ತಾತನಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಿ – ರಾಹುಲ್ ಗಾಂಧಿಗೆ ಬರೆದ ಶಾಸಕ ಜಯಚಂದ್ರ ಮೊಮ್ಮಗಳ ಪತ್ರ ವೈರಲ್
- ರಾಜಕೀಯ
- May 29, 2023
- No Comment
- 152
ನ್ಯೂಸ್ ಆ್ಯರೋ : ಪೂರ್ಣ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಗೆ ಸಚಿವರ ನೇಮಕ ತಲೆ ನೋವಾಗಿತ್ತು. ಅಂತೂ ಇಂತು ಸರ್ಕಸ್ ಮಾಡಿ ಖಾತೆ ಹಂಚಲಾಗಿದೆ. ಇದೀಗ ಸಚಿವ ಸ್ಥಾನದ ಆಕಾಂಕ್ಷಿಗಳು ಅಸಮಾಧಾನ ಹೊರ ಹಾಕ ತೊಡಗಿದ್ದಾರೆ. ಈ ಮಧ್ಯೆ ಬಾಲಕಿಯೊಬ್ಬಳು ತನ್ನ ತಾತನಿಗೆ ಸಚಿವ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಬರೆದ ಪತ್ರ ವೈರಲ್ ಆಗಿದೆ.
ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ತಾತನಿಗೆ ಸ್ಥಾನ ನೀಡದ್ದಕ್ಕೆ ಏಳರ ಹರೆಯದ ಬಾಲಕಿ ಅರ್ನಾ ಸಂದೀಪ್ ಬೇಸರಗೊಂಡಿದ್ದಾಳೆ. ಇವಳು ಹಿರಿಯ ಕಾಂಗ್ರೆಸ್ ಶಾಸಕ ಟಿ.ಬಿ.ಜಯಚಂದ್ರ ಅವರ ಮೊಮ್ಮಗಳು.
ನನ್ನ ಅಜ್ಜ ತುಂಬಾ ಸಮರ್ಥ ಮತ್ತು ಶ್ರಮಶೀಲ ವ್ಯಕ್ತಿ. ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಿ ಎಂದು ರಾಹುಲ್ ಗಾಂಧಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾಳೆ.
ತನ್ನ ತಾತನಿಗೆ ಸಚಿವ ಸ್ಥಾನ ಸಿಗಲಿಲ್ಲ ಎಂದು ಬೇಸರಗೊಂಡಿದ್ದ ಅವಳಿಗೆ ಮನೆಯವರು ರಾಹುಲ್ ಗಾಂಧಿಗೆ ಪತ್ರ ಬರೆಯುವಂತೆ ಸುಮ್ಮನೆ ಹೇಳಿದ್ದರು. ಅರ್ನಾ ಇದನ್ನು ಗಂಭೀರವಾಗಿ ಪರಿಗಣಿಸಿ ಪತ್ರ ಬರೆದಿದ್ದಾಳೆ ಎಂದು ಅವಳ ತಂದೆ ತಿಳಿಸಿದ್ದಾರೆ.
ಈ ಮಧ್ಯೆ ಸಚಿವ ಸಂಪುಟದಲ್ಲಿ ಕುಂಚಿಟಿಗ ಸಮುದಾಯಕ್ಕೆ ಪ್ರಾತಿನಿಧ್ಯ ಸಿಗದೆ ಅನ್ಯಾಯವಾಗಿದೆ ಎಂದು ಟಿ.ಬಿ.ಜಯಚಂದ್ರ ಬೆಂಬಲಿಗರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆ ಮುಂದೆ ಧರಣಿ ನಡೆಸಿದ್ದರು.