ವಿಚ್ಛೇದನ ಪಡೆದಿದ್ದ ಪತ್ನಿಯನ್ನೇ ಮರು ಮದುವೆಯಾದ ಭೂಪ – ಪತ್ನಿಯಿಂದ ದೂರಾದ ಆತನಿಗೆ ಬಾಂಧವ್ಯದ ಮೌಲ್ಯ ಗೊತ್ತಾಗಿದ್ದು ಹೇಗೆ?
- ಸಂಬಂಧ
- November 30, 2023
- No Comment
- 131
ನ್ಯೂಸ್ ಆ್ಯರೋ : ಪತಿ- ಪತ್ನಿ ನಡುವೆ ಹೊಂದಾಣಿಕೆ ಬಹು ಮುಖ್ಯವಾಗಿರುತ್ತದೆ. ಇಲ್ಲವಾದರೆ ಕೌಟುಂಬಿಕ ಕಲಹ, ಮನಸ್ತಾಪ ಹೆಚ್ಚಾಗಿ ವಿಚ್ಛೇದನದ ಹಾದಿ ತುಳಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ.
ವೈವಾಹಿಕ ಜೀವನದ ಆರಂಭದಲ್ಲಿ ಇರುವ ಪ್ರೀತಿ ಜವಾಬ್ದಾರಿಗಳು ಹೆಚ್ಚಾದಾಗ ಕಡಿಮೆಯಾಗುತ್ತಾ ಹೋಗುತ್ತದೆ. ಆದರೆ ಒಟ್ಟಿಗೆ ಇದ್ದಾಗ ನಮಗೆ ಸಂಬಂಧದ ಮಹತ್ವ ಗೊತ್ತಿರುವುದಿಲ್ಲ. ಆದರೆ ದೂರವಾದಾಗಲೇ ನಿಜವಾದ ಮೌಲ್ಯ ತಿಳಿಯುವುದು.
ಉದಾಹರಣೆಗೆ ಒಂದು ವಸ್ತು ನಮ್ಮಲ್ಲಿ ಇದ್ದರೆ ಅದರ ಮೌಲ್ಯ ನಮಗೆ ಗೊತ್ತಾಗುವುದಿಲ್ಲ. ಅದು ಕಳೆದು ಹೋದಾಗಲೇ ವಸ್ತುವಿನ ಮಹತ್ವ ಏನೆಂಬುದು ಅರಿವಾಗುವುದು.
ಎಷ್ಟೋ ಮನೆಗಳಲ್ಲಿ ಹೊರಗೆ ಎಲ್ಲರೊಂದಿಗೆ ನಗುತ್ತಾ ಮಾತನಾಡುವ ಜನರು ಮನೆಯೊಳಗೆ ಸಂಗಾತಿ, ಮಕ್ಕಳ ಜೊತೆ ಪ್ರೀತಿಯ ಮಾತನಾಡೋದಿಲ್ಲ. ಮುಖ್ಯವಾಗಿ ಸಂಗಾತಿ ಎಂದರೆ ನಿರ್ಲಕ್ಷ್ಯ, ತಾತ್ಸಾರವೇ ಅಧಿಕವಾಗಿರುತ್ತದೆ. ಪತಿ ಅಥವಾ ಪತ್ನಿ ಆಡಿದ ಮಾತುಗಳೆಲ್ಲ ಕಹಿಯಾಗ ತೊಡಗುತ್ತದೆ. ಮದುವೆ, ಮನೆ, ಮಕ್ಕಳು ಕೇವಲ ಒಂದು ಹೊರೆ ಎಂದೆನಿಸುತ್ತದೆ. ಇದರಿಂದ ಹೊರ ಬಂದರೆ ಸಾಕು ಎನ್ನುವವರು ಆತುರದ ನಿರ್ಧಾರ ಕೈಗೊಂಡು ಕೊನೆಗೆ ಪಶ್ಚಾತಾಪ ಪಡುತ್ತಾರೆ.
ಇಲ್ಲೊಬ್ಬ ವ್ಯಕ್ತಿಯ ಜೊತೆಗೆ ಆಗಿರುವುದು ಇದೆ. ಅವಸರದ ನಿರ್ಧಾರ ಕೈಗೊಂಡು ಸಂಗಾತಿಯಿಂದ ದೂರವಾಗಿ ಮತ್ತೆ ತನ್ನ ತಪ್ಪಿನ ಅರಿವಾಗಿ ಅವಳನ್ನೇ ಮರು ಮದುವೆ ಆಗಿದ್ದಾನೆ. ಅದು ಸರಿ ಸುಮಾರು 5 ವರ್ಷಗಳ ಬಳಿಕ.
ಉತ್ತರ ಪ್ರದೇಶದ ಪ್ರಯಾಗರಾಜ್ ವಿನಯ್ ಜೈಸ್ವಾಲ್ ಎಂಬಾತ ಈ ಬಗ್ಗೆ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. 2012ರಲ್ಲಿ ಮದುವೆಯಾಗಿದ್ದ ವಿನಯ್ ಕೆಲವು ಭಿನ್ನಾಭಿಪ್ರಾಯಗಳಿಂದಾಗಿ 2018 ರಲ್ಲಿ ಪತ್ನಿಯಿಂದ ವಿಚ್ಛೇದನ ಪಡೆದಿದ್ದಾನೆ. ಬಳಿಕ ಇಬ್ಬರಿಗೂ ತಪ್ಪಿನ ಅರಿವಾಗಿ ಐದು ವರ್ಷಗಳ ಬಳಿಕ ಮತ್ತೆ ಒಂದಾಗಲು ನಿರ್ಧರಿಸಿ ಮರು ಮದುವೆಯಾಗಿದ್ದಾರೆ.
ವಿಚ್ಛೇದನದ ಬಳಿಕ ವಿನಯ್ ಮತ್ತು ಪತ್ನಿ ಬೇರೆಬೇರೆಯಾಗಿ ವಾಸ ಮಾಡಲು ಶುರು ಮಾಡಿದ್ದರು. ಪತ್ನಿಗೆ ವಿನಯ್ ಮೇಲೆ ಇನ್ನೂ ಪ್ರೀತಿ ಇತ್ತು. ಒಂದು ಬಾರಿ ವಿನಯ್ಗೆ ಹೃದಯಾಘಾತವಾಗಿದೆ. ಸುದ್ದಿ ತಿಳಿದು ಬಂದ ಮಾಜಿ ಪತ್ನಿ ವಿನಯ್ ಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆದು ಆತ ಐಸಿಯುವಿನಿಂದ ಮನೆಗೆ ಬಂದು ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೂ ಜೊತೆ ಇದ್ದು ಆತನ ಸೇವೆ ಮಾಡಿದ್ದಾಳೆ. ವಿನಯ್ ಗೆ ಆದ ಹೃದಯಾಘಾತ ಇಬ್ಬರನ್ನು ಮತ್ತೆ ಒಂದಾಗುವಂತೆ ಮಾಡಿದೆ.
ಕುಟುಂಬ ಸದಸ್ಯರ ಸಮ್ಮುಖದಲ್ಲಿ ವಿನಯ್ ಮತ್ತೆ ಮಾಜಿ ಪತ್ನಿಯ ಕೈ ಹಿಡಿದು ಎರಡನೇ ಮದುವೆಯಾಗಿದ್ದಾನೆ. ಈ ಮದುವೆ ನೋಂದಣಿಯಾಗಿದ್ದರಿಂದ ವಿಚ್ಛೇದನದ ತೀರ್ಪನ್ನು ರದ್ದುಗೊಳಿಸಲಾಗಿದೆ.