
ಇನ್ನೊಬ್ಬರ ಮನಸ್ಸಿಗೆ ನೋವು ಮಾಡದ ವ್ಯಕ್ತಿತ್ವ ಅವಳದ್ದು, ಇನ್ಯಾರೋ ಈ ಕೃತ್ಯ ಮಾಡಿಸಿದ್ದಾರೆ – ಬೃಹನ್ನಾಟಕ ಸೂತ್ರಧಾರಿ ಚೈತ್ರಾ ಕುಂದಾಪುರ ಬಂಧನದ ಬಳಿಕ ತಾಯಿಯ ಮೊದಲ ಪ್ರತಿಕ್ರಿಯೆ
- ಕರ್ನಾಟಕ
- September 14, 2023
- No Comment
- 64
ನ್ಯೂಸ್ ಆ್ಯರೋ : ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧಿಯಾಗಿರುವ ಫೈರ್ ಬ್ರಾಂಡ್ ಖ್ಯಾತಿಯ ಚೈತ್ರ ಕುಂದಾಪುರ ಎಂಬಾಕೆಯ ಬಗ್ಗೆ ಅವರ ತಾಯಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಕುಂದಾಪುರದ ಚಿಕ್ಕನ್ ಸಾಲ್ ರಸ್ತೆಯಲ್ಲಿರುವ ಚೈತ್ರ ಕುಂದಾಪುರ ಮನೆಯಲ್ಲಿ ಮಗಳ ವಿಚಾರವಾಗಿ ತಾಯಿ ರೋಹಿಣಿ ಪ್ರತಿಕ್ರಿಯೆ ನೀಡಿದ್ದು, ನನ್ನ ದೊಡ್ಡ ಮಗಳು ಚೈತ್ರ ಅರೆಸ್ಟ್ ಆದ ಬಗ್ಗೆ ಮಾಹಿತಿ ನೀಡಿದ್ದಳು. ಮನೆಯಲ್ಲಿ ಚೈತ್ರ ನಮಗೆ ಯಾವುದೇ ರೀತಿಯ ಟೆನ್ಶನ್ ನೀಡುತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಆರಾಮದಲ್ಲಿ ನಾರ್ಮಲ್ ಆಗಿಯೇ ಮನೆಯಲ್ಲಿದ್ದಳು. ಹೊಸ ಕಾರು ಕೊಂಡುಕೊಂಡ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ನಾನು ವಿಚಾರಿಸಿಲ್ಲ. ಬ್ಯಾಂಕಿನಲ್ಲಿ ಒಂದು ಲೋನ್ ಇದೆ ಎನ್ನುವ ಮಾಹಿತಿ ಇದೆ ಅದು ಯಾವುದು ಅಂತ ಗೊತ್ತಿಲ್ಲ ಎಂದರು.
ವಾರದ ಹಿಂದೆ ಕುಂದಾಪುರದ ಮನೆಯಲ್ಲಿ ಚೈತ್ರ ಇದ್ದಳು. ಯಾವುದಾದರೂ ಕಾರ್ಯಕ್ರಮ ಇದ್ದಾಗ ಕರೆದಾಗ ಎಲ್ಲರ ಜೊತೆ ಹೋಗುತ್ತಿದ್ದಳು. ವಾರದ ಹಿಂದೆ ಇಲ್ಲಿಂದ ತೆರಳಿದವಳು ಅರೆಸ್ಟ್ ಆಗಿದ್ದಾಳೆ. ಅರೆಸ್ಟ್ ಆದ ಬಳಿಕ ನಿನ್ನೆ ಎರಡು ಗಂಟೆಯ ಹೊತ್ತಿಗೆ ನನಗೆ ಪೊಲೀಸ್ ಮೂಲಕ ಕರೆ ಮಾಡಿದ್ದಳು ಎಂದವರು ತಿಳಿಸಿದ್ದಾರೆ.
ಕರೆ ಮಾಡಿದ ಅವಳು, ಏನಾಗುವುದಿಲ್ಲ, ಆರಾಮವಾಗಿರು ಔಷಧಿಗಳನ್ನು ತೆಗೆದುಕೊಳ್ಳು ಎಂದಿದ್ದಳು. ಅವಳ ಬಗ್ಗೆ ನನಗೆ ನಂಬಿಕೆ ಇದೆ ಇನ್ನೊಬ್ಬರ ಮನಸಿಗೆ ನೋವು ಮಾಡದ ವ್ಯಕ್ತಿತ್ವ ಅವಳದ್ದು. ಇನ್ಯಾರೋ ಆಕೆಯನ್ನು ಮುಂದಿಟ್ಟುಕೊಂಡು ಈ ಕಾರ್ಯ ನಡೆಸಿದ್ದಾರೆ. ನೇರ ನೇರ ಮಾತನಾಡುವ ಪ್ರವೃತ್ತಿ ಅವಳದು ತಪ್ಪು ಮಾಡುವ ಪ್ರವೃತ್ತಿ ಅವಳದಲ್ಲ. ಇಂತಹ ಕೃತ್ಯದಲ್ಲಿ ಭಾಗಿಯಾಗುವ ಕುಟುಂಬ ನಮ್ಮದಲ್ಲ ಎಂದು ಬಂಧನದ ಬಳಿಕ ಚೈತ್ರ ಕುಂದಾಪುರ ತಾಯಿ ರೋಹಿಣಿ ಪ್ರತಿಕ್ರಿಯೆ ನೀಡಿದ್ದಾರೆ.