ಆರು ತಿಂಗಳ ಬಳಿಕ ಬಾಗಿಲು ತೆರೆದ ಕೇದಾರನಾಥ ದೇಗುಲ – ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ
- ರಾಷ್ಟ್ರೀಯ ಸುದ್ದಿ
- April 25, 2023
- No Comment
- 170
ನ್ಯೂಸ್ ಆ್ಯರೋ : ಚಳಿಗಾಲದ ಹಿಮದಿಂದಾಗಿ ಕಳೆದ 6 ತಿಂಗಳು ಮುಚ್ಚಲಾಗಿದ್ದ ಕೇದಾರನಾಥ ದೇವಸ್ಥಾನದ ಬಾಗಿಲನ್ನು ಇಂದು ಬೆಳಗ್ಗೆ ತೆರೆಯಲಾಗಿದೆ. ಬೆಳಿಗ್ಗೆ 6 ಗಂಟೆ 20ನಿಮಿಷಕ್ಕೆ ವೇದಘೋಷದೊಂದಿಗೆ ಕೇದಾರನಾಥ ಧಾಮದ ಬಾಗಿಲು ಭಕ್ತರ ದರ್ಶನಕ್ಕಾಗಿ ತೆರೆಯಲಾಯಿತು.
ಈ ಸಂದರ್ಭದಲ್ಲಿ ಸಾವಿರಾರು ಭಕ್ತರಿಂದ ಹರಹರ ಮಹಾದೇವ್ ಎಂಬ ಘೋಷಣೆ ಮತ್ತು ದೈವ ಕೀರ್ತನೆಗಳು ಕೇದಾರ್ ಧಾಮ್ನಲ್ಲಿ ಪ್ರತಿಧ್ವನಿಸಿದವು. ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಕೂಡ ಕೇದಾರ್ ಧಾಮದಲ್ಲಿ ಹಾಜರಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಅವರು ಸಾಕ್ಷಿಯಾದರು.
ಸಡಗರದ ನಡುವೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಕೇದಾರನಾಥ್ ಪಂಚಮುಖಿ ಭೋಗ್ ವಿಗ್ರಹ, ಚಾಲ್ ಉತ್ಸವ ವಿಗ್ರಹಗಳನ್ನ ಡೋಲಿಯಲ್ಲಿ ಇರಿಸಿ ರಾವಲ್ ನಿವಾಸದಿಂದ ದೇವಾಲಯದ ಆವರಣಕ್ಕೆ ತರಲಾಯಿತು. ಈ ವೇಳೆ ದಾರಿ ಉದ್ದಕ್ಕೂ ಭಕ್ತರ ಹರಹರ ಮಹಾದೇವ್ ಎಂಬ ಘೋಷಣೆಗಳು ಮೊಳಗಿದವು.
ಕೇದಾರನಾಥ ದೇಗುಲದ ದ್ವಾರಗಳನ್ನು ತೆರೆದ ನಂತರ, ಭಕ್ತರು ಕೇದಾರೇಶ್ವರನ ದರ್ಶನ ಪಡೆದರು. ಕೇದಾರನಾಥ್ ದೇವಸ್ಥಾನದ ಮಹಾದ್ವಾರ ತೆರೆಯುವ ಮುನ್ನ 23 ಕ್ವಿಂಟಲ್ ವಿವಿಧ ಹೂವುಗಳಿಂದ ಇಡೀ ದೇವಸ್ಥಾನವನ್ನು ಅಲಂಕಾರ ಮಾಡಲಾಗಿತ್ತು. ಹವಾಮಾನ ವೈಪರೀತ್ಯದ ನಡುವೆಯೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕೇದಾರನಾಥ ಧಾಮಕ್ಕೆ ಆಗಮಿಸಿದ್ದರು. ಇನ್ನು ಕೇದಾರನಾಥ ಧಾಮದಲ್ಲಿ ಹಿಮಪಾತವು ಆಗುತ್ತಿದೆ. ಅಲ್ಲದೇ ಮುಂದಿನ ಕೆಲವು ದಿನಗಳಲ್ಲಿ ಮಳೆ ಮತ್ತು ಹಿಮಪಾತ ಆಗುವ ಬಗ್ಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಸಹ ನೀಡಿದೆ.
ಇಲ್ಲಿಗೆ ಬರುವ ಭಕ್ತರಿಗೆ ಆರೋಗ್ಯದ ಸಮಸ್ಯೆ ಎದುರಾದಲ್ಲಿ ತಕ್ಷಣ ಚಿಕಿತ್ಸೆಗಾಗಿ ವೈದ್ಯರ ತಂಡವನ್ನ ನಿಯೋಜನೆ ಮಾಡಲಾಗಿದೆ. ಹಾಗೆಯೇ ಯಾತ್ರೆಯ ಮಾರ್ಗಗಳಲ್ಲಿ 130 ವೈದ್ಯರನ್ನು ನಿಯೋಜಿಸಲಾಗಿದೆ. ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ, ಆಕ್ಸಿಜನ್ ಸಿಲಿಂಡರ್ಗಳು ಮತ್ತು ಔಷಧಗಳಿಗೂ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಸದ್ಯ ಹಿಮಾಪಾತವಾಗುತ್ತಿರುವ ಹಿನ್ನೆಲೆ ಕೇದಾರನಾಥ ಯಾತ್ರೆಯ ಮುಂಗಡ ನೋಂದಣಿ ಸ್ಥಗಿತಗೊಳಿಸಲಾಗಿದೆ.