Shabarimalai : ಮತ್ತೆ ವಿವಾದಕ್ಕೀಡಾದ ಮಹಿಳೆಯರ ದೇಗುಲ ಪ್ರವೇಶ – ಮಣಿಕಂಠನ ಸನ್ನಿಧಾನದಲ್ಲಿ ಇದೇನಿದು ಮತ್ತೆ ಹೊಸ ವಿವಾದ?
- ರಾಷ್ಟ್ರೀಯ ಸುದ್ದಿ
- November 18, 2022
- No Comment
- 315
ನ್ಯೂಸ್ ಆ್ಯರೋ : ಈಗಿನಿಂದ ಜನವರಿಯ ಮಕರ ಸಂಕ್ರಾಂತಿವರೆಗೆ ಜನಸಾಗರ ಹರಿದು ಬರುವ ದೇವಾಲಯವೆಂದರೆ ಅದು ಶಬರಿಮಲೆ ಮಾತ್ರ. ಕಳೆದೆರಡು ದಿನಗಳ ಹಿಂದಷ್ಟೇ ಶಬರಿಮಲೆ ಯಾತ್ರೆಗೆ ಚಾಲನೆ ಸಿಕ್ಕಿದ್ದು, ದೇವಸ್ಥಾನದಲ್ಲಿ ಮಂಡಲ ಪೂಜೆ ಆರಂಭವಾಗಿದೆ. ಯಾತ್ರೆಗೆ ಚಾಲನೆ ಸಿಗುತ್ತಿದ್ದಂತೆಯೇ ಪೊಲೀಸ್ ಸಿಬ್ಬಂದಿಗಳಿಗೆ ನೀಡಿದ ಕೈಪಿಡಿಯೊಂದು ವಿವಾದವನ್ನು ಹುಟ್ಟು ಹಾಕಿದೆ.
ಪ್ರತೀ ವರ್ಷವೂ ಲಕ್ಷಾಂತರ ಮಂದಿ ಭಕ್ತರು ಬರುವ ಶಬರಿಮಲೆ ದೇಗುಲದ ಭದ್ರತೆಗೆ ನಿಯೋಜಿಸಲ್ಪಟ್ಟ ಪೊಲೀಸ್ ಸಿಬ್ಬಂದಿಗೆ ನೀಡಲಾಗಿರುವ ಕೈಪಿಡಿಯಲ್ಲಿ, “2018 ರ ಸುಪ್ರೀಂ ಕೋರ್ಟ್ ತೀರ್ಪಿನ ಅನುಸಾರವಾಗಿ ಎಲ್ಲಾ ಭಕ್ತರಿಗೆ ಪ್ರವೇಶದ ಅವಕಾಶವಿದೆ” ಎಂದು ಬರೆಯಲಾಗಿದ್ದು, ಇದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಆಕ್ಷೇಪ ವ್ಯಕ್ತವಾಗುತ್ತಿದ್ದಂತೆಯೇ ರಾಜ್ಯದ ಎಲ್ ಡಿ ಎಫ್ ಸರ್ಕಾರವು ಕೈಪಿಡಿಯನ್ನು ವಾಪಾಸ್ ಪಡೆದಿದೆ.
ಕಳೆದ 2018ರಲ್ಲಿ ಸರ್ವೋಚ್ಚ ನ್ಯಾಯಾಲಯವು ಹತ್ತರಿಂದ ಐವತ್ತು ವರ್ಷ ವಯಸ್ಸಿನ ಮಹಿಳೆಯರಿಗೆ ದೇಗುಲ(Sabarimala) ಪ್ರವೇಶಕ್ಕಿದ್ದ ನಿರ್ಬಂಧವನ್ನು ತೆಗೆದು ಹಾಕಿತ್ತು ಮತ್ತು ಋತುಮತಿ ಆಗುವ ವಯಸ್ಸಿನ ಮಹಿಳೆಯರೂ ಕೂಡ ದೇವಾಲಯಕ್ಕೆ ಪ್ರವೇಶಿಸಬಹುದು ಎಂದು ಹೇಳಿಕೆ ಇಟ್ಟಿತ್ತು. ಈಗ ಅದೇ ಆದೇಶವನ್ನು ಕೈಪಿಡಿಯಲ್ಲಿ ಪರೋಕ್ಷವಾಗಿ ಉಲ್ಲೇಖಿಸಿ, ಎಲ್ಲಾ ಭಕ್ತರಿಗೂ ಪ್ರವೇಶವನ್ನು ಅನುಮತಿಸಲಾಗಿದೆ ಎಂದು ಉಲ್ಲೇಖ ಮಾಡಲಾಗಿದೆ.
ಆದರೆ ಶಬರಿಮಲೆಯ ಭಕ್ತರ ಭಾವನೆಗಳನ್ನು ಪರಿಗಣಿಸಿ ಕೋರ್ಟ್ ನ ಆದೇಶವನ್ನು ಜಾರಿಗೆ ತರಲು ಸರ್ಕಾರ ಮುಂದಾಗಿರಲಿಲ್ಲ. ಆದರೂ ಈ ನಡುವೆ ಕೈಪಿಡಿಯಲ್ಲಿ ಮತ್ತೆ ಈ ವಿಚಾರವನ್ನು ಉಲ್ಲೇಖಿಸಿರುವುದು ಬಿಜೆಪಿ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದು, “ಈ ಕೈಪಿಡಿಯಲ್ಲಿ ನೀಡಿರುವ ಮಾರ್ಗಸೂಚಿಗಳ ಹಿಂದೆ ದುರುದ್ದೇಶವಿದೆ. ಈ ಕೂಡಲೇ ಅದನ್ನು ಹಿಂಪಡೆಯಬೇಕು” ಎಂದು ಆಗ್ರಹಿಸಿತ್ತು. ಇದರ ಬೆನ್ನಲ್ಲೇ ಕೈಪಿಡಿಯನ್ನು ವಾಪಾಸ್ ಪಡೆಯಲಾಗಿದೆ.