ಚಿತ್ರೀಕರಣದ ವೇಳೆ ನಡೆಯಿತು ಅಚ್ಚರಿಯ ಪವಾಡ – ಗುಳಿಗ ದೈವಕ್ಕೆ ಕೋಲ ನೀಡಿ ಪ್ರಾರ್ಥಿಸಿದ ಚಿತ್ರತಂಡ
- ಮನರಂಜನೆ
- May 5, 2023
- No Comment
- 252
ನ್ಯೂಸ್ ಆ್ಯರೋ : ದೈವ, ದೇವರ ಕಥೆಯುಳ್ಳ ಸಿನಿಮಾ ಮಾಡುವಾಗ ಕೆಲವೊಮ್ಮೆ ಅಚ್ಚರಿ, ಪವಾಡ ಸದೃಶ ಘಟನೆಗಳು ನಡೆದಿರುವುದನ್ನು ಹಲವು ಚಿತ್ರತಂಡಗಳು ಹಂಚಿಕೊಂಡಿವೆ. ಇತ್ತೀಚೆಗೆ ‘ಕಾಂತಾರ’ ಚಿತ್ರದ ಬಳಿಕ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಚಿತ್ರತಂಡದವರು ಭೂತ ಕೋಲದಲ್ಲಿ ಭಾಗಿದ್ದರು. ಇದೀಗ ಇನ್ನೊಂದು ಚಿತ್ರ ತಂಡವು ಗುಳಿಗ ದೈವಕ್ಕೆ ಕೋಲ ಸೇವೆ ನೀಡಿದೆ.
ನಿರ್ದೇಶಕ ಸುಧೀರ್ ಅತ್ತಾವರ್ ನಿರ್ದೇಶನದಲ್ಲಿ ‘ಕರಿ ಹೈದ ಕೊರಗಜ್ಜ’ ಸಿನಿಮಾ ಮೂಡಿಬರುತ್ತಿದೆ. ಬಹುತೇಕ ಚಿತ್ರೀಕರಣ ಮುಗಿಸಿಕೊಂಡಿರುವ ನಿರ್ದೇಶಕರು, ಶೂಟಿಂಗ್ ಸಂದರ್ಭದಲ್ಲಿ ಎದುರಾದ ಒಂದಷ್ಟು ಪವಾಡ ಮತ್ತು ಅಚ್ಚರಿಗಳನ್ನು ಕಂಡು ಗುಳಿಗ ದೈವಕ್ಕೆ ಕೋಲ ಸೇವೆ ನೀಡುವ ಜೊತೆಗೆ ಕ್ಷೇತ್ರ ನಿರ್ಮಾಣವನ್ನೂ ಮಾಡಿದ್ದಾರೆ.
ಚಿತ್ರೀಕರಣದ ವೇಳೆ ಅನೇಕ ಪವಾಡಗಳು ಗೋಚರಕ್ಕೆ ಬಂದ ವಿಷಯವನ್ನು ಕಲಾವಿದರಾದ ಕಬೀರ್ ಬೇಡಿ, ಶ್ರುತಿ, ಭವ್ಯ ಹಾಗೂ ಚಿತ್ರತಂಡದ ಸದಸ್ಯರು ಹಂಚಿಕೊಂಡಿದ್ದರು. ಜೊತೆಗೆ ಚಿತ್ರೀಕರಣದ ಆರಂಭಕ್ಕೂ ಮೊದಲು ಪುತ್ತೂರಿನಲ್ಲಿ ಸೆಟ್ ನಿರ್ಮಾಣದ ವೇಳೆ ಕೆಲಸಗಾರರು ಯಾವುದೋ ಆವೇಶ ಬಂದಂತವರಾಗಿ ಅಲ್ಲಲ್ಲೇ ಮೂರ್ಛೆ ಹೋಗತೊಡಗಿದ್ದರು. ಬಳಿಕ ಸ್ಥಳಿಯರು ಅರಶಿನ ನೀರನ್ನು ಸಿಂಪಡಿಸಿ, ಅಲ್ಲಿನ ಆಸ್ಪತ್ರೆಗೂ ಸೇರಿಸಿದ್ದರು.
ಈ ಘಟನೆ ನಡೆದ ಬಳಿಕ ಸೆಟ್ ಹಾಕಬೇಕಿದ್ದ ಜಾಗವು ಉಗ್ರ ರೂಪದ ದೈವ ಗುಳಿಗನ ಸ್ಥಳವೆಂದು ಸ್ಥಳಿಯರು ತಿಳಿಸಿದ್ದರು. ದೈವದ ಮೇಲಿನ ಭಕ್ತಿಯಿಂದ ಸೆಟ್ ಕೆಲಸವನ್ನು ಬೆಳ್ತಂಗಡಿಯ ಅರಣ್ಯ ಪ್ರದೇಶಕ್ಕೆ ಸ್ಥಳಾಂತರ ಗೊಳಿಸಲಾಯಿತು. ಈಗ ಸಿನಿಮಾ ಯಾವುದೇ ಸಮಸ್ಯೆ ಇಲ್ಲದೆ ಮುಗಿದಿದ್ದರಿಂದ ಕೋಲ ಸೇವೆ ನೀಡಿದ್ದಾರೆ ನಿರ್ದೇಶಕರು. ದೈವಸ್ಥಾನದ ಕಾರ್ಯ ಮುಗಿಸಿ ಗುಳಿಗ ಹಾಗೂ ಕಲ್ಲುರ್ಟಿ ದೈವಗಳಿಗೆ ಕೋಲ ಸೇವೆಯನ್ನು ಅರ್ಪಿಸಿದ್ದಾರೆ. ಆಗಸ್ಟ್ನಲ್ಲಿ ‘ಕರಿ ಹೈದ ಕೊರಗಜ್ಜ’ ಸಿನಿಮಾ ಬಿಡುಗಡೆಯಾಗಲಿದೆ.