ಬಾಡಿ ಹೋದ ಬೈಕ್ ರೇಸಿಂಗ್ ನ ಅರಳುವ ಪ್ರತಿಭೆ – ಅಪಘಾತದಲ್ಲಿ 13 ವರ್ಷದ ಶ್ರೇಯಸ್ ದುರ್ಮರಣ
- ಆಟೋ ನ್ಯೂಸ್
- August 6, 2023
- No Comment
- 130
ನ್ಯೂಸ್ ಆ್ಯರೋ : ಆತ ಪ್ರತಿಭಾವಂತ ಹುಡುಗ. 13ನೇ ವಯಸ್ಸಿಗೆ ಅಪರೂಪದ ಸಾಧನೆ ಮಾಡಿದ್ದ. ಮೋಟಾರ್ ಸೈಕಲ್ ರೇಸಿಂಗ್ ನಲ್ಲಿ ಛಾಪು ಮೂಡಿಸುತ್ತಿದ್ದ ಈ ಪೋರನ ಬದುಕು ಅಂತ್ಯವಾಗಿದೆ. ಬೆಂಗಳೂರು ಮೂಲದ ಕೊಪ್ಪರಂ ಶ್ರೇಯಸ್ ಹರೀಶ್ ಚೆನ್ನೈಯಲ್ಲಿ ನಡೆದ ರೇಸಿಂಗ್ ಚಾಂಪಿಯನ್ ಶಿಪ್ ವೇಳೆ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾನೆ.
ಚಿಕ್ಕ ವಯಸ್ಸಿಗೆ ರೇಸ್ ಟ್ರ್ಯಾಕ್ ನಲ್ಲಿ ಮಿಂಚು
ಶ್ರೇಯಸ್ ಶನಿವಾರ ಚೆನ್ನೈಯ ಮದ್ರಾಸ್ ಅಂತಾರಾಷ್ಟ್ರೀಯ ಸರ್ಕಿಟ್ (ಎಂ.ಐ.ಸಿ.) ನಲ್ಲಿ ಆಯೋಜಿಸಿದ್ದ ಎಂ.ಆರ್.ಎಫ್. ಇಂಡಿಯನ್ ನ್ಯಾಷನಲ್ ಮೋಟಾರ್ ಸೈಕಲ್ ರೇಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಸ್ಪರ್ಧಿಸಿದ್ದ. ಮುಂಚೂಣಿಯಲ್ಲಿ ಸಾಗುತ್ತಿದ್ದ ಆತನಿಗೆ ಅಪಘಾತ ಸಂಭವಿಸಿತ್ತು. ಈತ ಬೆಂಗಳೂರಿನ ಕೆನ್ಸರಿ ಶಾಲೆಯ ವಿದ್ಯಾರ್ಥಿ. ಉದಯೋನ್ಮುಖ ಸ್ಪರ್ಧಿಗಳ ವಿಭಾಗದಲ್ಲಿ ಟಿವಿಎಸ್ ಒನ್ ಮೇಕ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ್ದ.
ತಿರುವಿನಲ್ಲಿ ಆಯ ತಪ್ಪಿ ಶ್ರೇಯಸ್ ಚಲಾಯಿಸುತ್ತಿದ್ದ ಬೈಕ್ ಉರುಳಿತು. ಆತ ಧರಿಸಿದ್ದ ಹೆಲ್ಮೆಟ್ ಲಾಕ್ ಕಳಚಿತ್ತು. ಹಿಂದಿನಿಂದ ಬರುತ್ತಿದ್ದ ಇನ್ನೊಬ್ಬ ಸ್ಪರ್ಧಿಯ ಬೈಕ್ ಶ್ರೇಯಸ್ ಮೇಲೆ ಹರಿದು ಮುಂದೆ ಸಾಗಿತ್ತು. ಕುಡಲೇ ರೇಸ್ ಸ್ಥಗಿತಗೊಳಿಸಿ ಆಯೋಜಕರು ಶ್ರೇಯಸ್ ನನ್ನು ಆಸ್ಪತ್ರೆಗೆ ತಲುಪಿಸುವಷ್ಟರಲ್ಲಿ ಮೃತಪಟ್ಟಿದ್ದ ಎಂದು ಮೂಲಗಳು ತಿಳಿಸಿವೆ.
