ವಿರಾಟ್ ಕೊಹ್ಲಿ ಸುಳ್ಳುಗಾರ, ಟೀಂ ಇಂಡಿಯಾ ಆಟಗಾರರು ಡ್ರಗ್ಸ್ ಇಂಜೆಕ್ಷನ್ ತಗೋಳ್ತಾರೆ – ಹೀಗೂ ಆಯ್ಕೆ ನಡೆಯೋದು ಹೀಗಾ..!? ಚೇತನ್ ಶರ್ಮಾ ಹೇಳಿದ್ದೇನು..!!
- ಕ್ರೀಡಾ ಸುದ್ದಿ
- February 15, 2023
- No Comment
- 540
ನ್ಯೂಸ್ ಆ್ಯರೋ : ಖಾಸಗಿ ವಾಹಿನಿಯೊಂದು ನಡೆಸಿರುವ ರಹಸ್ಯ ಕಾರ್ಯಾಚರಣೆಯಲ್ಲಿ ಭಾರತೀಯ ಕ್ರಿಕೆಟ್ ಆಯ್ಕೆ ಸಮಿತಿಯ ಮುಖ್ಯ ಆಯ್ಕೆಗಾರ ಚೇತನ್ ಶರ್ಮ ಅನೇಕ ಸಂಗತಿಗಳನ್ನು ಹೊರಹಾಕಿದ್ದಾರೆ. ಗಾಯಗಳನ್ನು ಮುಚ್ಚಿಡಲು ಆಟಗಾರರು ಇಂಜೆಕ್ಷನ್ ತೆಗೆದುಕೊಳ್ಳುವ ಆಘಾತಕಾರಿ ಸಂಗತಿ ಹಾಗೂ ಸೌರವ್ ಗಂಗೂಲಿ ವರ್ಸಸ್ ವಿರಾಟ್ ಕೊಹ್ಲಿ ವಿವಾದದಲ್ಲಿ ನಿಜವಾಗಿ ನಡೆದಿದ್ದೇನು ಎಂಬ ಬಗ್ಗೆ ಚೇತನ್ ಶರ್ಮ ಮಾತನಾಡಿದ್ದಾರೆ ಎನ್ನಲಾಗಿದೆ.
ಆಸ್ಟ್ರೆಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಸಂದರ್ಭದಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಫಿಟ್ನೆಸ್ ಹೊಂದಿರಲಿಲ್ಲ. ಆದರೂ, ಒತ್ತಡಕ್ಕೆ ಸಿಲುಕಿ ಅವರನ್ನು ತಂಡಕ್ಕೆ ಆಯ್ಕೆ ಮಾಡಬೇಕಾಯಿತು. ಆದರೆ, ಒಂದು ಪಂದ್ಯ ಆಡಿದ ಬಳಿಕ ಅವರು ಗಾಯ ಉಲ್ಬಣಗೊಂಡು ತಂಡದಿಂದ ಹೊರಬಿದ್ದರು. ವಿಶ್ವಕಪ್ಗೆ ಬುಮ್ರಾ ಫಿಟ್ನೆಸ್ ಹೊಂದಿಲ್ಲದಿದ್ದರೂ ಆಯ್ಕೆ ಮಾಡಬೇಕಾಯಿತು. ಇತ್ತೀಚಿನ ಶ್ರೀಲಂಕಾ ವಿರುದ್ಧದ ಸರಣಿಗೂ ಆರಂಭದಲ್ಲಿ ಬುಮ್ರಾ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ, ಗಾಯ ಪೂರ್ಣ ಗುಣವಾದ ಕಾರಣ ಹೊರಗುಳಿದರು.
ಈ ರೀತಿ ಸ್ಟಾರ್ ಆಟಗಾರರು ಫಿಟ್ನೆಸ್ ಹೊಂದಿಲ್ಲದಿದ್ದರೂ ತಂಡದಲ್ಲಿರುತ್ತಾರೆ. ಬಿಸಿಸಿಐ ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಆಯ್ಕೆಗಾರರಿಗೆ ಈ ಮಾಹಿತಿ ಇದ್ದರೂ ಅವರು ಅಸಹಾಯಕರು ಎಂದು ಚೇತನ್ ಶರ್ಮ ಹೇಳಿದ್ದಾಗಿ ಖಾಸಗಿ ವಾಹಿನಿ ವರದಿ ಮಾಡಿದೆ.
