ಹಿರಿಯ ನಟಿ ವಿನಯಾ ಪ್ರಸಾದ್ ಮನೆಯಲ್ಲಿ ಕಳವು ಪ್ರಕರಣ: ಇಬ್ಬರು ಆರೋಪಿಗಳ ಬಂಧನ, ₹13.53 ಲಕ್ಷ ಮೌಲ್ಯದ ಆಭರಣ ಜಪ್ತಿ
- ಮನರಂಜನೆ
- November 26, 2022
- No Comment
- 178
ನ್ಯೂಸ್ ಆ್ಯರೋ: ಸ್ಯಾಂಡಲ್ವುಡ್ನ ಹಿರಿಯನಟಿ ವಿನಯಾ ಪ್ರಸಾದ್ ಅವರ ಮನೆಯಲ್ಲಿ ಕಳವು ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಅಯ್ಯಪ್ಪ ಅಲಿಯಾಸ್ ಮುರುಗೇಶ್ (36) ಹಾಗೂ ರವಿ (26) ಬಂಧಿತ ಆರೋಪಿಗಳು. ಇವರಿಬ್ಬರು ನಂದಿನಿ ಲೇಔಟ್ ಠಾಣೆ ವ್ಯಾಪ್ತಿಯ 5 ಕಡೆಗಳಲ್ಲಿ ಕಳ್ಳತನ ಎಸಗಿರುವುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ. ಆರೋಪಿ ಗಳಿಂದ ₹13.53 ಲಕ್ಷ ಮೌಲ್ಯದ 261 ಗ್ರಾಂ ಚಿನ್ನಾಭರಣ ಹಾಗೂ 500 ಗ್ರಾಂ ಬೆಳ್ಳಿ ಸಾಮಗ್ರಿ ವಶಕ್ಕೆ ಪಡೆಯಲಾಗಿದೆ.
ಬೆಂಗಳೂರಿನ ನಂದಿನಿ ಬಡಾವಣೆಯ 4ನೇ ಹಂತದ ರೈಲ್ವೆ ಮೆನ್ಸ್ ಕಾಲೊನಿಯಲ್ಲಿ ಪತಿ ಜ್ಯೋತಿ ಪ್ರಕಾಶ್ ಜೊತೆ ವಿನಯಾ ಪ್ರಸಾದ್ ವಾಸವಿದ್ದಾರೆ. ಕುಟುಂಬದವರೆಲ್ಲ ಅ. 22ರಂದು ಉಡುಪಿಗೆ ಹೋಗಿದ್ದರು. ಅ. 26ರಂದು ಸಂಜೆ ಮನೆಗೆ ವಾಪಸ್ ಬಂದು ನೋಡಿದಾಗ, ವಸ್ತುಗಳು ಚೆಲ್ಲಾಪಿಲ್ಲಿ ಆಗಿ ಬಿದ್ದಿದ್ದವು. ಪರಿಶೀಲಿಸಿದಾಗ ₹7ಸಾವಿರ ನಗದು ಕಳ್ಳತನವಾಗಿದ್ದು ಗೊತ್ತಾಗಿತ್ತು. ಠಾಣೆಗೆ ದೂರು ನೀಡಿದ್ದರು.
ಪ್ರಕರಣದ ಜಾಡು ಹಿಡಿದು ಪೊಲೀಸರು ತನಿಖೆ ಕೈಗೊಂಡಾಗ ಇಬ್ಬರೂ ಆರೋಪಿಗಳು ಸಿಕ್ಕಿಬಿದ್ದರು. ವಿನಯಾ ಪ್ರಸಾದ್ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ್ದ ಆರೋಪಿಗಳು, ಬಾಗಿಲು ಮೀಟಿ ಒಳನುಗ್ಗಿ ಕಳ್ಳತನ ಮಾಡಿ ದ್ದರು. ಆದರೆ, ಅವರಿಗೆ ₹ 7 ಸಾವಿರ ಮಾತ್ರ ಸಿಕ್ಕಿತ್ತು.
ಬಂಧಿತ ಆರೋಪಿಗಳು, ಅಪರಾಧ ಹಿನ್ನೆಲೆಯುಳ್ಳವರು. ಆರೋಪಿ ಅಯ್ಯಪ್ಪ ವಿರುದ್ಧ 17 ಪ್ರಕರಣ ಹಾಗೂ ರವಿ ವಿರುದ್ಧ 9 ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ. ಚನ್ನರಾಯಪಟ್ಟಣದಿಂದ ಆಗಾಗ ನಗರಕ್ಕೆ ಬರುತ್ತಿದ್ದ ಆರೋಪಿಗಳು, ಬೀಗ ಹಾಕಿರುತ್ತಿದ್ದ ಮನೆಗಳನ್ನು ಗುರುತಿಸಿ ಕಳ್ಳತನ ಮಾಡಿಕೊಂಡು ಪರಾರಿಯಾಗುತ್ತಿದ್ದರು. ಕದ್ದ ವಸ್ತುಗಳನ್ನು ಮಾರಾಟ ಮಾಡಿ, ಬಂದ ಹಣವನ್ನು ಹಂಚಿಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.