ಬಾಲ್ಯದಲ್ಲೇ ರೇಸ್ ಪಟುವಾಗುವ ಗುರಿ
ಶ್ರೇಯಸ್ ಗೆ ತನ್ನ ತಂದೆ ಹರೀಶ್ ಪರಂಧಾಮನ್ ಅವರ ಜೊತೆ ಯಮಹಾ ಬೈಕ್ ನಲ್ಲಿ ಓಡಾಡುವಾಗ ಬಾಲ್ಯದಲ್ಲೇ ರೇಸ್ ಪಟುವಾಗುವ ಕನಸು ಮೂಡಿತ್ತು. ಮಗನ ಆಸೆ ಪೂರೈಸಲು ತಂದೆಯೇ ಗುರುವಾಗಿದ್ದರು. ಕಬ್ಬನ್ ಪಾರ್ಕ್ ಗೆ ಕರೆದುಕೊಂಡು ಹೋಗಿ ಬೈಕ್ ರೈಡಿಂಗ್ ಹೇಳಿ ಕೊಡುತ್ತಿದ್ದರು. ಮಗನಿಗೆ ಬೆಂಬಲ ನೀಡಲು ಹರೀಶ್ ಫಾರ್ಮಾಸ್ಯುಟಿಕಲ್ ಕಂಪೆನಿಯ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದರು.
11ನೇ ವಯಸ್ಸಿನಲ್ಲಿಯೇ ಭಾರತ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಗಳ ಫೆಡರೇಷನ್ ಮಾನ್ಯತೆ ಪಡೆದ ರೇಸ್ ಗಳಲ್ಲಿ ಭಾಗವಹಿಸಲು ಶ್ರೇಯಸ್ ಲೈಸನ್ಸ್ ಪಡೆದಿದ್ದ. ನಿಬಂಧನೆ ಪ್ರಕಾರ ಮರುವಿನ್ಯಾಸಗೊಳಿಸಿದ ಬೈಕ್ ಅನ್ನು ಮಾತ್ರ ರೇಸಿಂಗ್ ಟ್ರ್ಯಾಕ್ ನಲ್ಲಿ ಶ್ರೇಯಸ್ ಚಾಲನೆ ಮಾಡಬೇಕಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಬೈಕ್ ಓಡಿಸುವಂತಿರಲಿಲ್ಲ. ಅಲ್ಲದೆ ಅಭ್ಯಾಸದ ಸಂದರ್ಭದಲ್ಲಿ ಜೊತೆಗೆ ಒಬ್ಬರು ಹಿರಿಯರು ಇರುವುದು ಕಡ್ಡಾಯವಾಗಿತ್ತು.
ಕೊಯಮತ್ತೂರಿನಲ್ಲಿ ನಡೆದ ಎಂ.ಆರ್.ಎಫ್. ಎಂ.ಎಂ.ಎಸ್.ಸಿ. ಎಫ್.ಎಸ್.ಸಿ.ಐ. ರಾಷ್ಟ್ರೀಯ ಮೋಟಾರ್ ಸೈಕಲ್ ರೇಸಿಂಗ್ ಚಾಂಪಿಯನ್ ಶಿಪ್ ನಲ್ಲೂ ಶ್ರೇಯಸ್ ಸ್ಪರ್ಧಿಸಿದ್ದ. ಭಾರತದಲ್ಲಿ ನಡೆದ ಮಿನಿ ಜಿಪಿ ಟೈಟಲ್ ಕೂಡ ಜಯಿಸಿದ್ದ.