ಕೊನೇ ಓವರ್ ನಲ್ಲಿ ಐದು ಸಿಕ್ಸರ್ ಬಾರಿಸಿ KKR ಗೆಲ್ಲಿಸಿದ ರಿಂಕು ಸಿಂಗ್ ಯಾರು? – ಬಡತನದಲ್ಲಿ ಅರಳಿದ ಪ್ರತಿಭೆಯ ಅಸಲಿ ಕಹಾನಿ ಇಲ್ಲಿದೆ ನೋಡಿ…
- ಕ್ರೀಡಾ ಸುದ್ದಿ
- April 10, 2023
- No Comment
- 317
ನ್ಯೂಸ್ ಆ್ಯರೋ : ಆರ್ಸಿಬಿ ವಿರುದ್ಧದ ಕೊನೆಯ ಪಂದ್ಯಾಟದಲ್ಲಿ ತಮ್ಮ ಅಮೋಘವಾದ ಬ್ಯಾಟಿಂಗ್ ಮೂಲಕ ಹಾಗೂ ಗುಜರಾತ್ ವಿರುದ್ಧ ನಡೆದ ಪಂದ್ಯಾಟದಲ್ಲಿ ಕೆಕೆಆರ್ ಗೆ ಅವಿಸ್ಮರಣೀಯ ಗೆಲುವು ತಂದುಕೊಟ್ಟ ರಿಂಕು ಸಿಂಗ್ ಇದೀಗ ಕ್ರಿಕೆಟ್ ಪ್ರಿಯರಲ್ಲಿ ಹೊಸ ಭರವಸೆಯನ್ನು ಮೂಡಿಸಿದ್ದಾರೆ. ಇಂತಹ ಅದ್ಭುತ ಪ್ರತಿಭೆ ಇನ್ನೂ ಟೀಂ ಇಂಡಿಯಾಗೆ ಯಾಕೆ ಆಯ್ಕೆಯಾಗಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.
ಅದ್ಭುತ ಪ್ರತಿಭೆ ರಿಂಕು ಅವರ ವೈಯಕ್ತಿಕ ಬದುಕು ಹಾಗೂ ಕ್ರೀಡಾ ಸಾಧನೆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಉತ್ತರಪ್ರದೇಶದ ಅಲಿಘಡದಲ್ಲಿ 1997ರಲ್ಲಿ ಜನಿಸಿದ ರಿಂಕು, ಬಡತನದಲ್ಲೇ ಬದುಕು ಕಟ್ಟಿಕೊಂಡವರು. ಇವರ ತಂದೆ ಸಾಮಾನ್ಯ ಸಿಲಿಂಡರ್ ವಿತರಕನಾಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ. ಈ ದಂಪತಿಗೆ ಐವರು ಮಕ್ಕಳು.
ಕುಟುಂಬದ ನೆರವಿಗೆ ಕಸ ಗುಡಿಸುವ ಸ್ವಾಭಿಮಾನದ ಕೆಲಸ ಮಾಡಿದ್ದ ರಿಂಕು:
ಬಾಲ್ಯದಲ್ಲೇ ಕ್ರಿಕೆಟ್ ಬಗ್ಗೆ ಅಪಾರ ಆಸಕ್ತಿ ಇದ್ದರೂ ಅದು ನನಸಾಗುವುದು ಕಷ್ಟ ಎಂದು ತಿಳಿದಿದ್ದರು. ತಾನು ಕಂಡ ಕನಸ್ಸನ್ನು ನನಸಾಗಿಸಲು ಹಾಗೂ ಕುಟುಂಬದ ನಿರ್ವಹಣೆಗೆಗಾಗಿ ಕೋಚಿಂಗ್ ಸೆಂಟರ್ ಒಂದರಲ್ಲಿ ಕಸ ಗುಡಿಸಿ ಒರೆಸುವ ಕೆಲಸಕ್ಕೆ ಸೇರಿದ್ದರು. ಇದರ ನಡುವೆ ತಮ್ಮ ಕ್ರಿಕೆಟ್ ಬಗ್ಗೆ ಕನಸ್ಸನ್ನು ಕಾಣುತ್ತಾ, ಅದನ್ನು ನನಸಾಗಿಸಲು ಪ್ರಯತ್ನಿಸುತ್ತಿದ್ದರು.
ಕೆಲಸ ಮಾಡುತ್ತಾ ಹೋದ್ರೆ ಕ್ರಿಕೆಟರ್ ಆಗಲು ಸಾಧ್ಯವಿಲ್ಲ ಎಂದು ತಿಳಿದು ಅಲ್ಲಿಂದ್ದ ನಿತ್ಯಲೂ ಕ್ರಿಕೆಟ್ ಮೈದಾನಕ್ಕೆ ಇಳಿದರು. ಈ ವೇಳೆ ತಂದೆಯಿಂದ ಬೈಸಿಕೊಂಡಿರುವುದೂ ಇದೆ ಎಂದು ರಿಂಕು ನೆನಪಿಸಿಕೊಂಡಿದ್ದಾರೆ.
