ಗೋಕರ್ಣದಲ್ಲಿ ಪಿತೃಕಾರ್ಯ ನೆರವೇರಿಸಿದ ಮುಸ್ಲಿಂ ಕುಟುಂಬ – ಮಾನಸಿಕ ನೆಮ್ಮದಿಗೂ ಜ್ಯೋತಿಷ್ಯರ ಮೊರೆ ಹೋಗಿತ್ತು ಈ ಕುಟುಂಬ..!!
- ರಾಷ್ಟ್ರೀಯ ಸುದ್ದಿ
- October 7, 2023
- No Comment
- 161
ನ್ಯೂಸ್ ಆ್ಯರೋ : ಪಿತೃಪಕ್ಷದ ಪರ್ವಕಾಲದಲ್ಲಿ ಧಾರವಾಡದ ಮುಸ್ಲಿಂ ಕುಟುಂಬವೊಂದು ಈಚೆಗೆ ಗೋಕರ್ಣದಲ್ಲಿ ಪಿತೃಕಾರ್ಯ ನೆರವೇರಿಸಿರುವ ಘಟನೆ ನಡೆದಿದೆ.
ಧಾರವಾಡದಲ್ಲಿ ಮರದ ಕೆಲಸ ಮಾಡುವ ಮುಸ್ಲಿಂ ಕುಟುಂಬದ ಸದಸ್ಯರು ಜ್ಯೋತಿಷಿಯೊಬ್ಬರ ಸಲಹೆ ಮೇರೆಗೆ ನಾರಾಯಣ ಬಲಿ, ತ್ರಿಪಿಂಡಿ ಶ್ರಾದ್ಧ ಮತ್ತು ತಿಲ ಹವನವನ್ನು ಇಲ್ಲಿಯ ಪಿತೃಶಾಲೆಯಲ್ಲಿ ನೆರವೇರಿಸಿದರು.
ಹಿಂದೂ ಸಂಪ್ರದಾಯದ ಜತೆ ಹಿಂದಿನಿಂದಲೂ ನಂಟು
ಈ ಬಗ್ಗೆ ಕುಟುಂಬದ ಶಂಶಾದ್ ಅವರು ಪ್ರತಿಕ್ರಿಯಿಸಿ, ಮೊದಲಿನಿಂದಲೂ ಹಿಂದೂ ಸಂಪ್ರದಾಯದ ಕೆಲ ಆಚರಣೆಗಳನ್ನು ಪಾಲಿಸುತ್ತಿದ್ದೇವೆ. ನಮ್ಮ ತಂದೆ ಗದಗಿನ ವೀರನಾರಾಯಣ ದೇವಸ್ಥಾನದ ಬಳಿ ಬ್ರಾಹ್ಮಣ ಮತ್ತು ಲಿಂಗಾಯತ ಸಮುದಾಯದವರ ಜತೆ ಬೆಳೆದವರು. ತಮ್ಮನಿಗೆ ಮದುವೆ ಮಾಡಲು ಹೆಣ್ಣು ಸಿಗದಿದ್ದಾಗ, ಜ್ಯೋತಿಷಿಯ ಮೊರೆ ಹೋಗಿದ್ದೆವು. ಅವರ ಸಲಹೆಯಂತೆ ತಮ್ಮನ ಮದುವೆ, ಮಾನಸಿಕ ಶಾಂತಿಗೆ ಈ ಕಾರ್ಯವನ್ನು ಮಾಡಿದ್ದೇವೆ ಎಂದರು.
ಪುರೋಹಿತರಾದ ನಾಗರಾಜ ಭಟ್ ಗುರ್ಲಿಂಗ್, ಸುಬ್ರಮಣ್ಯ ಚಿತ್ರಿಗೆಮಠ ನೇತೃತ್ವದಲ್ಲಿ ಪೂಜೆ ಕಾರ್ಯ ನೆರವೇರಿಸಿದರು. ಈ ಬಗ್ಗೆ ಅರ್ಚಕರು ಪ್ರತಿಕ್ರಿಯಿಸಿ, ಗೋಕರ್ಣದಲ್ಲಿ ಕ್ರೈಸ್ತ ಸಮುದಾಯದವರು ಪಿತೃಕಾರ್ಯ ನೆರವೇರಿಸಿದ ಉದಾಹರಣೆಗಳಿವೆ. ಆದರೆ, ಮುಸ್ಲಿಂ ಕುಟುಂಬ ಪಿತೃಕಾರ್ಯ ಮಾಡಿದ್ದು ಅಪರೂಪ ಎಂದರು.