ಶಬರಿಮಲೆಗೆ ಭಕ್ತರ ದಂಡು ಹೆಚ್ಚುತ್ತಿರುವ ಹಿನ್ನೆಲೆ – ದಿನಕ್ಕೆ 90 ಸಾವಿರ ಭಕ್ತರಿಗೆ ಅಷ್ಟೇ ದೇವರ ದರ್ಶನಕ್ಕೆ ಅವಕಾಶ : ಕೇರಳ ಸರ್ಕಾರ
- ರಾಷ್ಟ್ರೀಯ ಸುದ್ದಿ
- December 14, 2022
- No Comment
- 214
ನ್ಯೂಸ್ ಆ್ಯರೋ : ಹಿಂದೂಗಳ ಖ್ಯಾತ ಪವಿತ್ರ ಯಾತ್ರಾತಾಣ ಹಾಗೂ ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರ ಶಬರಿಮಲೆ ಸದ್ಯ ಭಕ್ತರಿಂದ ತುಂಬಿ ತುಳುಕುತ್ತಿದ್ದು, ಅಯ್ಯಪ್ಪ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಈಗಾಗಲೇ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ತಂಡೋಪತಂಡವಾಗಿ ಭಕ್ತರು ಶಬರಿಮಲೆಗೆ ತೆರಳಿ ದೇವರ ದರ್ಶನ ಪಡೆಯುತ್ತಿದ್ದು, ದಿನದಿಂದ ದಿನಕ್ಕೆ ಭಕ್ತರ ದಂಡು ಕೂಡ ಹರಿದು ಬರುತ್ತಿದೆ.
ಈ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ದಿನಕ್ಕೆ 90 ಸಾವಿರ ಭಕ್ತರಿಗಷ್ಟೇ ದರ್ಶನ ಅವಕಾಶ ಎಂದು ಹೊಸ ಆದೇಶ ಹೊರಡಿಸಿದ್ದು, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಏರಿಕೆಯಾಗುತ್ತಿರುವ ಕಾರಣ ದಿನಕ್ಕೆ 90 ಸಾವಿರ ಮಂದಿ ಭಕ್ತರಿಗಷ್ಟೇ ದೇವರ ದರ್ಶನಕ್ಕೆ ಅವಕಾಶ ನೀಡಲು ಕೇರಳ ಸರ್ಕಾರ ಮತ್ತು ದೇಗುಲದ ಆಡಳಿತ ಮಂಡಳಿ ಸೋಮವಾರ ತೀರ್ಮಾನಿಸಿದೆ. ಇದೇ ವೇಳೆ ದೇವರ ದರ್ಶನ ಸಮಯವನ್ನು ಒಂದು ಗಂಟೆ ವಿಸ್ತರಿಸಲಾಗಿದ್ದು, ಇದರೊಂದಿಗೆ, ದೇವಾಲಯದ ಬಾಗಿಲುಗಳು ಭಕ್ತರಿಗಾಗಿ ದಿನಕ್ಕೆ 19 ಗಂಟೆಗಳ ಕಾಲ ಅಂದರೆ ಬೆಳಿಗ್ಗೆ 3 ರಿಂದ ಮಧ್ಯಾಹ್ನ 1.30 ರವರೆಗೆ ಮತ್ತು ಮಧ್ಯಾಹ್ನ 3 ರಿಂದ ರಾತ್ರಿ 11.30 ರವರೆಗೆ ತೆರೆದಿರುತ್ತವೆ ಎಂದು ಟಿಡಿಬಿ ಅಧ್ಯಕ್ಷ ಕೆ ಅನಂತಗೋಪಾಲನ್ ಮಾಹಿತಿ ನೀಡಿದ್ದಾರೆ.
ಭಕ್ತರ ಸಂಖ್ಯೆ ಹೆಚ್ಚುತ್ತಿರುವ ಕಾರಣ ‘ಅಷ್ಟಾಭಿಷೇಕ’ ಮತ್ತು ‘ಪುಷ್ಪಾಭಿಷೇಕ’ ಎಂಬ ವಿಶೇಷ ನೈವೇದ್ಯಗಳನ್ನು ಸೀಮಿತಗೊಳಿಸಲಾಗಿದೆ. ಹರಿವರಾಸನ ಪಠಣದ ಸಮಯದಲ್ಲಿ ಭಕ್ತರಿಗೆ ಎಲ್ಲಾ ಸರತಿ ಸಾಲುಗಳ ಮೂಲಕ ಹೋಗಲು ಅವಕಾಶ ನೀಡಲಾಗುವುದು.
