ಫೆಬ್ರವರಿ 14, ಪುಲ್ವಾಮ ದಾಳಿಗೆ 4 ವರ್ಷ – ಘಟನೆಯ ದಿನ ನಡೆದದ್ದೇನು? 40 ವೀರಯೋಧರ ಬಲಿದಾನವನ್ನು ಸ್ಮರಿಸಿದ ಪ್ರಧಾನಿ ನರೇಂದ್ರ ಮೋದಿ
- ರಾಷ್ಟ್ರೀಯ ಸುದ್ದಿ
- February 14, 2023
- No Comment
- 128
ನ್ಯೂಸ್ ಆ್ಯರೋ: ‘ಫೆಬ್ರವರಿ 14’ ಭಾರತೀಯರು ಎಂದೂ ಮರೆಯಲಾಗದ ದಿನ. ದೇಶ ಇತಿಹಾಸದಲ್ಲಿ ಅದೊಂದು ಕರಾಳ ದಿನವೂ ಹೌದು. ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಭಾರತೀಯ ಸೇನೆಯ ಭದ್ರತಾ ಪಡೆಗಳ ಮೇಲೆ ನಡೆದ ಅತ್ಯಂತ ಭೀಕರ ದಾಳಿಯಲ್ಲಿ 40 ಮಂದಿ ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದರು.
ನಾಲ್ಕು ವರ್ಷಗಳ ಹಿಂದೆ ಈ ದಿನದಂದು 40 ಸಿಆರ್ಪಿಎಫ್ ಅಧಿಕಾರಿಗಳ ಸಾವು ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ವರದಿಯಾದಾಗ ಇಡೀ ಭಾರತವೇ ಶೋಕಸಾಗರದಲ್ಲಿ ಮುಳುಗಿತ್ತು. ರಕ್ತನಾಳಗಳಲ್ಲಿ ಬಿಸಿ ರಕ್ತ ಜಿನುಗುತ್ತಿದ್ದರೂ, 40 ವೀರ ಯೋಧರ ಛಿದ್ರ ಛಿದ್ರ ದೇಹಗಳನ್ನು ಕಂಡಾಗ ಪ್ರತಿಯೊಬ್ಬ ಭಾರತೀಯನ ಕಣ್ಣೀರು ಧರೆ ಮುಟ್ಟಿತ್ತು.
ಆತ್ಮಹತ್ಯಾ ಬಾಂಬರ್ ಸ್ಫೋಟಕಗಳನ್ನು ತುಂಬಿದ ವಾಹನ ಬೆಂಗಾವಲು ಪಡೆಗೆ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿತ್ತು. ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ ಸಂಘಟನೆ ಈ ದಾಳಿಯ ಹೊಣೆಗಾರಿಕೆಯನ್ನು ಹೊತ್ತುಕೊಂಡು ವಿಡಿಯೊವನ್ನು ಬಿಡುಗಡೆ ಮಾಡಿತ್ತು.
ಆದಿಲ್ ಅಹ್ಮದ್ ದಾರ್ ಎಂದು ಗುರುತಿಸಲಾದ 22 ವರ್ಷದ ಆತ್ಮಾಹುತಿ ಬಾಂಬರ್ ಪುಲ್ವಾಮ ಜಿಲ್ಲೆಯ ಲೆಥ್ಪೋರಾದಲ್ಲಿ ಬೆಂಗಾವಲು ವಾಹನಕ್ಕೆ ಸ್ಫೋಟಕ ತುಂಬಿದ ತನ್ನ ವಾಹನಗಳನ್ನು ಡಿಕ್ಕಿ ಹೊಡೆದಿದ್ದ. ಈತ ಕಾಶ್ಮೀರದ ನಿವಾಸಿಯಾಗಿದ್ದು, ಕುಟುಂಬದ ಪ್ರಕಾರ 2018 ರಲ್ಲಿ ನಾಪತ್ತೆಯಾಗಿದ್ದನಂತೆ.
