8 ವರ್ಷದ ಬಳಿಕ ಪತ್ತೆಯಾಯ್ತು ಗುರುವಾಯನಕೆರೆ ಏಕನಾಥ ಶೆಟ್ಟಿ ಸಹಿತ 29 ಯೋಧರಿದ್ದ ಯುದ್ಧ ವಿಮಾನ – ಏಕನಾಥ ಶೆಟ್ಟಿ ಫ್ಯಾಮಿಲಿ ಈಗ ಹೇಗಿದೆ?
- ರಾಷ್ಟ್ರೀಯ ಸುದ್ದಿ
- January 13, 2024
- No Comment
- 2341
ನ್ಯೂಸ್ ಆ್ಯರೋ : ಯೋಧರು ಅಂದ ಮೇಲೆ ಅವರು ಎಂತಹ ಕಠಿಣ ಪರಿಸ್ಥಿತಿಗಳನ್ನೂ ಎದೆಯೊಡ್ಡಿ ನಿಂತು ಎದುರಿಸುವ ಸಾಮರ್ಥ್ಯ ಹೊಂದಿರಬೇಕು. ಇವರ ಇಂತಹ ವ್ಯಕ್ತಿತ್ವದಿಂದಲೇ ನಾವೂ ಸುರಕ್ಷಿತವಾಗಿ ನೆಮ್ಮದಿಯಿಂದ ನಿದ್ರಿಸಲು ಸಾಧ್ಯವಾಗೋದು. ಅದೆಷ್ಟೋ ಬಾರಿ ಗುಂಡಿಗೆ ಬಲಿಯಾಗಿ ಯೋಧರು ಪ್ರಾಣತ್ಯಾಗ ಮಾಡುತ್ತಾರೆ. ಇನ್ನು ಕೆಲವೊಮ್ಮೆ ಯುದ್ಧವಿಮಾನ ಸ್ಫೋಟಗೊಂಡು ಬಲಿತ್ಯಾಗ ಆಗೋದು ಇದೆ. ಇದೀಗ ವಾಯುಸೇನಾ ಇತಿಹಾಸದಲ್ಲೇ ಮೊದಲಾಗಿರುವ ಅದೆಷ್ಟೋ ವರ್ಷದ ಹಿಂದಿನ ಘಟನೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಹೌದು.8 ವರ್ಷಗಳ ಬಳಿಕ ಸಮುದ್ರದ ಆಳದಲ್ಲಿ ಭಾರತೀಯ ಸೇನಾ ವಿಮಾನ ಪತ್ತೆಯಾಗಿದೆ.
ಚೆನ್ನೈ ನೌಕಾನೆಲೆಯಿಂದ 310 ಕಿಲೋಮೀಟರ್ ದೂರದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿವೆ. ಅಂದು ಕಣ್ಮರೆಯಾಗಿದ್ದ ವಿಮಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಯೋಧ ಏಕನಾಥಶೆಟ್ಟಿ ಸೇರಿದಂತೆ 29 ಜನರಿದ್ದರು.
8ವರ್ಷಗಳ ಹಿಂದೆ ನಿಜಕ್ಕೂ ನಡೆದಿದ್ದೇನು…?
2016ರ ಜುಲೈ 22ರಂದು ಸೇನಾ ಕರ್ತವ್ಯದ ಕಾರಣದಿಂದಾಗಿ ಚೆನ್ನೈಯ ತಾಂಬರಂ ವಾಯುನೆಲೆಯಿಂದ ಅಂಡಮಾನ್ನ ಪೋರ್ಟ್ಬ್ಲೇರ್ಗೆ ಪ್ರಯಾಣ ಬೆಳೆಸಿದ್ದ ಭಾರತೀಯ ವಾಯುಸೇನೆಯ ಎಎನ್-32 ಯುದ್ಧ ವಿಮಾನ ಬಂಗಾಳಕೊಲ್ಲಿ ಸಮುದ್ರದ ಮೇಲೆ ಹಾರುತ್ತಿದ್ದಾಗ ಸಂಪರ್ಕ ಕಡಿತಗೊಂಡಿತ್ತು.
