
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಚೇರಿ ಕಳ್ಳತನ ಪ್ರಕರಣ – ಕಚೇರಿ ಸಿಬ್ಬಂದಿಗಳೇ ಕಳ್ಳರು, 80 ಲಕ್ಷ ನಗದು ಜಪ್ತಿ
- ಕರ್ನಾಟಕ
- November 2, 2023
- No Comment
- 93
ನ್ಯೂಸ್ ಆ್ಯರೋ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ನ ರಾಯಪುರ ಕಚೇರಿಯಲ್ಲಿ ಅಕ್ಟೋಬರ್ 24ರಂದು ನಡೆದಿದ್ದ ಕಳ್ಳತನ ಪ್ರಕರಣವನ್ನು ಭೇದಿಸಿ 10 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಇದರಲ್ಲಿ ಮೂವರು ಆರೋಪಿಗಳು ಟ್ರಸ್ಟ್ನ ಕೆಲಸವರಾಗಿದ್ದಾರೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಹುಬ್ಬಳ್ಳಿ -ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಅವರು ಮಾಧ್ಯಮದವರೊಂದಿಗೆ ಮಾತನಾಡಿ, “ಈ ಪ್ರಕರಣ ಪೊಲೀಸರಿಗೆ ಸವಾಲಾಗಿತ್ತು. ಘಟನಾ ಸ್ಥಳ ಪರಿಶೀಲನೆ ಮಾಡಿದಾಗ ಸಿಸಿಟಿವಿ ಕ್ಯಾಮೆರಾ ಸೇರಿದಂತೆ ಯಾವುದೇ ಕುರುಹುಗಳನ್ನು ಆರೋಪಿಗಳು ಪೊಲೀಸರಿಗೆ ಬಿಟ್ಟುಕೊಟ್ಟಿರಲಿಲ್ಲ.
ಪ್ರಕರಣ ಸಂಬಂಧ ವಿದ್ಯಾನಗರ ಸಬ್ ಇನ್ಸ್ಪೆಕ್ಟರ್ ಸಂಗಮೇಶ್ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು. ತಂಡವು ಯಾವುದೇ ಕುರುಹುಗಳಿಲ್ಲದ ಈ ಪ್ರಕರಣವನ್ನು ವೈಜ್ಞಾನಿಕವಾಗಿ ತನಿಖೆ ನಡೆಸಿ, ಎಲ್ಲ ಪೊಲೀಸರ ಸಹಯೋಗದಲ್ಲಿ ಭೇದಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳನ್ನು ಬಂಧಿಸಿ ₹79,89,870 ಲಕ್ಷ ನಗದು ಮತ್ತು ಅಪರಾಧಕ್ಕಾಗಿ ಬಳಸಿದ್ದ ಕಾರು, ಮೊಬೈಲ್ ಸೇರಿ ₹85,89,770 ಲಕ್ಷ ಸೊತ್ತನ್ನು ವಶಪಡಿಕೊಂಡಿದ್ದೇವೆ. ಬಂಧಿತ ಆರೋಪಿಗಳಲ್ಲಿ ಮೂವರು ಆ ಟ್ರಸ್ಟ್ನಲ್ಲಿಯೇ ಕೆಲಸ ಮಾಡುತ್ತಿದ್ದರು” ಎಂದು ತಿಳಿಸಿದರು.
“ಕುಶಾಲ್ ಕುಮಾರ್, ಬಸವರಾಜ್, ಮಹಾಂತೇಶ್ ಟ್ರಸ್ಟ್ನ ಬಂಧಿತ ಆರೋಪಿಗಳಾಗಿದ್ದಾರೆ. ಪ್ರಾಥಮಿಕವಾಗಿ ಇವರು ಕಳ್ಳತನಕ್ಕೆ ಯೋಜನೆಯನ್ನು ಮಾಡಿಕೊಂಡು ಇತರೆ 7 ಮಂದಿ ಆರೋಪಿಗಳನ್ನು ಜೊತೆ ಸೇರಿ ಈ ಕೃತ್ಯ ಎಸಗಿದ್ದಾರೆ. ಜಿಲಾನಿ, ಪರಶುರಾಮ, ರಂಗಪ್ಪ, ಮಂಜುನಾಥ, ಕಿರಣ, ರಜಾಕ್ ಮತ್ತು ವೀರೇಶ ಇನ್ನುಳಿದ ಆರೋಪಿಗಳಾಗಿದ್ದಾರೆ” ಎಂದು ಮಾಹಿತಿ ನೀಡಿದರು.