ಸಾವಿನಂಚಿನಲ್ಲಿದ್ದ ತಾಯಿಯ ಕೊನೆಯ ಆಸೆ ಈಡೇರಿಸಿದ ಪುತ್ರಿ – ಐಸಿಯುನಲ್ಲೇ ಹಸೆಮಣೆ ಏರಿ ಮಾದರಿಯಾದ ಮಗಳು
- ರಾಷ್ಟ್ರೀಯ ಸುದ್ದಿ
- December 28, 2022
- No Comment
- 147
ನ್ಯೂಸ್ ಆ್ಯರೋ : ತಾಯಿಯ ಕೊನೆಯ ಆಸೆಯನ್ನು ಪೂರೈಸಲು ಮಗಳು ಆಸ್ಪತ್ರೆಯ ಐಸಿಯುನಲ್ಲಿ ವಿವಾಹವಾದ ಹೃದಯ ವಿದ್ರಾವಕ ಘಟನೆ ಬಿಹಾರದ ಗಯಾ ಜಿಲ್ಲೆಯಲ್ಲಿ ನಡೆದಿದೆ.
ಸಾವಿನ ಅಂಚಿನಲ್ಲಿರುವವರ ಕೊನೆಯ ಆಸೆಯಿದ್ದರೆ ಅದನ್ನು ಈಡೇರಿಸಬೇಕು ಎಂದು ಹೇಳಲಾಗುತ್ತದೆ. ಅದರಂತೆ ತನ್ನ ಪ್ರೀತಿಯ ತಾಯಿಯ ಕೊನೆಯ ಆಸೆಯನ್ನು ಪೂರೈಸಲು ಮಗಳು ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಹಸೆಮಣೆ ಏರಿದರು. ಆದರೆ, ಮಗಳ ಮದುವೆಯಾದ ಎರಡು ಗಂಟೆಯಲ್ಲೇ ತಾಯಿ ಇಹಲೋಕ ತ್ಯಜಿಸಿದ್ದಾರೆ.
ಈ ಅಪರೂಪದ ಮದುವೆಗೆ ಸಾಕ್ಷಿಯಾಗಿದ್ದ ವಧು– ವರನ ಕುಟುಂಬದವರ ಜೊತೆಗೆ ಆಸ್ಪತ್ರೆಯ ಸಿಬ್ಬಂದಿಯ ಕಣ್ಣುಗಳೂ ಒದ್ದೆಯಾದವು. ಈ ಮದುವೆಯು ಗಯಾದ ಆಶಾ ಸಿಂಗ್ ಮಾಡ್ ಮ್ಯಾಜಿಸ್ಟ್ರೇಟ್ ಕಾಲೋನಿ ಬಳಿ ಇರುವ ಆರ್ಶ್ ಆಸ್ಪತ್ರೆಯ ಐಸಿಯುನಲ್ಲಿ ನಡೆಯಿತು.
ವರ್ಮಾ ಜಿಲ್ಲೆಯ ಗುರಾರು ಬ್ಲಾಕ್ನ ಬಾಲಿ ಗ್ರಾಮದ ನಿವಾಸಿ ಲಾಲನ್ ಕುಮಾರ್ ಅವರ ಪತ್ನಿ ಪೂನಂ ಕುಮಾರಿ ವರ್ಮಾ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ತಾನು ಬದುಕಿರುವಾಗಲೇ ಮಗಳು ಚಾಂದಿನಿ ಕುಮಾರಿಯ ಮದುವೆ ನೋಡಬೇಕು ಎಂಬ ಆಸೆ ಇತ್ತು. ಪೂನಂ ಕುಮಾರಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಯಾವುದೇ ಸಮಯದಲ್ಲಿ ಸಾವು ಸಂಭವಿಸಬಹುದು ಎಂದು ವೈದ್ಯರು ತಿಳಿಸಿದ್ದರು.
ತಾಯಿಯ ಆಸೆಯಂತೆ ಸಂಬಂಧಿಕರು ಮಾತನಾಡಿ, ಗುರುವಾರ ಬ್ಲಾಕ್ನ ಸೇಲಂಪುರ ಗ್ರಾಮದ ವಿದ್ಯುತ್ ಕುಮಾರ್ ಅಂಬೇಡ್ಕರ್ ಅವರ ಪುತ್ರ ಎಂಜಿನಿಯರ್ ಸುಮಿತ್ ಗೌರವ್ ಅವರೊಂದಿಗೆ ಚಾಂದಿನಿ ಕುಮಾರಿ ಅವರ ನಿಶ್ಚಿತಾರ್ಥವನ್ನು ಡಿಸೆಂಬರ್ 26 ರಂದು ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಹುಡುಗಿಯ ತಾಯಿಯ ಒತ್ತಾಯದ ಕಾರಣ, ಅವರಿಬ್ಬರೂ ನಿಶ್ಚಿತಾರ್ಥದ ನಿಗದಿತ ದಿನಾಂಕಕ್ಕಿಂತ ಒಂದು ದಿನ ಮುಂಚಿತವಾಗಿ ಆಸ್ಪತ್ರೆಯಲ್ಲಿಯೇ ಮದುವೆಯಾದರು.
ಮದುವೆಯಾದ ಕೇವಲ ಎರಡು ಗಂಟೆಯಲ್ಲೇ ತಾಯಿ ತೀರಿ ಹೋಗಿದ್ದು, ಬಳಿಕ ಎಲ್ಲರ ಕಣ್ಣು ತೇವಗೊಂಡಿತ್ತು. ಆಕೆ ಹೃದ್ರೋಗದಿಂದ ಬಳಲುತ್ತಿದ್ದರು. ತಾಯಿಯ ಆಸೆಯನ್ನು ಈಡೇರಿಸಲು ಆಸ್ಪತ್ರೆಯಲ್ಲೇ ಮದುವೆಯಾಗಿ ಮಾದರಿಯಾದಳು.