ಅದರಲ್ಲಿದ್ದ ಗುರುವಾಯನಕೆರೆಯ ಏಕನಾಥ ಶೆಟ್ಟಿ ಸೇರಿ 29 ಜನ ಸೈನಿಕರ ಸುಳಿವು ಕೂಡಾ ಸಿಕ್ಕಿರಲಿಲ್ಲ. ಬೆಳಗ್ಗೆ 8.30ಕ್ಕೆ ವಿಮಾನ ಹೊರಟಿದ್ದು, 9.12ಕ್ಕೆ ನಿಲ್ದಾಣದೊಂದಿಗಿನ ಸಂಪರ್ಕ ಕಡಿತಗೊಂಡಿತ್ತು. 11.45ಕ್ಕೆ ಪೋರ್ಟ್ಬ್ಲೇರ್ಗೆ ತಲುಪಬೇಕಿದ್ದ ವಿಮಾನ ಕಣ್ಮರೆಯಾಗಿರುವುದಾಗಿ ಮಧ್ಯಾಹ್ನ 1.50ಕ್ಕೆ ವಾಯುಸೇನೆ ಪ್ರಕಟಿಸಿತ್ತು. ಅಂದು ನಾಪತ್ತೆಯಾದ ವಿಮಾನ ಇದೀಗ ಪತ್ತೆಯಾಗಿದೆ ಎಂದು ವಾಯುಸೇನಾ ಪ್ರಕಟಣೆ ಹೊರಡಿಸಿದೆ.
ಅಂದು ಸುಳಿವಿಗಾಗಿ ಕೇಂದ್ರ ಸರಕಾರ ಹಾಗೂ ಮಿಲಿಟರಿ ತಜ್ಞರು ಸತತ ಮೂರು ತಿಂಗಳು ನಡೆಸಿದ್ದ ಪ್ರಯತ್ನಗಳೂ ಫೇಲ್ ಆಗಿದ್ದವು. ಇದಕ್ಕಾಗಿ ಎರಡು ಪಿ-8ಎ ವಿಮಾನ, ಮೂರು ಡೋರ್ನಿಯರ್ ವಿಮಾನ, ಒಂದು ಜಲಾಂತರ್ಗಾಮಿ, ನೌಕಾ ಸೇನೆಯ 12 ನೌಕೆಗಳನ್ನು ಬಳಸಲಾಗಿತ್ತು. ವಿಮಾನವೊಂದು ಕುರುಹೇ ಇಲ್ಲದಂತೆ ನಾಪತ್ತೆಯಾಗಿರುವುದು ವಾಯುಪಡೆಯ ಇತಿಹಾಸದಲ್ಲೇ ಪ್ರಥಮ ಬಾರಿ ಎಂದು ಹೇಳಲಾಗುತ್ತಿತ್ತು.
ಚೆನ್ನೈ ಕರಾವಳಿಯಿಂದ 310 ಕಿ.ಮೀ. ದೂರದಲ್ಲಿ ಪತ್ತೆ
ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ, ಇತ್ತೀಚೆಗೆ ಆಳ ಸಮುದ್ರದ ಅನ್ವೇಷಣೆಯೊಂದಿಗೆ ಸ್ವಾಯತ್ತ ನೀರೊಳಗಿನ ವಾಹನವನ್ನು ನಿಯೋಜಿಸಿತ್ತು. ಕಾಣೆಯಾದ ಎಎನ್-32 ಕೊನೆಯದಾಗಿ ತಿಳಿದಿರುವ ಸ್ಥಳದಲ್ಲಿ ಮಲ್ಟಿ-ಬೀಮ್ ಸೋನಾರ್ (ಸೌಂಡ್ ನ್ಯಾವಿಗೇಷನ್ ಮತ್ತು ರೇಂಜಿಂಗ್), ಸಿಂಥೆಟಿಕ್ ಅಪರ್ಚರ್ ಸೋನಾರ್ ಮತ್ತು ಹೈ ರೆಸಲ್ಯೂಶನ್ ಫೋಟೋಗ್ರಫಿ ಸೇರಿದಂತೆ ಬಹು ಪೇಲೋಡ್ಗಳನ್ನು ಬಳಸಿಕೊಂಡು 3400 ಮೀ ಆಳದಲ್ಲಿ ಈ ಹುಡುಕಾಟವನ್ನು ನಡೆಸಲಾಯಿತು.
