ಸ್ವಂತಕ್ಕೆ ಬಳಸುವ ಕಾರ್ ಇರುವ ಮನೆಯ ಬಿಪಿಎಲ್ ಕಾರ್ಡ್ ರದ್ದು – ಸಚಿವ ಕೆ.ಎಚ್. ಮುನಿಯಪ್ಪ ಹೇಳಿಕೆ
- ಸರ್ಕಾರಿ ಸೇವೆಗಳು
- August 5, 2023
- No Comment
- 134
ನ್ಯೂಸ್ ಆ್ಯರೋ : ಅನ್ನಭಾಗ್ಯ ಯೋಜನೆಯಡಿ ಸೆಪ್ಟೆಂಬರ್ ತಿಂಗಳಿಂದ ಅಕ್ಕಿ ಕೊಡಲು ನಿರ್ಧರಿಸಿದ್ದೇವೆ. ಆದರೆ ಸೂಕ್ತ ದರಕ್ಕೆ ಅಕ್ಕಿ ಸಿಗದೇ ಇದ್ದರೆ ಎರಡು ಮೂರು ತಿಂಗಳು ವಿಳಂಬ ಆಗುವ ಸಾಧ್ಯತೆ ಇದೆ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ವೇಳೆ ಸ್ವಂತ ಕಾರು ಇರುವ ಕುಟುಂಬದ ಬಿಪಿಎಲ್ ಕಾರ್ಡ್ ರದ್ದಾಗುವ ಬಗ್ಗೆ ಸುಳಿವು ನೀಡಿದ್ದಾರೆ.
ಜೀವನೋಪಾಯಕ್ಕಾಗಿ ಹಳದಿ ಬೋರ್ಡ್ ಅಳವಡಿಸಿ ಕಾರು ಹೊಂದಿರುವವರ ಕಾರ್ಡ್ ರದ್ದು ಆಗಿದ್ದರೆ ಅದನ್ನು ಪರಿಶೀಲಿಸಿ ವಾಪಸ್ ಪಡೆಯೋ ಬಗ್ಗೆ ನಿರ್ಧರಿಸಲಾಗುವುದು. ಆದರೆ ಬಿಳಿ ಬೋರ್ಡ್ ಕಾರು ಇರುವವರ ಕಾರ್ಡ್ ರದ್ದು ಆದೇಶ ವಾಪಸ್ ಪಡೆಯುವುದಿಲ್ಲ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಡಿ ಜುಲೈ ತಿಂಗಳಲ್ಲಿ 1.28 ಕೋಟಿ ಕುಟುಂಬಗಳಿಗೆ 566 ಕೋಟಿ ರೂ. ಹಣ ಸಂದಾಯವಾಗಿದೆ. 3.40 ಲಕ್ಷ ಫಲಾನುಭವಿಗಳ ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇಲ್ಲ, ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಜೋಡಣೆಯಾಗದ ಹಾಗೂ ಅನರ್ಹ ಪಡಿತರ ಚೀಟಿಗಳ ಸಂಖ್ಯೆ 19,27,226 ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡಲು ಆಂಧ್ರಪ್ರದೇಶ ಹಾಗೂ ತಮಿಳು ನಾಡು ಸರ್ಕಾರ ಮುಂದೆ ಬಂದಿದ್ದು, ದರ ಜಾಸ್ತಿಯಾದರೆ ಖರೀದಿ ಸಾಧ್ಯವಿಲ್ಲ. ಅಕ್ಕಿ ಖರೀದಿ ವೇಳೆ ಕೆ.ಜಿ. ಗೆ ೩೪ ರೂ. ಗಿಂತ ಜಾಸ್ತಿ ಕೊಡಲು ಸಾಧ್ಯವೇ ಇಲ್ಲ ಎಂದು ಸಚಿವರು ತಿಳಿಸಿದ್ದಾರೆ.
1.28 ಕೋಟಿ ಬಿಪಿಎಲ್ ಪಡಿತರ ಚೀಟಿಗಳಲ್ಲಿ 1.06 ಕೋಟಿ ಕಾರ್ಡ್ ಚಾಲ್ತಿಯಲ್ಲಿದೆ. 22 ಲಕ್ಷ ಕಾರ್ಡ್ ಚಾಲ್ತಿಯಲ್ಲಿ ಇಲ್ಲ. ಮೂರು ತಿಂಗಳಿಂದ 5.37 ಲಕ್ಷ ಹಾಗೂ ಒಂದು ತಿಂಗಳಿನಿಂದ 10.2 ಲಕ್ಷ ಕಾರ್ಡ್ದಾರರು ಅಕ್ಕಿ ಪಡೆದುಕೊಂಡಿಲ್ಲ.ಹೊಸ ಪಡಿತರ ಚೀಟಿ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ರೇಷನ್ ಕಾರ್ಡ್ ತಿದ್ದುಪಡಿ, ರದ್ಧತಿ, ಸೇರ್ಪಡೆಗೆ ಅವಕಾಶ ನೀಡಲಾಗುವುದು. ಜುಲೈ ಅಂತ್ಯಕ್ಕೆ ಬಾಕಿ ಇರುವ 2,95,986 ಪಡಿತರ ಚೀಟಿ ವಿಲೇವಾರಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.