2019ರ ಫೆಬ್ರವರಿ 15ರಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ದಾಳಿಗೆ ಪಾಕಿಸ್ತಾನವನ್ನು ಆರೋಪಿಸಿತು. ಆದರೆ, ಪಾಕಿಸ್ತಾನವು ದಾಳಿಯನ್ನು ಖಂಡಿಸುವ ಎಲ್ಲಾ ಆರೋಪಗಳನ್ನು ನಿರಾಕರಿಸಿತು. ಸರಣಿ ಸಭೆಗಳ ನಂತರ ಭಾರತ ಸರ್ಕಾರವು ಪಾಕಿಸ್ತಾನಕ್ಕೆ ಮೋಸ್ಟ್ ಫೇವರ್ಡ್ ನೇಷನ್ ಸ್ಥಾನಮಾನವನ್ನು ಹಿಂಪಡೆಯಲು ನಿರ್ಧರಿಸಿತು. ನಂತರದ ದಿನಗಳಲ್ಲಿ ಭಾರತವು ಪಾಕಿಸ್ತಾನದಿಂದ ಆಮದು ಮಾಡಿಕೊಳ್ಳುವ ಎಲ್ಲಾ ಸರಕುಗಳ ಮೇಲಿನ ಕಸ್ಟಮ್ ಸುಂಕವನ್ನು ಶೇಕಡಾ 200ಕ್ಕೆ ಏರಿಸಿತು.
ಉದ್ವಿಗ್ನತೆಯ ಪ್ರಮುಖ ಉಲ್ಬಣದ ನಡುವೆ ಫೆಬ್ರವರಿ 26, 2019ರಂದು ಭಾರತೀಯ ವಾಯುಪಡೆಯು ಪಾಕಿಸ್ತಾನದ ಬಾಲಾಕೋಟ್ ಪ್ರದೇಶದಲ್ಲಿನ ಭಯೋತ್ಪಾದಕ ಶಿಬಿರದ ಮೇಲೆ ದಾಳಿ ನಡೆಸಿತು. ರಕ್ಷಣಾ ಪಡೆಗಳ ಪ್ರಕಾರ ದಾಳಿಯಲ್ಲಿ ಹಲವಾರು ಭಯೋತ್ಪಾದಕರು ಹತರಾಗಿದ್ದರು.
ಆದರೆ, ಮರುದಿನ ಪಾಕಿಸ್ತಾನವು ಭಾರತದ ಗಡಿಭಾಗದಲ್ಲಿ ವೈಮಾನಿಕ ಸಂಘರ್ಷಕ್ಕೆ ಇಳಿಯಿತು. ಈ ವೇಳೆ ಭಾರತದ ಮಿಗ್-21 ಚಾಲಕ ಅಭಿನಂದನ್ ವರ್ದಮಾನ್ ಅಮೆರಿಕ ಮೂಲದ ಎಫ್-16 ಯುದ್ಧವಿಮಾನ ಹೊಡೆದುರುಳಿಸಿದರು. ಈ ವೇಳೆ ಅವರು ತಪ್ಪಿ ಪಾಕಿಸ್ತಾನದ ಭಾಗಕ್ಕೆ ಇಳಿದಿದ್ದರು. ಆಗ ಪಾಕಿಸ್ತಾನೀಯರು ಅಭಿನಂದನ್ರನ್ನು ವಶಕ್ಕೆ ತೆಗೆದುಕೊಂಡು, ಕೆಲ ದಿನಗಳ ಬಳಿಕ ಬಿಡುಗಡೆ ಮಾಡಿದರು. ಅಭಿನಂದನ್ ಅವರಿಗೆ ಮಾರ್ಚ್ ತಿಂಗಳಲ್ಲಿ ವೀರ್ ಚಕ್ರ ನೀಡಿ ಗೌರವಿಸಲಾಯಿತು.
ಪ್ರಧಾನಿ ಸ್ಮರಣೆ:
ಪುಲ್ವಾಮದಲ್ಲಿ ಸಂಭವಿಸಿದ ಉಗ್ರ ಆತ್ಮಹತ್ಯಾ ಬಾಂಬ್ ದಾಳಿ ಘಟನೆಯಲ್ಲಿ 40 ಸಿಆರ್ಪಿಎಫ್ ಯೋಧರು ಬಲಿಯಾಗಿದ್ದರು. ಆ ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿ, ದೇಶ ಕಟ್ಟುವ ಸಂದೇಶ ನೀಡಿದ್ದಾರೆ.
ಪುಲ್ವಾಮದಲ್ಲಿ ಈ ದಿನ ನಾವು ಕಳೆದುಕೊಂಡ ವೀರರನ್ನು ಸ್ಮರಿಸುತ್ತಿದ್ದೇನೆ. ಅವರ ಮಹಾ ಬಲಿದಾನವನ್ನು ನಾವ್ಯಾರೂ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ಎದೆಗಾರಿಕೆಯು ಪ್ರಬಲ ಭಾರತದ ನಿರ್ಮಾಣಕ್ಕೆ ಪ್ರೇರಣೆ ನೀಡುತ್ತದೆ. ಅಭಿವೃದ್ಧಿಯತ್ತ ದೇಶ ಸಾಗಲು ವೀರಯೋಧರ ಬಲಿದಾನ ಪ್ರೇರಣೆಯಾಗಲಿ ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.