ಬಹುಭಾಷಾ ನಟಿ ಜಯಪ್ರದಾಗೆ ಬಂಧನ ಭೀತಿ – ಕೋರ್ಟ್ ವಿಚಾರಣೆಗೆ ಹಾಜರಾಗದ ಆರೋಪ, ಜಾಮೀನು ರಹಿತ ವಾರೆಂಟ್ ಜಾರಿ
- ಮನರಂಜನೆ
- December 23, 2022
- No Comment
- 299
ನ್ಯೂಸ್ ಆ್ಯರೋ : ಬಹುಭಾಷಾ ನಟಿ, ಮಾಜಿ ಸಂಸದೆ ಜಯಪ್ರದಾ ಅವರು ಬಂಧನ ಭೀತಿ ಎದುರಿಸುತ್ತಿದ್ದಾರೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಎರಡು ಪ್ರಕರಣಗಳ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ನಟಿಯು ಸಂಕಷ್ಟಕ್ಕೆ ಸಿಲುಕಿದ್ದಾರೆ.
ನಟಿ ಹಾಗೂ ರಾಂಪುರದ ಮಾಜಿ ಸಂಸದೆ ಆಗಿರುವ ಜಯಪ್ರದಾ ವಿರುದ್ಧ ರಾಂಪುರದ ವಿಶೇಷ ಸಂಸದ-ಶಾಸಕ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. ವಿಚಾರಣೆಗೆ ಜಯಪ್ರದಾ ಅವರು ನಿರಂತರವಾಗಿ ಗೈರು ಹಾಜರಾಗಿದ್ದರು.
ಮಂಗಳವಾರ ನಡೆದ ವಿಚಾರಣೆ ವೇಳೆ ಜಯಪ್ರದಾ ಹಾಜರಿರಲಿಲ್ಲ. ಹೀಗಾಗಿ, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ರಾಂಪುರದ ಪೊಲೀಸ್ ವರಿಷ್ಠಾಧಿಕಾರಿಗೆ ನ್ಯಾಯಾಲಯ ಆದೇಶಿಸಿದೆ ಎಂದು ತಿಳಿಸಿದರು. ಪ್ರಕರಣದ ಮುಂದಿನ ವಿಚಾರಣೆಯನ್ನು ಜನವರಿ 9ರಂದು ನಿಗದಿಪಡಿಸಲಾಗಿದೆ.
ಜಯಪ್ರದಾ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಎರಡು ಪ್ರತ್ಯೇಕ ಪ್ರಕರಣಗಳು 2019ರಲ್ಲಿ ದಾಖಲಾಗಿದ್ದವು. ಮೊದಲ ಪ್ರಕರಣವನ್ನು 2019ರ ಏಪ್ರಿಲ್ 18ರಂದು ರಾಂಪುರದ ಕ್ಯಾಮ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಪಿಪಾರಿಯಾ ಮಿಶ್ರಾ ಗ್ರಾಮದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ದಾಖಲಿಸಲಾಗಿದೆ. ಇದನ್ನು ವಿಡಿಯೊ ಕಣ್ಗಾವಲು ತಂಡದ ಉಸ್ತುವಾರಿ ಕುಲದೀಪ್ ಭಟ್ನಾಗರ್ ದಾಖಲಿಸಿದ್ದರು.
ಸ್ವರ್ ಪೊಲೀಸ್ ಠಾಣೆ ವ್ಯಾಪ್ತಿಯ ನೂರ್ಪುರ ಗ್ರಾಮದಲ್ಲಿ ರಸ್ತೆ ಉದ್ಘಾಟನೆಯ ವಿಡಿಯೊ ವೈರಲ್ ಆದ ನಂತರ ಫ್ಲೈಯಿಂಗ್ ಸ್ಕ್ವಾಡ್ ಮ್ಯಾಜಿಸ್ಟ್ರೇಟ್ ನೀರಜ್ ಕುಮಾರ್ ಅವರು 2019ರ ಏಪ್ರಿಲ್ 19 ರಂದು ಎರಡನೇ ಪ್ರಕರಣವನ್ನು ದಾಖಲಿಸಿದ್ದಾರೆ.
ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಬಹುಜನ ಸಮಾಜ ಪಕ್ಷದ ಮಾಜಿ ಶಾಸಕ ಅಲಿ ಯೂಸುಫ್ ಮತ್ತು ಕಾಂಗ್ರೆಸ್ ಮಾಜಿ ಶಾಸಕ ಸಂಜಯ್ ಕಪೂರ್ ಅವರಿಗೆ ಇದೇ ನ್ಯಾಯಾಲಯ ಶಿಕ್ಷೆ ವಿಧಿಸಿರುವುದು ಉಲ್ಲೇಖಾರ್ಹ.