ಹಿರಿಯ ನಟ ಶರತ್ ಬಾಬು ಇನ್ನು ನೆನಪು ಮಾತ್ರ – ಮೇ.5ರಂದೇ ಹಬ್ಬಿತ್ತು ಸಾವಿನ ಸುದ್ದಿ…!!
- ಮನರಂಜನೆ
- May 22, 2023
- No Comment
- 226
ನ್ಯೂಸ್ ಆ್ಯರೋ : ‘ಅಮೃತ ವರ್ಷಿಣಿ’ ಚಿತ್ರ ಖ್ಯಾತಿಯ ಹಿರಿಯ ನಟ ಶರತ್ ಬಾಬು(73) ಬಹು ಅಂಗಾಂಗ ವೈಫಲ್ಯದಿಂದ ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಇಂದು (ಸೋಮವಾರ) ಕೊನೆಯುಸಿರೆಳೆದಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಮೇ 5ರಂದು ಅವರು ನಿಧನ ಹೊಂದಿದ್ದರು ಎಂದು ಸುದ್ದಿಯಾಗಿತ್ತು.
ಕೆಲವು ದಿನಗಳಿಂದ ಅವರ ಆರೋಗ್ಯ ಹದಗೆಟ್ಟಿದ್ದರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಶರತ್ ಬಾಬು ಅವರನ್ನು ಮೊದಲು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು ನಂತರ ಹೈದರಾಬಾದ್ನ ಎಐಜಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಅವರು ಒಂದು ತಿಂಗಳಿಗೂ ಹೆಚ್ಚು ಕಾಲ ಚಿಕಿತ್ಸೆ ಪಡೆಯುತ್ತಿದ್ದರು.
1973ರಲ್ಲಿ ಚಿತ್ರರಂಗ ಪ್ರವೇಶಿಸಿದ ಶರತ್ ಬಾಬು ತೆಲುಗು, ತಮಿಳು ಚಿತ್ರರಂಗದಲ್ಲಿ ಬಹು ಜನಪ್ರಿಯ ನಟರಾಗಿದ್ದವರು. ಅವರು 50 ವರ್ಷಗಳಿಂದ 200ಕ್ಕೂ ಹೆಚ್ಚು ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ನಟಿಸಿದ್ದರು. ನಾಯಕ, ಖಳನಟ, ಪೋಷಕ ಪಾತ್ರಧಾರಿಯಾಗಿ ಛಾಪು ಮೂಡಿಸಿದ್ದರು.
‘ತುಳಸಿದಳ’, ‘ರಣಚಂಡಿ’, ‘ಶಕ್ತಿ’, ‘ಕಂಪನ’, ‘ಗಾಯ’, ‘ಉಷಾ’, ‘ಅಮೃತ ವರ್ಷಿಣಿ’, ‘ಹೃದಯ ಹೃದಯ’, ‘ಓ ಪ್ರಿಯತಮ’, ‘ನಮ್ ಯಜಮಾನ್ರು’ ಅವರು ನಟಿಸಿದ ಕೆಲವು ಕನ್ನಡ ಚಿತ್ರಗಳಾಗಿವೆ. ಕನ್ನಡದ ‘ಪ್ರೀತಿಗಾಗಿ’ ಧಾರಾವಾಹಿಯಲ್ಲಿಯೂ ಅಭಿನಯಿಸಿದ್ದರು. ರಜನಿಕಾಂತ್ ಜೊತೆ ನಟಿಸಿದ ‘ಮುಳ್ಳುಮ್ ಮಲರುಂ’, ‘ತ್ಲೆಕ್ಕರನ್’, ‘ಅಣ್ಣಾಮಲೈ’ ಮತ್ತು ‘ಮುತ್ತು’ ಚಿತ್ರಗಳು ಅಪಾರ ಜನಪ್ರಿಯತೆ ತಂದು ಕೊಟ್ಟಿದ್ದವು.
ಇತ್ತೀಚೆಗೆ ಚಿತ್ರರಂಗದಿಂದ ತುಸು ಅಂತರ ಕಾಯ್ದುಕೊಂಡಿದ್ದ ಶರತ್ ಬಾಬು, ಕೊನೆಯದಾಗಿ ಪವನ್ ಕಲ್ಯಾಣ್ ನಟನೆಯ ‘ವಕೀಲ್ ಸಾಬ್’ ಸಿನಿಮಾದಲ್ಲಿ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು.