ನಿಮಗೇಕೆ ಬಾಲಿವುಡ್ ಅವರ ಚಿಂತೆ: ಮತ್ತೇ ನೆಟ್ಟಿಗರ ಕಣ್ಣಿಗೆ ಗುರಿಯಾದ ನಟ ಕಿಶೋರ್
- ಮನರಂಜನೆ
- January 9, 2023
- No Comment
- 157
ನ್ಯೂಸ್ ಆ್ಯರೋ: ವಿವಾದಾತ್ಮಕವಾಗಿ ಫೋಸ್ಟ್ ಹಂಚಿಕೊಳ್ಳುವ ಮೂಲಕ ಈಚೆಗೆ ಸುದ್ದಿಯಲ್ಲಿರುವ ನಟ ಕಿಶೋರ್ ಇದೀಗ ಬಾಲಿವುಡ್ ‘ಪರ ನಿಲ್ಲುವ ಕಾಲ ಬಂದಿದೆ’ ಎನ್ನುವ ಹೇಳಿಕೆ ಕೊಡುವ ಮೂಲಕ ಮತ್ತೇ ನೆಟ್ಟಿಗರ ಕಣ್ಣಿಗೆ ಗುರಿಯಾಗಿದ್ದಾರೆ.
ಈಗಂತೂ ಬಾಲಿವುಡ್ ಸಿನಿಮಾಗಳು ಸೋಲು ಕಾಣುತ್ತಿವೆ. ದಕ್ಷಿಣ ಸಿನಿಮಾಗಳು ಬಾಲಿವುಡ್ ಚಿತ್ರರಂಗವನ್ನು ಆಕ್ರಮಿಸುತ್ತಿದೆ ಎಂದು ಹಿಂದಿ ಸಿನಿಮಾಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕೆಲವರು ಬಾಯ್ಕಾಟ್ ಬಾಲಿವುಡ್ ಅಭಿಯಾನವನ್ನು ಕೂಡಾ ಆರಂಭಿಸಿದ್ದಾರೆ. ಇದೇ ವಿಚಾರಕ್ಕೆ ಇದೀಗ ಕಿಶೋರ್ ಮತ್ತೆ ಪ್ರತಿಕ್ರಿಯಿಸಿದ್ದಾರೆ.
ಕಿಶೋರ್ ಮಾಡಿರುವ ಟ್ವೀಟ್ ನಲ್ಲಿ ಏನಿದೆ:
‘ಇಡೀ ದೇಶದ ಚಿತ್ರರಂಗ ಒಕ್ಕೊರಲಿನಿಂದ ಬಾಲಿವುಡ್ ವಿರುದ್ಧ ನಡೆಯುತ್ತಿರುವ ಬಾಯ್ಕಾಟ್ ಟ್ರೆಂಡನ್ನು , ಮತಾಂಧ ಗೂಂಡಾಗಿರಿಯನ್ನು, ದ್ವೇಷದ ರಾಜಕೀಯವನ್ನು ಖಂಡಿಸಿ ಬಾಲಿವುಡ್ ಪರವಾಗಿ ನಿಲ್ಲುವ ಕಾಲ ಬಂದಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಒಂದು ವ್ಯಾಪಾರ ಅಥವಾ ಉದ್ಯಮದ ಸುರಕ್ಷತೆಯನ್ನು ಖಚಿತಪಡಿಸಲು ಸಾಧ್ಯವಾಗದಿರುವುದು ಸರ್ಕಾರಗಳ ವೈಫಲ್ಯಕ್ಕೆ ಸಾಕ್ಷಿ. ಇಷ್ಟಾದರೂ ಚಿತ್ರರಂಗದವರು ಮಾತನಾಡದೆ ಇರುವ ಹೆದರಿಕೆಯ ವಾತಾವರಣ ಸೃಷ್ಟಿಯಾಗಿರುವುದು, ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ಹೊತ್ತ ಸರ್ಕಾರಿ ಅಧಿಕಾರಿಗಳಿಗೆ ನಾಚಿಕೆಗೇಡಿನ ಸಂಗತಿ. ಇದು ಸಮಾಜವನ್ನು ವಿಷಪೂರಿತಗೊಳಿಸುವ ಸ್ಪಷ್ಟ ಕಾನೂನು ಉಲ್ಲಂಘನೆಯಾಗಿದ್ದು, ಇದನ್ನು ತಡೆಯಬೇಕಿದೆ, ಶಿಕ್ಷಿಸಬೇಕಾಗಿದೆ. ದ್ವೇಷದ ಈ ಬೆಂಕಿ ಸ್ಥಳೀಯ ಚಿತ್ರೋದ್ಯಮಗಳಿಗೂ ವ್ಯಾಪಿಸುವ ಮುನ್ನ ತಡೆಯಬೇಕು” ಎಂದು ಬರೆದುಕೊಂಡಿದ್ದಾರೆ.
