ಕೋಟಿ ಕೋಟಿ ಸಂಪತ್ತನ್ನೆಲ್ಲ ದಾನ ಮಾಡಿ ಸನ್ಯಾಸ ದೀಕ್ಷೆ ಪಡೆದ ಇಡೀ ಕುಟುಂಬ – ಏನೆಲ್ಲ ದಾನ ಮಾಡುತ್ತಿದ್ದಾರೆ ಗೊತ್ತಾ?
- ರಾಷ್ಟ್ರೀಯ ಸುದ್ದಿ
- February 14, 2023
- No Comment
- 188
ನ್ಯೂಸ್ ಆ್ಯರೋ : ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಎಂಬ ಮಾತಿದೆ. ಪ್ರತಿಯೊಬ್ಬ ಮನುಷ್ಯನೂ ಹಣ, ಐಶಾರಾಮಿ ಜೀವನ, ಸಾಮಾಜಿಕ ಪ್ರತಿಷ್ಟೆಗಾಗಿಯೇ ಕೆಲಸ, ವ್ಯವಹಾರ ಇತ್ಯಾದಿಗಳಲ್ಲಿ ತೊಡಗುತ್ತಾನೆ. ಎಷ್ಟೇ ಹಣ ಮಾಡಿದರೂ ಸಾಕು ಎಂದೆನಿಸುವುದೇ ಇಲ್ಲ. ಅಂತಹದ್ದರಲ್ಲಿ ಇಲ್ಲೊಂದು ಕುಟುಂಬ ಮೂರು ತಲೆಮಾರಿಗೆ ಸಾಕಾಗುವಷ್ಟು ಹಣ, ಸಂಪತ್ತು ಗಳಿಸಿ, ಅವೆಲ್ಲವನ್ನು ಇದೀಗ ದಾನಮಾಡಿ ಸನ್ಯಾಸ ದೀಕ್ಷೆ ಪಡೆಯುತ್ತಿದೆ.
ಇಂತಹದ್ದೊಂದು ಅಪರೂಪದ ಘಟನೆ ನಡೆದಿರುವುದು ಗುಜರಾತಿನಲ್ಲಿ. ಗುಜರಾತಿನ ಭುಜ್ ಗೆ ಸೇರಿದ ಜೈನ ಕುಟುಂಬವೊಂದು ಸಾಕಷ್ಟು ಸಂಪತ್ತು ಹೊಂದಿತ್ತು. ಓಡಾಡಲು ಐಶಾರಾಮಿ ಕಾರುಗಳು, ಹತ್ತಾರು ಮನೆಗಳು, ಒಳ್ಳೆಯ ವ್ಯವಹಾರ, ಸಾಮಾಜಿಕ ಗೌರವ ಹೀಗೆ ಒಬ್ಬ ಮನುಷ್ಯ ಬಯಸುವುದೆಲ್ಲವೂ ಇವರಿಗಿತ್ತು. ಆದರೆ ಇದ್ಯಾವುದೂ ಈ ಕುಟುಂಬಕ್ಕೆ ತೃಪ್ತಿ ನೀಡಲಿಲ್ಲ. ಆದ್ದರಿಂದಲೇ ಸರ್ವಸ್ವವನ್ನೂ ತ್ಯಾಗ ಮಾಡಿ ಸನ್ಯಾಸ ದೀಕ್ಷೆ ಸ್ವೀಕರಿಸುತ್ತಿದ್ದಾರೆ.
ಭುಜ್ ನ ವಗಡ ಪ್ರದೇಶದಲ್ಲಿ ರೆಡಿಮೆಡ್ ಸಗಟು ಬಟ್ಟೆಗಳ ವ್ಯವಹಾರದಿಂದ ವಾರ್ಷಿಕವಾಗಿ ಕೋಟಿಗಟ್ಟಲೆ ಆದಾಯ ಪಡೆಯುತ್ತಿದ್ದ, ಪಿಯೂಷ್ ಕಾಂತಿಲಾಲ್ ಮೆಹ್ತಾ ಹಾಗೂ ಪೂರ್ವಿಬೆನ್ ದಂಪತಿ ಹಾಗೂ ಅವರ ಮಕ್ಕಳು ದೀಕ್ಷೆ ಪಡೆಯಲಿದ್ದಾರೆ. ಕೋಟಿಗಟ್ಟೆಲೆ ಹಣವಿದ್ದರೂ ಅದೆಲ್ಲವನ್ನು ತೊರೆದು ಇಡೀ ಕುಟುಂಬ ಈ ಯೋಚನೆ ಮಾಡಿದೆ. ಮೊದಲು ಪಿಯೂಷ್ ಅವರ ಪತ್ನಿ ಪೂರ್ವಿಬೆನ್ ಅವರು ಸನ್ಯಾಸಿ ಮಹಾಸತಿ ಜೀ ಅವರ ಸಮ್ಮುಖದಲ್ಲಿ ಈ ನಿರ್ಧಾರಕ್ಕೆ ಬಂದರು, ಅನಂತರ ಕುಟುಂಬವನ್ನು ಸನ್ಯಾಸ ದೀಕ್ಷೆ ಪಡೆಯಲು ಒಪ್ಪಿಸಿದ್ದಾರೆ.
ಸನ್ಯಾಸತ್ವ ಪಡೆಯಲು ಬಯಸುವ ವ್ಯಕ್ತಿಗಳು ತಮ್ಮ ಎಲ್ಲಾ ಆಸ್ತಿಯನ್ನು ತ್ಯಜಿಸಬೇಕು. ಎಲ್ಲವನ್ನೂ ದಾನ ಮಾಡಬೇಕು. ಇವರೆಲ್ಲರೂ ಔಪಚಾರಿಕವಾಗಿ ಶ್ರೀ ಕೋಟಿ ಸ್ಥಾನವಾಸಿ ಜೈನ ಸಂಘದ ಆಶ್ರಯದಲ್ಲಿ ಭಗವತಿ ದೀಕ್ಷೆ ಪಡೆಯಲಿದ್ದಾರೆ ಎನ್ನಲಾಗಿದೆ. ದೀಕ್ಷೆ ಪಡೆಯಲು ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಅಜರಾಮರ ಸಮುದಾಯಕ್ಕೆ ಸೇರಿದ ಒಂದೇ ಕುಟುಂಬದ ನಾಲ್ವರು ಸನ್ಯಾಸ ದೀಕ್ಷೆ ಪಡೆಯುತ್ತಿರುವುದು ಜೈನ ಸಮುದಾಯಕ್ಕೆ ಸಂತಸ ತಂದಿದೆ.