ಆಸ್ಕರ್ ರೇಸ್ ನಿಂದ ಹೊರಬಿದ್ದ ‘ಕಾಂತಾರ’ – ಕಾರಣ ಬಿಚ್ಚಿಟ್ಟ ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದ್ದೇನು?
- ಮನರಂಜನೆ
- February 7, 2023
- No Comment
- 3350
ನ್ಯೂಸ್ ಆ್ಯರೋ : ‘ಕೆಜಿಎಪ್-2’ ನಂತರ ಕನ್ನಡ ಸಿನಿಮಾ ರಂಗವನ್ನು ಇಡೀ ಜಗತ್ತು ತಿರುಗಿ ನೋಡುವಂತೆ ಮಾಡಿದ ಬ್ಲಾಕ್ ಬಾಸ್ಟರ್ ಚಿತ್ರ ರಿಶಬ್ ಶೆಟ್ಟಿ ನಿರ್ದೇಶನದ ‘ಕಾಂತಾರ’. ಕಡಿಮೆ ಬಜೆಟ್ನಲ್ಲಿ ತಯಾರಾಗಿ 400 ಕೋಟಿ ಗಳಿಸಿದ ಈ ಸಿನಿಮಾ ಸಾಕಷ್ಟು ದಾಖಲೆಗಳೊಂದಿಗೆ ಭಾರೀ ಜನಮೆಚ್ಚುಗೆ ಗಳಿಸಿತ್ತು. ಅಷ್ಟೇ ಅಲ್ಲದೆ ಪ್ರಪಂಚದ ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿ ಅಂಗಳಕ್ಕೂ ಅರ್ಹತೆ ಪಡೆದಿತ್ತು.
ಆದರೆ ಇದೀಗ ಬಂದಿರುವ ಸುದ್ದಿ ಕನ್ನಡಿಗರನ್ನು ನಿರಾಶೆಗೊಳಿಸಿದೆ. ಹೌದು ವರದಿಯ ಪ್ರಕಾರ ‘ಕಾಂತಾರ’ ಆಸ್ಕರ್ ರೇಸ್ ಬಿಂದ ನಾಮಿನೇಟ್ ಆಗದೆ ಹೊರಬಿದ್ದಿದೆಯಂತೆ. ಇದಕ್ಕೆ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ನೀಡಿರುವ ಕಾರಣಗಳೇನು ಗೊತ್ತಾ?.
ಹೊಂಬಾಳೆ ಫಿಲ್ಮ್ಸ್ ಕನ್ನಡದ ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆ. ಅತ್ಯದ್ಭುತ ಸಿನಿಮಾಗಳನ್ನು ನಿರ್ಮಿಸಿ ಜಗತ್ತಿನೆಲ್ಲೆಡೆ ಹೊಂಬಾಳೆ ಫಿಲ್ಮ್ಸ್ ಖ್ಯಾತಿ ಗಳಿಸಿದೆ. ಈಗಾಗಲೇ ಮುಂದಿನ 5 ವರ್ಷ ಸಿನಿಮಾರಂಗದಲ್ಲಿ 3000 ಕೋಟಿ ಬಂಡವಾಳ ಹಾಕಿರುವ ವಿಜಯ್ ಕಿರಗಂದೂರು ಹೊಂಬಾಳೆ ಫಿಲ್ಮ್ಸ್ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಹಾಗೂ ಮಲಯಾಳಂ ರಂಗದಲ್ಲೂ ಸಿನಿಮಾ ನಿರ್ಮಾಣದ ಕನಸನ್ನಿಟ್ಟುಕೊಂಡಿದ್ದಾರೆ.
ಆದರೆ ಇದೇ ನಿರ್ಮಾಣ ಸಂಸ್ಥೆಯಲ್ಲಿ ನಿರ್ಮಾಣಗೊಂಡು, ಜಗತ್ತಿನ ಮನ ಗೆದ್ದ ರಿಷಬ್ ಶೆಟ್ಟಿ ಅವರ ʼಕಾಂತಾರʼ ಪ್ರತಿಷ್ಠಿತ ಆಸ್ಕರ್ ರೇಸ್ ಗೆ ಯಾಕೆ ನಾಮಿನೇಟ್ ಆಗಿಲ್ಲ. ಸಿನಿಮಾ ನಿಜಕ್ಕೂ ಪ್ರಶಸ್ತಿ ಸ್ಪರ್ಧೆಗೆ ಆಯ್ಕೆಗೊಳ್ಳದಿರಲು ಕಾರಣವೇನು ಎನ್ನುವುದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಪ್ರಶ್ನೆಗಳ ಸುರಿಮಳೆ ಗೆರೆದಿದ್ದಾರೆ. ಆ ಎಲ್ಲ ಪ್ರಶ್ನೆಗಳಿಗೂ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ʼಇಂಡಿಯಾ ಟುಡೇʼ ಜೊತೆ ಮಾತನಾಡುತ್ತಾ ಉತ್ತರ ನೀಡಿದ್ದಾರೆ.