ಇವರ ಈ ಟ್ವೀಟ್ ಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.ಬಾಯ್ಕಾಟ್ ಗೂ ಸರ್ಕಾರಕ್ಕೂ ಏನೂ ಸಂಬಂಧ ಅಂತ ಹೇಳಿದ್ದಾರೆ. ಇನ್ನೂ ಅಲ್ಲಿಯವರ ಬಗ್ಗೆ ನೀವು ಯಾಕೇ ಚಿಂತಿಸುತ್ತೀರಿ ಎಂದು ಕಟುವಾಗಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಈಚೆಗೆ ನಟ ಕಿಶೋರ್ ಅವರ ಟ್ವಿಟ್ಟರ್ ಖಾತೆ ಸಸ್ಪೆಂಡ್ ಆಗಿತ್ತು.
ಕಿಶೋರ್, ಖಾಸಗೀಕರಣದ ವಿರುದ್ಧ ದನಿಯೆತ್ತಿದ್ದರು, ಜೊತೆಗೆ ಸರ್ಕಾರದ ಕೆಲಸಗಳನ್ನು ಟೀಕೆ ಮಾಡುತ್ತಿದ್ದರಿಂದ ಅವರ ಟ್ವಿಟ್ಟರ್ ರದ್ದಾಗಿದೆ ಎಂಬ ಸುದ್ದಿ ಹರಡಿತ್ತು. ಆದರೆ ಕಿಶೋರ್ ಮಾತ್ರ ‘ನಾನು ಮಾಡಿದ ಪೋಸ್ಟ್ಗಳಿಂದ ಟ್ವಿಟ್ಟರ್ ಅಕೌಂಟ್ ರದ್ದಾಗಿಲ್ಲ. ಖಾತೆಯನ್ನು ಹ್ಯಾಕ್ ಮಾಡಲಾಗಿದೆ’ ಎಂದು ಸ್ಪಷ್ಟನೆ ನೀಡಿದ್ದರು.
ಇನ್ನೂ ಟ್ವಿಟ್ಟರ್ ಖಾತೆ ರದ್ದಾಗುತ್ತಿದ್ದಂತೆ ಕಿಶೋರ್ ಅವರು ‘ಕಾಂತಾರ’ ಸಿನಿಮಾ ಸಂಬಂಧ ದೈವವನ್ನು ಅವಮಾನಿಸಿದ ಯುವಕ ರಕ್ತಕಾರಿ ಸಾವನ್ನಪ್ಪಿದ್ಧಾನೆ ಎಂಬ ವಿಡಿಯೋ ವೈರಲ್ ಆಗಿದ್ದರ ಬಗ್ಗೆ ಮಾತನಾಡಿದ್ದರು. ”ಕೊಲ್ಲುವ ದೈವಕ್ಕೆ ಮನಸ್ಸನ್ನು ಪರಿವರ್ತಿಸುವ ಶಕ್ತಿ ಇರುವುದಿಲ್ಲವೇ?” ಎಂದು ಪ್ರಶ್ನಿಸಿದ್ದರು. ನಂತರ ಅವರು ‘ಕೆಜಿಎಫ್ ಚಿತ್ರವನ್ನು ನೋಡಿಲ್ಲ’ ಎಂದಿದ್ದು, ಬೇರೆಯದ್ದೇ ರೂಪ ಪಡೆದಿತ್ತು. ಈ ವಿಚಾರಕ್ಕೆ ಕೂಡಾ ಕಿಶೋರ್ ಮತ್ತೊಂದು ಪೋಸ್ಟ್ನಲ್ಲಿ , ‘ನಾನು ಮೈಂಡ್ಲೆಸ್ ಎಂಬ ಪದ ಬಳಕೆ ಮಾಡಿಲ್ಲ’ ಎಂದು ಸ್ಪಷ್ಟನೆ ನೀಡಿದ್ದರು. ಇವರ ಫೋಸ್ಟ್ ಗೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿತ್ತು.