‘ವರಾಹರೂಪಂ’ ಹಾಡಿಗೆ ಇದ್ದ ವಿಘ್ನ ನಿವಾರಣೆ: ನ್ಯಾಯಾಲಯದಲ್ಲಿ ತೈಕ್ಕುಡಂ ಬ್ರಿಡ್ಜ್ ಆಲ್ಬಂ ತಂಡಕ್ಕೆ ಮುಖಭಂಗ : ಹೊಂಬಾಳೆ, ಅಜನೀಶ್ ಲೋಕನಾಥ್ಗೆ ದೊಡ್ಡ ಗೆಲುವು
- ಮನರಂಜನೆ
- November 25, 2022
- No Comment
- 251
ನ್ಯೂಸ್ ಆ್ಯರೋ : ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ’ ಸಿನಿಮಾದಲ್ಲಿದ್ದ ‘ವರಾಹರೂಪಂ’ ಹಾಡಿನ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಕೇರಳದ ತೈಕ್ಕುಡಂ ಬ್ರಿಡ್ಜ್ ಆಲ್ಬಂ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ.
ಕಾಂತಾರದಲ್ಲಿ ಬಳಸಲಾಗಿದ್ದ ವರಾಹಂ ರೂಪಂಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದ ಕೋಜಿಕ್ಕೋಡ್ ನ್ಯಾಯಾಲಯ ವಿವಾದದ ಬಗ್ಗೆ ಅಂತಿಮ ಆದೇಶ ಹೊರಡಿಸಿದೆ. ನ್ಯಾಯಾಲಯವು ಶುಕ್ರವಾರ ಹೊರಡಿಸಿದ ಅಂತಿಮ ಆದೇಶದಲ್ಲಿ ತೈಕ್ಕುಡಂ ಬ್ರಿಡ್ಜ್ ಹಾಕಿದ್ದ ಅರ್ಜಿಯನ್ನೇ ವಜಾ ಮಾಡಿದೆ. ಈ ಮೂಲಕ ಹೊಂಬಾಳೆಗೆ ಮತ್ತು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರಿಗೆ ಬಹುದೊಡ್ಡ ಗೆಲುವು ಲಭಿಸಿದಂತಾಗಿದೆ.
ಕಾಂತಾರ ಸಿನಿಮಾ ವಿಶ್ವದಾದ್ಯಂತ ಸದ್ದು ಮಾಡುತ್ತಾ, ಗಲ್ಲಾಪೆಟ್ಟಿಗೆಯಲ್ಲಿ ದಾಖಲೆಯ ಗಳಿಕೆ ಮಾಡುತ್ತಿರುವ ಹೊತ್ತಿನಲ್ಲೇ ತೈಕ್ಕುಡಂ ಬ್ರಿಡ್ಜ್ ತಂಡದವರು ವರಾಹಂ ರೂಪಂ ಹಾಡಿನ ಬಗ್ಗೆ ಅಪಸ್ವರ ಎತ್ತಿ ಕೋರ್ಟ್ ಮೆಟ್ಟಿಲೇರಿದ್ದರು. ತಾವು ಮಾಡಿದ್ದ ನವರಸಂ ರೂಪಂ ಎನ್ನುವ ಆಲ್ಬಂ ಹಾಡಿನ ರೀತಿಯಲ್ಲೇ ವರಾಹಂ ರೂಪಂ ಹಾಡನ್ನು ಮಾಡಲಾಗಿದೆ ಎಂದು ಆರೋಪಿಸಿದ್ದರು.
ಟ್ಯೂನ್ ನಲ್ಲಿ ಬಳಸಿದ್ದ ತಾಂತ್ರಿಕ ಶೈಲಿ ತಮ್ಮ ಹಾಡನ್ನು ಹೋಲುತ್ತದೆ, ನಮ್ಮ ಹಾಡಿನ ಧಾಟಿಯಿಂದ ಪ್ರೇರಿತಗೊಂಡು ವರಾಹ ರೂಪಂ ಹಾಡು ರೂಪಿಸಲಾಗಿದೆ ಎಂದು ಕೋಜಿಕ್ಕೋಡ್ ಕೋರ್ಟಿನಲ್ಲಿ ತಕರಾರು ಅರ್ಜಿ ಹಾಕಲಾಗಿತ್ತು. ನ್ಯಾಯಾಲಯ ಈ ಬಗ್ಗೆ ಪ್ರತಿವಾದಿಗಳ ಅಹವಾಲು ಕೇಳುವ ಮೊದಲೇ ಹಾಡಿನ ಪ್ರಸಾರಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು.
