ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಕ್ಯಾ. ಬ್ರಿಜೇಶ್ ಚೌಟ…!! – ನಳಿನ್ ಕೈತಪ್ಪಿದ ಟಿಕೆಟ್, ಹರಕೆ ಹೊತ್ತು ಸುದ್ದಿಯಾದ ದೈವಪಾತ್ರಿ ಅಭಿಲಾಷ್ ಚೌಟ..!!
- ರಾಜಕೀಯ
- March 12, 2024
- No Comment
- 7482
ನ್ಯೂಸ್ ಆ್ಯರೋ : ಈ ಬಾರಿಯ ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಯಾರೆಂಬ ಬಗ್ಗೆ ಚರ್ಚೆಯ ಬೆನ್ನಲ್ಲೇ ಹಾಲಿ ಸಂಸದ ನಳಿನ್ ಕುಮಾರ್ ಕಟೀಲು ಮಾಧ್ಯಮದ ಮುಂದೆ ತಮಗೆ ಟಿಕೆಟ್ ಕೈ ತಪ್ಪಿರುವ ಸುಳಿವು ನೀಡಿದ್ದಾರೆ.
ಸದ್ಯ ನಳಿನ್ ಕುಮಾರ್ ಕಟೀಲ್ ಕೈ ತಪ್ಪಿದ ಟಿಕೆಟ್ ಬಿಜೆಪಿಯ ಯುವ ಮುಖಂಡ ಬ್ರಿಜೇಶ್ ಚೌಟ ಅವರಿಗೆ ಸಿಗುವ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿದ್ದು ಚೌಟ ಅವರೇ ಬಿಜೆಪಿ ಅಭ್ಯರ್ಥಿಯಾಗುವ ನಿರೀಕ್ಷೆ ಹೆಚ್ಚಾಗಿದೆ.
ನಂಬಲರ್ಹ ಮೂಲಗಳ ಪ್ರಕಾರ ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಬ್ರಿಜೇಶ್ ಚೌಟ ಅವರೇ ಬಿಜೆಪಿ ಅಭ್ಯರ್ಥಿಯಾಗಲಿದ್ದು, ದಕ್ಷಿಣ ಕನ್ನಡದ ಸಂಸದ ಬದಲಾಗಬೇಕು ಎಂದು ಸ್ವಪಕ್ಷದ ಕಾರ್ಯಕರ್ತರಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ಹೆಚ್ಚಾಗಿದ್ದ ಕಾರಣ ಹೈಕಮಾಂಡ್ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
ಇದರ ನಡುವೆ ಮಂಗಳೂರಿನ ಕೊಡಮಣಿತ್ತಾಯ ದೈವ ಪಾತ್ರಿ ಅಭಿಲಾಶ್ ಚೌಟ ಅವರು ವಿಶಿಷ್ಟ ಹರಕೆಯೊಂದನ್ನು ಹೇಳಿದ್ದು, ಭಾರೀ ಸುದ್ದಿಗೆ ಕಾರಣವಾಗಿದೆ. ಬ್ರಿಜೇಶ್ ಚೌಟ ಬಿಜೆಪಿಯ ಅಭ್ಯರ್ಥಿ ಆಗಬೇಕು ಹಾಗೂ ಸಂಸದರಾಗಿ ಗೆದ್ದು ದೆಹಲಿಗೆ ಹೋಗಬೇಕು.
ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಈಗಿರುವುದಕ್ಕಿಂತಲೂ ಹೆಚ್ಚಿನ ಬಹುಮತದಿಂದ ಗೆದ್ದು ಮತ್ತೊಮ್ಮೆ ಪ್ರಧಾನಿಯಾದರೆ ಮಂಗಳೂರಿನ ಕದ್ರಿ ದೇವಾಸ್ಥಾನದಿಂದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಪಾದಯಾತ್ರೆ ಮಾಡಿ ಮೂಕಾಂಬಿಕೆಯ ಮುಂದೆ 48 ಸುತ್ತು ಮಡಸ್ತಾನ ಹಾಕುತ್ತೇನೆ ಎಂದು ಅಭಿಲಾಶ್ ಚೌಟ ಹರಕೆಯನ್ನು ಹೊತ್ತು ಕೊಂಡಿದ್ದಾರೆ.
ಸದ್ಯದ ಬೆಳವಣಿಗೆಯ ಪ್ರಕಾರ ಕ್ಯಾ. ಬ್ರಿಜೇಶ್ ಚೌಟ ಬಿಜೆಪಿ ಅಭ್ಯರ್ಥಿಯಾಗುವ ಸಂಭವ ಹೆಚ್ಚಿದ್ದು, ಅಭಿಲಾಶ್ ಚೌಟ ಅವರ ಹರಕೆ ಫಲಿಸುತ್ತದೆಯೋ ಕಾದು ನೋಡಬೇಕಿದೆ.