ಭಯದಲ್ಲಿ ಬದುಕುತ್ತಿರುವೆ ಎಂದಿದ್ಯಾಕೆ ಸಲ್ಮಾನ್ ಖಾನ್? – ಗ್ಯಾಂಗ್ ಸ್ಟರ್ ಗಳು ಈ ಸ್ಟಾರ್ ಮೇಲೆ ಗನ್ ಪಾಯಿಂಟ್ ಇಟ್ಟಿದ್ದೇಕೆ?
- ಮನರಂಜನೆ
- May 5, 2023
- No Comment
- 157
ನ್ಯೂಸ್ ಆ್ಯರೋ : ”ನನ್ನನ್ನು ಬಂದೂಕುಗಳು ಕಾಯುತ್ತಿವೆ. ಸಾಕಷ್ಟು ಭಯದಲ್ಲಿ ಬದುಕುತ್ತಿರುವೆ. ಯಾಕೆ ಅವರು ನನಗೆ ಗನ್ ಪಾಯಿಂಟ್ ಇಡುತ್ತಿದ್ದಾರೆ ಎನ್ನುವುದು ಇನ್ನೂ ಅರ್ಥವಾಗುತ್ತಿಲ್ಲ. ಮುಗಿದು ಹೋದ ಪ್ರಕರಣವನ್ನು ಮತ್ತೆ ಮತ್ತೆ ಕೆದುಕುತ್ತಿದ್ದಾರೆ” ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಹೇಳಿದ್ದು ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ.
ಲಾರೆನ್ಸ್ ಬಿಷ್ಣೋಯ್ ಮತ್ತು ಗ್ಯಾಂಗ್ ಜೀವ ಬೆದರಿಕೆ ಹಾಕಿರುವ ಕುರಿತು ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಸಲ್ಮಾನ್ ಖಾನ್ ಈ ಆತಂಕವನ್ನು ಹೊರ ಹಾಕಿದ್ದಾರೆ. ಈ ಹಿನ್ನಲೆಯಲ್ಲಿ ಅವರ ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಗೆ ಮುಂಬೈ ಪೊಲೀಸರು ಬಿಗಿ ಸುರಕ್ಷತೆ ಒದಗಿಸಿದ್ದಾರೆ. ಸುಮ್ಮನೆ ಅವರ ಮನೆ ಸುತ್ತ ಓಡಾಡುವಂತಿಲ್ಲ ಹಾಗೂ ಮನೆಯ ಮುಂದೆ ನಿಲ್ಲುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ.
ಈಗಾಗಲೇ ಸಲ್ಮಾನ್ ಮನೆ ಸುತ್ತಮುತ್ತ ತಪಾಸಣೆ ಕಾರ್ಯವನ್ನೂ ಪೊಲೀಸರು ಆರಂಭಿಸಿದ್ದು, ಯಾವುದೇ ಬಹಿರಂಗ ಕಾರ್ಯಕ್ರಮದಲ್ಲಿ ಭಾಗಿಯಾಗದಂತೆ ಸೂಚಿಸಿದ್ದಾರೆ. ದಶಕಗಳ ಹಿಂದೆ ಕೃಷ್ಣಮೃಗ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಸಲ್ಮಾನ್ ಖಾನ್ ನಡುವಿನ ದ್ವೇಷ ಇನ್ನೂ ಹೊಗೆಯಾಡುತ್ತಿದೆ. ಈಗಾಗಲೇ ಸಲ್ಮಾನ್ ಖಾನ್ ಅವರನ್ನು ಕೊಲ್ಲಲು ಬಿಷ್ಣೋಯ್ ಮತ್ತು ತಂಡ ಪ್ರಯತ್ನಿಸಿ ವಿಫಲವಾಗಿದೆ. ಜೈಲಿನಲ್ಲಿರುವ ಬಿಷ್ಣೋಯ್ ಮತ್ತೆ ಸಲ್ಮಾನ್ ಗೆ ಬೆದರಿಕೆ ಹಾಕಿದ್ದಾನೆ.
‘‘ನನ್ನ ಜೀವನದ ಅಂತಿಮ ಗುರಿ ಅಂತಿದ್ದರೆ ಅದು ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದೇ ಆಗಿದೆ. ಸಲ್ಮಾನ್ ಖಾನ್ ಬಿಷ್ಣೋಯ್ ಸಮುದಾಯಕ್ಕೆ ಕ್ಷಮೆಯಾಚಿಸಿದ ನಂತರವೇ ಈ ದ್ವೇಷ ಕೊನೆಗೊಳ್ಳುತ್ತದೆ’ ಎಂದು ಇತ್ತೀಚೆಗೆ ಲಾರೆನ್ಸ್ ಬಿಷ್ಣೋಯ್ ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿದ್ದ. ಇದರಿಂದ ಬಿಟೌನ್ ನ ಬಿಗ್ ಬಾಯ್ ಭಯಭೀತರಾಗಿದ್ದು, ಎಷ್ಟೇ ದೊಡ್ಡ ಹೀರೋ ಆದರೂ ನಿಜಜೀವನದಲ್ಲಿ ಸಾಮಾನ್ಯ ಮನುಷ್ಯರು ಎಂಬುದನ್ನು ಎಲ್ಲರೂ ಅರಿಯಬೇಕಿದೆ.