ಖಾಸಗಿ ವಾಹಿನಿ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಶರ್ಮಾ ಇಂಥದ್ದೇ ಹಲವಾರು ವಿಷಯಗಳನ್ನು ಬಹಿರಂಗ ಪಡಿಸಿದ್ದು, ಈ ಚುಚ್ಚುಮದ್ದುಗಳಲ್ಲಿ ಡ್ರಗ್ಸ್ ಇದೆ ಎಂದು ಹೇಳಿದ್ದಾರೆ. ಅಚ್ಚರಿ ಎಂದರೆ ಕ್ರಿಕೆಟಿಗರು ತೆಗೆದುಕೊಂಡ ಈ ಡ್ರಗ್ಸ್ ಡೋಪಿಂಗ್ ಪರೀಕ್ಷೆಯಲ್ಲೂ ಸಿಕ್ಕಿಬೀಳುವುದಿಲ್ಲ ಎಂದು ಚೇತನ್ ಶರ್ಮಾ ಹೇಳಿದ್ದಾರೆ ಎಂದು ಹೇಳಲಾಗಿದೆ.
ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ನಡುವೆ ದೊಡ್ಡ ಅಹಂ ಘರ್ಷಣೆ ಇತ್ತು. ವಿರಾಟ್ ಅವರು ಮಂಡಳಿಗಿಂತ ಮೇಲಿದ್ದಾರೆಂದು ಭಾವಿಸಿದ್ದರು ಮತ್ತು ಗಂಗೂಲಿ ತಮ್ಮದೇ ಆದ ನಿಲುವಿಗೆ ಬದ್ಧರಾಗಿದ್ದರು ಎಂದು ಹೇಳಿದ್ದಾರೆ. ಗಂಗೂಲಿ-ಕೊಹ್ಲಿ ನಡುವೆ ಶೀಥಲ ಸಮರ ಅಂತೆಯೇ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರ ಕಾರಣದಿಂದ ತಮ್ಮ ನಾಯಕತ್ವವನ್ನು ಕೈಯಿಂದ ಜಾರಿತು ಎಂದು ವಿರಾಟ್ ಕೊಹ್ಲಿ ಎಂದು ಭಾವಿಸಿದ್ದಾರೆ. ಹಾಗಾಗಿಯೇ ದಕ್ಷಿಣ ಆಫ್ರಿಕಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಗಂಗೂಲಿ ವಿರುದ್ಧ ವಾಗ್ದಾಳಿ ನಡೆಸಿದರು.
ವಿರಾಟ್ ಕೊಹ್ಲಿ ಸುಳ್ಳುಗಾರ, ಅವರ ನಾಯಕತ್ವವನ್ನು ಬಿಟ್ಟುಕೊಡಬೇಡಿ ಎಂದು ಮೊದಲೇ ತಿಳಿಸಲಾಗಿತ್ತು. ನಾಯಕತ್ವದಿಂದ ಕೆಳಗಿಳಿಯಬೇಡಿ ಎಂದು ಗಂಗೂಲಿ ಹೇಳಿದ್ದರು. 2021ರಲ್ಲಿ ದುಬೈನಲ್ಲಿ ನಡೆದ ಟಿ20 ವಿಶ್ವಕಪ್ಗೆ ಮುನ್ನವೇ ಕೊಹ್ಲಿ ಟೂರ್ನಿಯ ಬಳಿಕ ಟಿ20 ನಾಯಕತ್ವ ತೊರೆಯುವುದಾಗಿ ಘೋಷಿಸಿದ್ದರು. ಆ ಸಂದರ್ಭದಲ್ಲಿ ‘ನಾಯಕತ್ವ ತೊರೆಯಬೇಡಿ, ಇನ್ನೊಮ್ಮೆ ಯೋಚಿಸಿ’ ಎಂದು ಬಿಸಿಸಿಐ ಅಧ್ಯಕ್ಷರಾಗಿದ್ದ ಸೌರವ್ ಗಂಗೂಲಿ ಕೊಹ್ಲಿಗೆ ಸೂಚಿಸಿದ್ದರು ಎಂದು ಚೇತನ್ ಶರ್ಮ ಬಹಿರಂಗ ಪಡಿಸಿದ್ದಾರೆ.
