ಅಂತ್ಯಸಂಸ್ಕಾರಕ್ಕೆ ಕರೆದೊಯ್ಯುವಾಗ ಕಣ್ತೆರೆದ ಅಜ್ಜಿ – ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ವಿಚಿತ್ರ ಘಟನೆ
- ವೈರಲ್ ನ್ಯೂಸ್
- January 9, 2023
- No Comment
- 121
ನ್ಯೂಸ್ ಆ್ಯರೋ : ವೃದ್ಧೆಯೊಬ್ಬರನ್ನು ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ ಬಳಿಕ ಆಕೆ ಕಣ್ಣುಬಿಟ್ಟ ವಿಚಿತ್ರ ಪ್ರಸಂಗವೊಂದು ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ಇತ್ತೀಚೆಗೆ ನಡೆದಿದೆ.
ಫಿರೋಜಾಬಾದ್ನ ಬಿಲಾಸ್ಪುರ ನಿವಾಸಿ 81 ವರ್ಷದ ವೃದ್ಧೆ ಹರಿಭೇಜಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದರು. ಶೋಕ ಸಾಗರದಲ್ಲಿ ಮುಳುಗಿದ್ದ ಕುಟುಂಬದ ಸದಸ್ಯರು, ಆಕೆಯ ಅಂತ್ಯಸಂಸ್ಕಾರಕ್ಕಾಗಿ ಕರೆದೊಯ್ಯುವಾಗ ದಿಢೀರ್ ಕಣ್ತೆರೆದಿದ್ದಾಳೆ. ವೃದ್ಧೆ ಬ್ರೈನ್ ಹ್ಯಾಮರೇಜ್ಗೆ ಒಳಗಾಗಿದ್ದಳು. ಆಕೆಯ ಮೆದುಳು ನಿಷ್ಕ್ರಿಯವಾಗಿದೆ ಎಂದು ವೈದ್ಯರು ತಿಳಿಸಿದ್ದರು.
ವೃದ್ಧೆಯ ಅಂತ್ಯಸಂಸ್ಕಾರಕ್ಕೆಂದು ಕುಟುಂಬದ ಸದಸ್ಯರು ಸಾಗಿಸುತ್ತಿದ್ದ ವೇಳೆ ಆಕೆ ಇದ್ದಕ್ಕಿದ್ದಂತೆ ಕಣ್ಣು ಬಿಟ್ಟಿದ್ದಾಳೆ. ಅಜ್ಜಿ ಜೀವಂತ ಇರುವುದನ್ನು ಕಂಡು ಕುಟುಂಬದವರು ಅಚ್ಚರಿಯ ಜತೆಗೆ ಸಂತೋಷ ಪಟ್ಟಿದ್ದಾರೆ. ಅನಿರೀಕ್ಷಿತ ಘಟನೆಯಿಂದ ಖುಷಿಗೊಂಡ ಕುಟುಂಬದವರು, ಅಂತ್ಯಸಂಸ್ಕಾರ ಪ್ರಕ್ರಿಯೆ ಕೈಬಿಟ್ಟು ಆಕೆಯನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ.
ಅಜ್ಜಿಯನ್ನು ಡಿ.23ರಂದು ಫಿರೋಜಾಬಾದ್ನಲ್ಲಿನ ಟ್ರಾಮಾ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದರು. ಆಕೆಯ ಮೆದುಳು ಹಾಗೂ ಹೃದಯ ಎರಡೂ ಕೆಲಸ ಮಾಡುತ್ತಿಲ್ಲ. ಆಕೆ ವೈದ್ಯಕೀಯವಾಗಿ ಮೃತಪಟ್ಟಿದ್ದಾಳೆ. ಆಕೆಯ ಅಂಗಗಳು ಮತ್ತೆ ಸಕ್ರಿಯವಾಗುವ ಭರವಸೆ ಇಲ್ಲ ಎಂದು ವೈದ್ಯರು ತಿಳಿಸಿದ್ದರು.
ಅಂತ್ಯಕ್ರಿಯೆಗೆ ಕೊಂಡೊಯುತ್ತಿದ್ದ ಅಜ್ಜಿಯನ್ನು ಮನೆಗೆ ಕರೆತಂದ ಬಳಿಕ ಆಕೆಗೆ ಚಮಚದಲ್ಲಿ ಟೀ ಕುಡಿಸಿದ್ದಾರೆ. ತನ್ನ ಬಳಿ ಇದ್ದ ಕೆಲವು ಹಸುಗಳನ್ನು ಆಕೆ ದಾನ ಮಾಡಿದ್ದಾಳೆ. ಆಕೆ ಜೀವಂತ ಬಂದಿದ್ದು ಕಂಡು ಮನೆಮಂದಿ ವೈದ್ಯರ ವಿರುದ್ಧ ಕಿಡಿಕಾರಿದ್ದಾರೆ. ಆದರೆ, ಮರುದಿನ ಬೆಳಿಗ್ಗೆ ನೋಡುವಾಗ ಅಜ್ಜಿ ಇಹಲೋಕ ತ್ಯಜಿಸಿದ್ದರು. ಬಳಿಕ ಬುಧವಾರ ಸಂಜೆ ಆಕೆಯ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.