ಚಿತ್ರರಂಗ ನನ್ನ ಆಸ್ತಿ ಅಲ್ಲ, ಬರೋದು ಬಿಡೋದು ಅವರಿಷ್ಟ ಎಂದ ಕಿಚ್ಚ ಸುದೀಪ್ – ಕಿಚ್ಚ ಗರಂ ಆಗಿ ಹೀಗೆ ಹೇಳಿದ್ಯಾಕೆ?
- ಮನರಂಜನೆ
- January 24, 2023
- No Comment
- 3389
ನ್ಯೂಸ್ ಆ್ಯರೋ : ಕಳೆದ ಕೆಲ ವರ್ಷಗಳಿಂದ ಕೋವಿಡ್ ಕಾರಣದಿಂದಾಗಿ ಸ್ತಬ್ಧವಾಗಿದ್ದ ಕೆಸಿಸಿ ಅರ್ಥಾತ್ ‘ಕರ್ನಾಟಕ ಚನಲಚಿತ್ರ ಕಪ್’ ಮತ್ತೆ ಗರಿಗೆದರಿ ನಿಂತಿದೆ. ಸಿನಿಮಾ ಕೆಲಸಗಳನ್ನೆಲ್ಲ ಬದಿಗೊತ್ತಿ ಚಂದನವದ ನಟರು, ತಂತ್ರಜ್ಞರು ಕ್ರಿಕೆಟ್ ಅಂಗಳಕ್ಕಿಳಿಯಲು ಸಿದ್ಧರಾಗಿದ್ದಾರೆ. ಈ ವರ್ಷ ಕೆಸಿಸಿ ಮೂರನೇ ಸೀಸನ್ ನಡೆಯಲಿದ್ದು, ಈ ಬಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ನಟ ಕಿಚ್ಚ ಸುದೀಪ್ ಕೆಲ ವಿಚಾರಗಳನ್ನು ಪ್ರಸ್ತಾಪಿಸಿದ್ದು ಈ ಸುದ್ದಿಯಲ್ಲಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುದೀಪ್ ಅವರಿಗೆ, ಕಳೆದ ವರ್ಷ ಚಿತ್ರರಂಗದ ಕೆಲವರು ಕೆಸಿಸಿ ಆಡಲು ಬಂದಿರಲಿಲ್ಲ. ಅವರಿಗೆ ಆಹ್ವಾನ ನೀಡಿರಲಿಲ್ಲವೆ? ಎಂದು ಪ್ರಶ್ನಿಸಲಾಗಿತ್ತು. ಇದಕ್ಕೆ ಉತ್ತರಿಸಿದ ಕಿಚ್ಚ, ‘ನಾವು ಚಿತ್ರರಂಗದ ಪ್ರತಿಯೊಬ್ಬರಿಗೂ ಆಹ್ವಾನ ನೀಡುತ್ತೇವೆ. ಕೆಲವರಿಗೆ ಬರೋದಕ್ಕೆ ಇಷ್ಟ ಇರಲ್ಲ, ಅಂತವರು ಬರೋದಿಲ್ಲ. ಅವರು ಯಾಕೆ ಬಂದಿಲ್ಲ, ಇವರು ಯಾಕೆ ಬಂದಿಲ್ಲ ಅಂತ ಕೇಳಬೇಡಿ, ಸಿನಿಮಾರಂಗ ನನ್ನೊಬ್ಬನ ಸೊತ್ತಲ್ಲ ಎಂದಿದ್ದಾರೆ.
ಮುಂದುವರೆಸಿ, ಕಳೆದ ಎರಡು ಸೀಸನ್ಗಳಂತೆ ಈ ಬಾರಿಯೂ ಕೆಸಿಸಿ ನಲ್ಲಿ ಆರು ಅಂತರಾಷ್ಟ್ರೀಯ ಆಟಗಾರರನ್ನು ಸೇರಿ, ಕನ್ನಡ ಸಿನಿಮಾ ನಟರು, ತಂತ್ರಜ್ಞರು ಭಾಗವಹಿಸಲಿದ್ದಾರೆ. ರಾಜಕೀಯ ವಲಯದವರು, ಮಾಧ್ಯಮ ಮಿತ್ರರೂ ಕೂಡ ಕೆಸಿಸಿಯಲ್ಲಿ ಆಡಬಹುದು ಎಂದು ಸ್ಪಷ್ಟನೆ ನೀಡಿದ್ದಾರೆ.
ಇನ್ನುಳಿದಂತೆ, ಈ ಬಾರಿಯ ಕೆಸಿಸಿ ಅತ್ಯಂತ ವರ್ಣರಂಜಿತವಾಗಿರಲಿದೆ. ಟೂರ್ನಮೆಂಟ್ ಗಳು ಫೆ.11 ಮತ್ತು 12 ರಂದು ನಡೆಯಲಿದೆ ಎಂದಿದ್ದಾರೆ. ನಟ ಶಿವರಾಜ್ ಕುಮಾರ್, ಗಣೇಶ್, ಡಾಲಿ ದನಂಜಯ್ ಸೇರಿದಂತೆ, ಕನ್ನಡದ ದಿಗ್ಗಜರು ಭಾಗವಹಿಸುವ ನಿರೀಕ್ಷೆಗಳಿವೆ.