ಪ್ರತಿಭೆಗೆ ಸಿಕ್ಕಿತು ಅವಕಾಶ
ಅಂಡರ್-16 ಹಾಗೂ ಕಾಲೇಜು ಮಟ್ಟದಲ್ಲಿ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ರಿಂಕು, ರಣಜಿ ಟ್ರೋಫಿಗೆ ಆಯ್ಕೆಯಾದರು. ದೇಶಿಯ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಬೆನ್ನಲ್ಲೇ ಐಪಿಎಲ್ನಲ್ಲಿ ಆಡುವ ಅವಕಾಶಕ್ಕೆ ಕಾದರು. ಅದರಂತೆಯೇ 2017ರಲ್ಲಿ ಐಪಿಎಲ್ಗೆ ಎಂಟ್ರಿ ಕೊಟ್ರು. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಅವರನ್ನು 10 ಲಕ್ಷಕ್ಕೆ ಖರೀದಿಸಿತು. ಆದರೆ ಅಲ್ಲಿ ಮಿಂಚುವ ಅವಕಾಶ ಸಿಗಲಿಲ್ಲ. 2018ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 80 ಲಕ್ಷ ರೂಪಾಯಿಗೆ ಮಾರಾಟವಾದರು. ಅದು ಅವರ ಮೂಲ ಬೆಲೆ 20 ಲಕ್ಷಕ್ಕಿಂತ ನಾಲ್ಕು ಪಟ್ಟು ಹೆಚ್ಚು. ಮೊದಲ ವರ್ಷ ಆಡಿದ ನಾಲ್ಕು ಪಂದ್ಯಗಳಲ್ಲಿ 29 ರನ್ ಮಾತ್ರ ಗಳಿಸಿದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಕ ಇನ್ನಿಂಗ್ಸ್ ಕಟ್ಟಲು ನೆರವಾಗಬಲ್ಲರು ಎಂಬ ಉದ್ದೇಶದಿಂದ ಅವರನ್ನು ಕೆಕೆಆರ್ ಮುಂದಿನ ವರ್ಷ ಕೂಡಾ ರಿಟೈನ್ ಮಾಡಿಕೊಂಡಿತು. ಅಲ್ಲಿಂದ ಕೆಕೆಆರ್ ಪರ ಆಡುತ್ತಿರುವ ರಿಂಕು ತಮಗೆ ಸಿಕ್ಕ ಅವಕಾಶದಲ್ಲಿ ಅದ್ಭುತವಾಗಿ ಆಡುತ್ತಿದ್ದಾರೆ.
ಕಳೆದ ವರ್ಷ ನಡೆದ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದ ಬಳಿಕ ರಿಂಕು ಸುದ್ದಿಯಾದ್ರು. ಆ ಪಂದ್ಯದಲ್ಲಿ ಕೇವಲ 23 ಎಸೆತಗಳನ್ನು ಎದುರಿಸಿದ ಅವರು 42 ರನ್ ಗಳಿಸಿ ತಂಡವನ್ನ ಸೋಲಿನಿಂದ ಪಾರು ಮಾಡಿ ಗೆಲ್ಲಿಸಿದ್ದರು. ಮತ್ತೊಮ್ಮೆ ಲಕ್ನೋ ವಿರುದ್ಧದ ಚೇಸಿಂಗ್ ವೇಳೆ 15 ಎಸೆತಗಳಿಂದ 40 ರನ್ ಕಲೆ ಹಾಕಿದರು. ಆದರೆ, ತಂಡವು ಗುರಿ ತಲುಪುವಲ್ಲಿ ಯಶಸ್ವಿಯಾಗಲಿಲ್ಲ. ಅಂದು ಕೇವಲ ಎರಡು ರನ್ ಕಡಿಮೆಯಾಗಿತ್ತು. ಆ ಬಳಿಕ ಹಲವು ಪಂದ್ಯಗಳಲ್ಲಿ ತಂಡಕ್ಕೆ ಗೆಲುವಿನ ಕೊಡುಗೆ ನೀಡಿದ್ದಾರೆ. ಇದೀಗ ಇಂದಿನ ಪಂದ್ಯದಲ್ಲೂ ರಿಂಕು ಆಟದಿಂದಾಗಿ ಕೆಕೆಆರ್ ಜಯ ಸಾಧಿಸಿದೆ.
ಬಿಸಿಸಿಐನಿಂದ ನಿಷೇಧದ ಶಿಕ್ಷೆ
ಭಾರತದ ಕ್ರಿಕೆಟಿಗರಿಗೆ ಭಾರತದ ಹೊರಗಿನ ಯಾವುದೇ ಲೀಗ್ನಲ್ಲಿ ಆಡಲು ಬಿಸಿಸಿಐ ಅನುಮತಿ ನೀಡುವುದಿಲ್ಲ. ರಿಂಕು ಸಿಂಗ್ ಒಂದು ಬಾರಿ ಬಿಸಿಸಿಐನಿಂದ ನಿಷೇಧವನ್ನು ಕೂಡಾ ಎದುರಿಸಿದ್ದಾರೆ. 2019ರಲ್ಲಿ, ಅವರು ವಿದೇಶಿ ಲೀಗ್ನಲ್ಲಿ ಪಾಲ್ಗೊಂಡಿದ್ದರು.
ಐಪಿಎಲ್ ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ರಿಂಕು ಅವರು ಮುಂದಿನ ದಿನಗಳಲ್ಲಿ ಭಾರತದ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಬೇಕೆಂಬುದು ಅವರ ಅಭಿಮಾನಿಗಳ ಆಸೆಯಾಗಿದ್ದು, ರಿಂಕು ಸ್ಥಿರ ಪ್ರದರ್ಶನ ನೀಡಬೇಕಾದ ಅನಿವಾರ್ಯತೆ ಇದೆ.