಾಡಲಾಗುತ್ತದೆ.
ತೇರನ್ನೇರುವ ವೇಳೆ ರಥದ ಸುತ್ತ ಪತಾಕೆಗಳಿಂದ ಅಲಂಕರಿಸುತ್ತಾರೆ. ರಥ ನಿಮಾಣ ಕಾರ್ಯದಲ್ಲಿ ಯುವಕರು, ವೃದ್ಧರು ಉತ್ಸಾಹದಿಂದ ಭಾಗವಹಿಸುತ್ತಾರೆ. 20 ಯುವಕರು, 30 ಹಿರಿಯರ ಸಹಿತ 50 ಜನ ಬೆತ್ತದ ರಥ ನಿರ್ಮಿಸಿದ್ದಾರೆ.
ಒಟ್ಟಾರೆಯಾಗಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬೇರೆ ಬೇರೆ ರಾಜ್ಯಗಳಿಂದ, ಊರುಗಳಿಂದ ಭಕ್ತರು ಆಗಮಿಸುತ್ತಲೇ ಇರುತ್ತಾರೆ. ಈ ಷಷ್ಠಿ ಮಹೋತ್ಸವವಂತೂ ಅವರಿಗೂ ವಿಶೇಷ.