‘ಸರಮಕುತಿ’ಯಿಂದ ‘ನಡಪಂಥಲ್’ವರೆಗೆ ನೀರು ಮತ್ತು ಬಿಸ್ಕತ್ಗಳನ್ನು ವಿತರಿಸಲಾಗುವುದು. ನಿಲಕ್ಕಲ್ನಲ್ಲಿ ಪಾರ್ಕಿಂಗ್ಗೆ ಹೆಚ್ಚಿನ ಸೌಲಭ್ಯಗಳನ್ನು ಸ್ಥಾಪಿಸಲಾಗುವುದು ಮತ್ತು ತರಬೇತಿ ಪಡೆದ ಪೊಲೀಸರನ್ನು ‘ಪತಿನೆಟ್ಟಂ ಪಾಡಿ’ (18 ಪವಿತ್ರ ಮೆಟ್ಟಿಲುಗಳು) ನಲ್ಲಿ ನಿಯೋಜಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಾಗೇ ಶಬರಿಮಲೆಯಲ್ಲಿ ಮಂಡಲ ಋತು ಆರಂಭದ ಬಳಿಕ ಇದುವರೆಗೆ 125 ಕೋಟಿ ರೂ. ಆದಾಯ ಹರಿದು ಬಂದಿದ್ದು, ಕಾಣಿಕೆ ಮತ್ತು ಇತರ ಸೇವೆಗಳ ರೂಪದಲ್ಲಿ 24 ದಿನಗಳಲ್ಲಿ ಸಂಗ್ರಹವಾದ ಆದಾಯ ಪ್ರಮಾಣ ಇದಾಗಿದೆ. ಅಲ್ಲದೇ ದರ್ಶನಕ್ಕಾಗಿ ಈಗಾಗಲೇ 19,17,385 ಜನರು ಆನ್ಲೈನ್ನಲ್ಲಿ ಬುಕ್ ಮಾಡಿದ್ದು, ಕಳೆದ ಭಾನುವಾರದವರೆಗೆ ಒಟ್ಟು 14,98,824 ಜನರು ದೇವಾಲಯಕ್ಕೆ ಭೇಟಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿದ್ದಾರೆ ಎಂದು ಟಿಡಿಬಿ ಅಧ್ಯಕ್ಷ ಅನಂತಗೋಪನ್ ತಿಳಿಸಿದ್ದಾರೆ.
ಇನ್ನೂ ಸನ್ನಿಧಾನದ ದೇವಸ್ವಂ ಕಾನ್ಫರೆನ್ಸ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಸಂದಣಿ ನಿಯಂತ್ರಿಸಿ ಎಲ್ಲರಿಗೂ ಸುಗಮ ದರ್ಶನಕ್ಕೆ ಅವಕಾಶ ಒದಗಿಸಲು ದೇವಸ್ವಂ ಬೋರ್ಡ್ ಶ್ರಮಿಸಲಿದೆ. ಜನಸಂದಣಿ ನಿಯಂತ್ರಿಸುವ ಭಾಗವಾಗಿ ಮರಕ್ಕೂಟಂನಿಂದ ಹಂತಹಂತವಾಗಿ ಭಕ್ತರನ್ನು ಸನ್ನಿಧಾನಕ್ಕೆ ಬಿಡಲಾಗುತ್ತದೆ. ಅಯ್ಯಪ್ಪ ದರ್ಶನಕ್ಕೆ ಗಂಟೆಗಳ ಕಾಲ ಸರತಿ ಸಾಲು ನಿಲ್ಲಬೇಕಾಗಿದ್ದು, ಮಕ್ಕಳಿಗೆ ತೊಂದರೆಯಾಗದಂತೆ ತ್ವರಿತವಾಗಿ ದರ್ಶನ ಮಾಡುವ ಸೌಲಭ್ಯ ಒದಗಿಸುವ ವಿಷಯ ಪರಿಗಣನೆಯಲ್ಲಿದ್ದು, ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇವೆ ಎಂದು ತಿಳಿಸಿದ್ದಾರೆ.