ಹುಡುಕಾಟ ಚಿತ್ರಗಳ ವಿಶ್ಲೇಷಣೆಯು ಚೆನ್ನೈ ಕರಾವಳಿಯಿಂದ ಸರಿಸುಮಾರು 140 ನಾಟಿಕಲ್ ಮೈಲುಗಳಷ್ಟು (ಅಂದಾಜು. 310 ಕಿಮೀ) ಸಮುದ್ರದ ತಳದಲ್ಲಿ ಅಪಘಾತಕ್ಕೀಡಾದ ವಿಮಾನದ ಅವಶೇಷಗಳ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಸಂಭವನೀಯ ಅಪಘಾತದ ಸ್ಥಳದಲ್ಲಿ ಈ ಆವಿಷ್ಕಾರವು, ಅದೇ ಪ್ರದೇಶದಲ್ಲಿ ಯಾವುದೇ ಇತರ ಕಾಣೆಯಾದ ವಿಮಾನದ ವರದಿಯ ಯಾವುದೇ ದಾಖಲಿತ ಇತಿಹಾಸವಿಲ್ಲದೆ, ಅವಶೇಷಗಳು ಬಹುಶಃ ಅಪಘಾತಕ್ಕೀಡಾದ ಐಎಎಫ್ ಎಎನ್-32 (K-2743) ಗೆ ಸೇರಿದೆ ಎಂದು ಹೇಳಲಾಗಿದೆ.
ದ.ಕ ಮೂಲದ ಏಕನಾಥ ಶೆಟ್ಟಿ ಕುಟುಂಬ ಪ್ರಸ್ತುತ ಪರಿಸ್ಥಿತಿ ಹೇಗಿದೆ?
ಅಂದು ನಡೆದ ದುರಂತದಲ್ಲಿ ಎಲ್ಲವೂ ನಿಗೂಢವಾಗಿದ್ದರೂ ಸಾವಿನ ಬಗ್ಗೆಯೂ ಸರಿಯಾದ ಸುಳಿವು ಸಿಗದೇ ಇದ್ದರೂ ಏಕನಾಥ ಶೆಟ್ಟಿಯವರ ಬರುವಿಕೆಯ ನಿರೀಕ್ಷೆಯಲ್ಲಿ ಮಾತ್ರ ಪತ್ನಿ ಜಯಂತಿ ಶೆಟ್ಟಿ, ಮಕ್ಕಳಾದ ಅಕ್ಷಯ್, ಆಶಿಕಾ ಶೆಟ್ಟಿ ಮತ್ತು ಕುಂಬಸ್ಥರು ದಿನ ದೂಡುತ್ತಿದ್ದಾರೆ. ಏಕನಾಥ ಅವರ ಪತ್ನಿ ಜಯಂತಿ ಎಂ. ಪ್ರಸಕ್ತ ಪೆರಿಂಜೆ ಎಸ್ಡಿಎಂ ಶಾಲಾ ಶಿಕ್ಷಕಿಯಾಗಿದ್ದು, ಪುತ್ರಿ ಆಶಿಕಾ ಎಂಜಿನಿಯರಿಂಗ್ ಪೂರ್ಣಗೊಳಿಸಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ.