ವಿಜಯ್ ಕಿರಗಂದೂರು ಹೇಳಿದ್ದಿಷ್ಟು…
ನಾವು ಮೊದಲು ನಮ್ಮ ಬೇರಿನ ಅಂದರೆ ನಮ್ಮ ಸ್ಥಳೀಯ ಕಥೆಗಳನ್ನು ಜಗತ್ತಿಗೆ ಹೇಳಬೇಕು. ಈ ವಿಚಾರದಲ್ಲಿ ʼಕಾಂತಾರʼ ಹಾಗೂ ʼಆರ್ ಆರ್ ಆರ್ʼ ಸಿನಿಮಾಗಳು ಗೆದ್ದಿವೆ. ಕೋವಿಡ್ ನಿಂದ ಜನ ಎಲ್ಲಾ ಬಗೆಯ ಮನರಂಜನೆಯ ಕಥೆಯನ್ನು ಓಟಿಟಿಯಲ್ಲಿ ನೋಡಿದ್ದಾರೆ. ನಿರ್ದೇಶಕರು ಈಗ ಪ್ರೇಕ್ಷಕರು ಏನನ್ನ ನೋಡಿಲ್ವೋ ಅಂಥ ಕಥೆಯನ್ನು ತೆರೆ ಮೇಲೆ ತರಬೇಕು. ನಮ್ಮ ಸಂಸ್ಕೃತಿಯನ್ನು ಮೊದಲು ದಾಖಲು ಮಾಡಬೇಕು. ʼಕಾಂತಾರʼದಲ್ಲಿ ತುಳು ಸಂಸ್ಕೃತಿಯನ್ನು ದಾಖಲು ಮಾಡಿದ ಹಾಗೆ. ಜಗತ್ತಿಗೆ ಈಗ ʼಕಾಂತಾರʼದಲ್ಲಿನ ತುಳುನಾಡಿನ ಸಂಸ್ಕೃತಿ , ಸಂಪ್ರದಾಯ ಕರ್ನಾಟಕದ ಕರಾವಳಿ ಪ್ರದೇಶದೆಂದು ಜನರಿಗೆ ತಿಳಿದಿದೆ ಎಂದು ತಿಳಿಸಿದ್ದಾರೆ.
‘ಆರ್.ಆರ್.ಆರ್’ ಸಿನಿಮಾ ಈಗಾಗಲೇ ಕೆಲ ಅಂತರಾಷ್ಟ್ರೀಯ ಪ್ರಶಸ್ತಿ ಗಳಿಸಿದೆ. ಕಾಂತಾರದ ಬಗ್ಗೆಯೂ ಅಂತಹ ನಿರೀಕ್ಷೆಗಳಿರುತ್ತೆ ಮತ್ತು ಯಾಕೆ ಅದು ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ನಿರ್ಮಾಪಕರು, ʼಕಾಂತಾರʼದಿಂದ ನಾವು ಅದನ್ನು ನಿರೀಕ್ಷೆ ಮಾಡಿದ್ದೆವು. ಆದರೆ ಸಿನಿಮಾ ಬಿಡುಗಡೆ ಆದ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದನ್ನು ಪ್ರಚಾರ ಮಾಡಲು ಅಷ್ಟು ಸಮಯ ಸಾಕಾಗಲಿಲ್ಲ.
ʼಆರ್ ಆರ್ ಆರ್ʼ ಸಿನಿಮಾ ನಮ್ಮ ಚಿತ್ರಕ್ಕಿಂತ ಬೇಗನೇ ರಿಲೀಸ್ ಆಯಿತು. ಅವರಿಗೆ ಪ್ರಚಾರಕ್ಕೆ ಒಳ್ಳೆಯ ಸಮಯ ಸಿಕ್ಕಿತ್ತು. ನಾವು ಕನಿಷ್ಠ ಪ್ರಶಸ್ತಿಯ ವಿಚಾರವಾಗಿ 6 ತಿಂಗಳು ಮೊದಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಲು ಯೋಚಿಸಬೇಕಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿನಿಮಾ ರಿಲೀಸ್ ಮಾಡಬೇಕಿತ್ತು. ಆ ಬಳಿಕ ಅಲ್ಲಿಂದ ಜನ ವೋಟ್ ಮಾಡುತ್ತಾರೋ ಇಲ್ವೋ ಆದರೆ ನಾವು ಸಿನಿಮಾವನ್ನು ರಿಲೀಸ್ ಮಾಡಬೇಕಾಗಿತ್ತು ಎಂದಿದ್ದಾರೆ. ನಾವು ಹಿಂದಿನ ತಪ್ಪಿನಿಂದ ಪಾಠ ಕಲಿತುಕೊಂಡಿದ್ದೇವೆ. ಮುಂದೆ ಸಾಗುತ್ತಿದ್ದೇವೆ. ಖಂಡಿತ ಮುಂದೆ ಆಸ್ಕರ್ ಅಥವಾ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳು ನಮ್ಮ ಚಿತ್ರಗಳಿಗೆ ಸಿಗಬೇಕು ಎನ್ನುವುದು ನಮ್ಮ ಇರಾದೆ ಎಂದಿದ್ದಾರೆ ನಿರ್ಮಾಪಕ ವಿಜಯ್ ಕಿರಗಂದೂರು.
ಸದ್ಯ, ಇತ್ತೀಚೆಗೆ ಸಮಾರಂಭವೊಂದರಲ್ಲಿ ನಿರ್ದೇಶಕ ರಿಶಬ್ ಶೆಟ್ಟಿ ಹೇಳಿರುವಂತೆ ‘ಕಾಂತಾರ’ ಸಿನಿಮಾದ ಸೀಕ್ವೆಲ್ ಸಿದ್ದವಾಗುತ್ತಿದೆ. ಅದಕ್ಕಾಗಿ ಚಿತ್ರತಂಡ ಲೊಕೇಶನ್ ಹುಡುಕಾಟ ಮತ್ತು ಸ್ಕ್ರಿಪ್ಟ್ ಕೆಲಸಗಳಲ್ಲಿ ತೊಡಗಿಸಿಕೊಂಡಿವೆಯಂತೆ. ‘ಕಾಂತಾರ-2’ ಮುಂದಿನ ವರ್ಷ ಅಂದರೆ 2024ರ ಎಪ್ರಿಲ್ನಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.