ಹೀಗಾಗಿ, ಯೂಟ್ಯೂಬ್ನಿಂದ ಆ ಹಾಡನ್ನು ಡಿಲೀಟ್ ಮಾಡಲಾಗಿತ್ತು. ಆದರೆ, ಕಾಂತಾರ ಚಿತ್ರತಂಡವು ಚಿತ್ರಮಂದಿರಗಳಲ್ಲಿ ಹಾಡಿನ ಬಳಕೆಯನ್ನು ಹಿಂಪಡೆಯುವ ಗೋಜಿಗೆ ಹೋಗಿರಲಿಲ್ಲ. ಈ ನಡುವೆ, ಸಿನಿಮಾ ನಿರ್ಮಿಸಿದ್ದ ಹೊಂಬಾಳೆ ಫಿಲಂಸ್, ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಸಂಗೀತ ನಿರ್ದೇಶಕ ಲೋಕನಾಥ್ ಪರವಾಗಿ ಪ್ರತ್ಯೇಕವಾಗಿ ವಕೀಲರು ಹಾಜರಾಗಿ ಹಾಡಿನ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದರು. ಅಲ್ಲದೆ, ತೈಕ್ಕುಡಂ ಬ್ರಿಡ್ಜ್ ಎತ್ತಿದ್ದ ತಕರಾರು ಅರ್ಜಿಗೆ ಮೌಲ್ಯವೇ ಇಲ್ಲ ಅನ್ನುವ ಬಗ್ಗೆ ಸೂಕ್ತ ದಾಖಲೆ ಇಟ್ಟು ವಾದ ಮಂಡಿಸಿದ್ದರು. ವಾದ – ಪ್ರತಿವಾದ ಆಲಿಸಿದ ನ್ಯಾಯಾಲಯ ಶುಕ್ರವಾರ ಅಂತಿಮ ಆದೇಶ ನೀಡಿದೆ. ಈ ಬೆಳೆವಣಿಗೆಯಿಂದಾಗಿ ಕಾಂತಾರ ಸಿನಿಮಾದಲ್ಲಿ ಹಿಟ್ ಆಗಿದ್ದ ವರಾಹ ರೂಪಂ ಹಾಡಿನ ಪ್ರಸಾರಕ್ಕೆ ಯಾವುದೇ ಅಡ್ಡಿಯಿಲ್ಲ ಅನ್ನುವ ತೀರ್ಪನ್ನು ಕೋರ್ಟ್ ನೀಡಿದಂತಾಗಿದೆ.
ಕಾಂತಾರ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ₹ 400 ಕೋಟಿ ಗಳಿಸಿ ಮುನ್ನುಗ್ಗುತ್ತಿದೆ. ಈ ಮಧ್ಯೆ ಕಾಂತಾರ ಸಿನಿಮಾ ಗುರುವಾರ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿದೆ. ಒಟಿಟಿಯಲ್ಲಿ ಬಿಡುಗಡೆಯಾದ ಸಿನಿಮಾದಲ್ಲಿ ವರಾಹ ರೂಪಂ ಹಾಡಿನ ರಾಗ ಸಂಪೂರ್ಣ ಬದಲಾವಣೆ ಮಾಡಲಾಗಿತ್ತು. ಇದು ಪ್ರೇಕ್ಷಕರಿಗೂ ರುಚಿಸಿದೆ ಅಪಸ್ವರ ಎತ್ತಲಾಗಿತ್ತು. ಇದೀಗ ಅಡೆತಡೆ ನಿವಾರಣೆ ಆಗಿದ್ದರಿಂದ ಒಟಿಟಿಯಲ್ಲಿ ವರಾಹರೂಪಂ ಮೂಲ ಹಾಡು ಸಿಗುವ ಕಾಲ ಸನ್ನಿಹಿತವಾಗಿದೆ.