ಆದರೆ ಅಹಂನಿಂದಾಗಿ ವಿರಾಟ್ ಕೊಹ್ಲಿ ಸುದ್ದಿಗೋಷ್ಠಿಯಲ್ಲಿ ಗಂಗೂಲಿಯನ್ನು ದೂಷಿಸಿದರು. ವಿರಾಟ್ ಕೊಹ್ಲಿಯನ್ನು ನಾಯಕ ಸ್ಥಾನದಿಂದ ತೆಗೆದುಹಾಕುವುದು ಗಂಗೂಲಿಯದ್ದು ಮಾತ್ರ ನಿರ್ಧಾರ ಆಗಿರಲಿಲ್ಲ. ಅದು ಆಯ್ಕೆಗಾರರ ಒಟ್ಟು ನಿರ್ಧಾರವಾಗಿತ್ತು. ರವಿಶಾಸ್ತ್ರಿ ಅವರನ್ನು ಕೋಚ್ ಮಾಡುವಲ್ಲಿ ಕೊಹ್ಲಿಯ ಪಾತ್ರವೂ ದೊಡ್ಡದಿದೆ ಎಂದು ಹೇಳಿದ್ದಾರೆ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವೆ ಯಾವುದೇ ಸಂಘರ್ಷವಿಲ್ಲ, ಆದರೆ ಕೆಲವು ಅಹಂ ಸಂಘರ್ಷವಿದೆ. ಅವರಿಬ್ಬರನ್ನು ಧರ್ಮೇಂದ್ರ ಮತ್ತು ಅಮಿತಾಭ್ ಬಚ್ಚನ್ ಜೊತೆ ಹೋಲಿಕೆ ಮಾಡಿದ್ದಾರೆ ಶರ್ಮಾ. ರೋಹಿತ್ ಮತ್ತು ವಿರಾಟ್ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಯಾವುದೇ ಸಂಘರ್ಷ ನಡೆದಿದ್ದರೆ ನನಗೆ ತಿಳಿಸಲಾಗುತ್ತಿತ್ತು. ಎರಡು ಗ್ರೂಪ್ ಇದೆ. ಒಂದನ್ನು ರೋಹಿತ್ ಶರ್ಮಾ ಮುನ್ನಡೆಸಿದರೆ, ಇನ್ನೊಂದನ್ನು ವಿರಾಟ್ ಕೊಹ್ಲಿ ಮುನ್ನಡೆಸುತ್ತಿದ್ದಾರೆ ಎಂದಿದ್ದಾರೆ.
ಕುಟುಕು ಕಾರ್ಯಾಚರಣೆಯಲ್ಲಿ ಹಲವು ಸ್ಫೋಟಕ ವಿಚಾರಗಳನ್ನು ಬಹಿರಂಗ ಪಡಿಸಿರುವ ಚೇತನ್ ಶರ್ಮ, ಬಾಂಗ್ಲಾ ದೇಶ ವಿರುದ್ಧ ಇಶಾನ್ ಕಿಶನ್ ಬಾರಿಸಿದ ಭರ್ಜರಿ ದ್ವಿಶತಕದ ಕಾರಣದಿಂದ ಏಕದಿನ ತಂಡದಲ್ಲಿ ಶಿಖರ್ ಧವನ್ ಮತ್ತು ಸಂಜು ಸ್ಯಾಮ್ಸನ್ ಸ್ಥಾನ ಕಳೆದುಕೊಂಡಿದ್ದಾರೆ. ಕೆ.ಎಲ್. ರಾಹುಲ್ ಮೇಲೆ ಕೂಡ ಒತ್ತಡ ಹೆಚ್ಚಿದೆ. ಇದೇ ಕಾರಣಕ್ಕೆ ಯಾವುದೇ ಆಟಗಾರರು ಫಿಟ್ನೆಸ್ ಕಾರಣಕ್ಕೆ ತಂಡದಿಂದ ಹೊರಗುಳಿಯಲು ಬಯಸುವುದಿಲ್ಲ ಎಂದಿದ್ದಾರೆ.
ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ದೀಪಕ್ ಹೂಡಾ, ಶುಭಮನ್ ಗಿಲ್ ಮತ್ತು ಇತರ 15-20 ಆಟಗಾರರನ್ನು ತಂಡಕ್ಕೆ ಕರೆತಂದಿದ್ದೇನೆ. ಶುಭ್ಮನ್ ಗಿಲ್ಗೆ ಅವಕಾಶ ನೀಡಲು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಗೆ ‘ವಿಶ್ರಾಂತಿ’ ನೀಡಲಾಗಿದೆ, ಭವಿಷ್ಯದಲ್ಲಿ ರೋಹಿತ್ ಶರ್ಮಾ T20I ಸೆಟಪ್ ನ ಭಾಗವಾಗುವುದಿಲ್ಲ. ಹಾರ್ದಿಕ್ ಪಾಂಡ್ಯ ದೀರ್ಘಾವಧಿಗೆ ನಾಯಕರಾಗಿರುತ್ತಾರೆ ಎಂದು ಚೇತನ್ ಶರ್ಮಾ ಹೇಳಿದ್ದಾರೆ. ಇನ್ನು ಚೇತನ್ ಶರ್ಮಾ ಅವರ ಈ ಹೇಳಿಕೆ ಕ್ರಿಕೆಟ್ ವಲಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದು, ಬಿಸಿಸಿಐ ಈ ಕುರಿತು ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.