ಪುತ್ರ ಅಕ್ಷಯ್ ಎಂ. ಸಾಫ್ಟ್ವೇರ್ ಎಂಜಿನಿಯರಿಂಗ್ ಪೂರ್ಣಗೊಳಿಸಿದ್ದಾರೆ. ಪುತ್ರಿಗೆ ಇತ್ತೇಚೆಗೆ ವಿವಾಹವಾಗಿದ್ದು ಸರಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದು ಅದು ಈಡೇರಿಲ್ಲ. ಅತ್ತ ಸರಕಾರದಿಂದ ನಿವೃತ್ತ ಯೋಧರಿಗೆ ನೀಡಬೇಕಿದ್ದ ಸರಕಾರಿ ಸ್ಥಳವೂ ದೊರೆತಿಲ್ಲ. ಎಲ್ಲವೂ ಭರವಸೆಯಾಗಿಯೇ ಉಳಿದಿವೆ ಎಂದು ಅವರು ಕೂಡಾ ಅಳಲನ್ನು ತೋಡಿಕೊಂಡಿದ್ದಾರೆ.
ಯೋಧ ಏಕನಾಥ ಶೆಟ್ಟಿ ಅವರ ಹಿನ್ನೆಲೆ
ಕಾರ್ಗಿಲ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಏಕನಾಥ ಅವರು ಮಾಜಿ ಸೈನಿಕ ದಿವಂಗತ ಕೃಷ್ಣ ಶೆಟ್ಟಿ ಮತ್ತು ಸುನಂದಾ ದಂಪತಿಯ ಐವರು ಮಕ್ಕಳಲ್ಲಿ ನಾಲ್ಕನೆಯವರಾಗಿ 1965ರ ಜೂ. 30ರಂದು ಮಂಗಳೂರಿನ ಕುತ್ತಾರಿನಲ್ಲಿ ಜನಿಸಿದ್ದರು. ಪಿಯುಸಿ ಮುಗಿಸಿ 1985ರಲ್ಲಿ ಭೂ ಸೇನೆ (ಮದ್ರಾಸ್ ರೆಜಿಮೆಂಟ್)ಗೆ ಸೇರ್ಪಡೆಗೊಂಡು ತಮಿಳುನಾಡಿನ ವೆಲ್ಲಿಂಗ್ಟನ್ನಲ್ಲಿ ತರಬೇತಿ ಮುಗಿಸಿ, ಶ್ರೀಲಂಕಾ, ಸಿಕ್ಕಿಂ, ಅರುಣಾಚಲ ಪ್ರದೇಶ, ಕಾಶ್ಮೀರ ಸಹಿತ ದೇಶದ ಹಲವೆಡೆ ಸೇವೆ ಸಲ್ಲಿಸಿದ್ದರು.
1999ರಲ್ಲಿ ಮದ್ರಾಸ್ ರೆಜಿಮೆಂಟ್ನಲ್ಲಿ ನಾಯಕ್ ಹುದ್ದೆಗೆ ಪದೋನ್ನತಿ ಹೊಂದಿ 1999ರಲ್ಲಿ ನಡೆದ ಕಾರ್ಗಿಲ್ ಕಾರ್ಯಾಚರಣೆಯಲ್ಲಿ ಅಪ್ರತಿಮ ಸಾಹಸ ಮೆರೆದು ಸೇನಾ ಪದಕ (ಆಪರೇಷನ್ ವಿಜಯ್) ಪಡೆದುಕೊಂಡಿದ್ದರು. ಅಂದು ನಡೆದ ಘಟನೆ ಮಾತ್ರ ವಾಯುಸೇನಾ ಇತಿಹಾಸದಲ್ಲಿ ಗತಕಾಲದವರೆಗೂ ಮರೆಯದ್ದು. ಆದರೆ ಯುದ್ಧವಿಮಾನ ಪತ್ತೆಯಾದ ಈ ಸಂದರ್ಭ ಇನ್ನೇನು ಹೆಚ್ಚಿನ ಸುಳಿವು ಸಿಗಬಹುದೇನೋ ಎಂಬ ಭರವಸೆ.