ಹೊಸ ಅವತಾರಲ್ಲಿ ಆರ್ಭಟಿಸಿದ ರಿಷಬ್; – ಏಳು ಭಾಷೆಗಳಲ್ಲಿ ರಿಲೀಸ್ ಆಯ್ತು ‘ಕಾಂತಾರ-ಅಧ್ಯಾಯ 1’ ಟೀಸರ್…!!
- ಮನರಂಜನೆ
- November 27, 2023
- No Comment
- 183
ನ್ಯೂಸ್ ಆ್ಯರೋ : ‘ಕಾಂತಾರ’ ಸಿನಿಮಾ ಈಗಾಗಲೇ ದೇಶದಲ್ಲಿ ಹೊಸ ಸಂಚಲನವನ್ನು ಮೂಡಿಸಿತ್ತು. ದೇಶ ವಿದೇಶದಲ್ಲೇ ಹೊಸ ಅಲೆಯನ್ನು ಸೃಷ್ಟಿಸಿದ್ದ ಈ ಸಿನಿಮಾವನ್ನು ಸಿನಿಮಾ ದಿಗ್ಗಜರು ಕೂಡಾ ಆಡಿ ಕೊಂಡಾಡಿದ್ದರು. ತುಳುನಾಡಿನ ದೈವ ಹಾಗೂ ಆಚರಣೆ ಸುತ್ತ ಸಾಗಿದ ʼಕಾಂತಾರʼ ಕನ್ನಡದಲ್ಲಿ ಹಿಟ್ ಆಗಿ, ಪ್ರಾದೇಶಿಕ ಭಾಷೆಯಲ್ಲಿ ರಿಮೇಕ್ ಆಗಿ 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆಯಿತು.
ಸಿನಿಮಾದ ಚಾಪ್ಟರ್ -1(ಪ್ರೀಕ್ವೆಲ್) ರಿಲೀಸ್ ಬರಲಿದೆ ಎಂದು ರಿಷಬ್ ಶೆಟ್ಟಿ ʼಕಾಂತಾರʼ 100 ಡೇಸ್ ಸಂಭ್ರಮದಲ್ಲಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಿದೆ. ಲೋಕೇಷನ್ ಹುಡುಕಾಟ, ಸ್ಕ್ರಿಪ್ಟ್ ಕೆಲಸ ಮುಗಿಸಿದ ಬಳಿಕ ಸಿನಿಮಾ ತಂಡ ಮುಹೂರ್ತವನ್ನು ನೆರವೇರಿಸಿದೆ.
ಮುಹೂರ್ತದ ಜೊತೆಗೆ ಫಸ್ಟ್ ಲುಕ್ ರಿಲೀಸ್ ಮಾಡಿ, ಸಿನಿಮಾದ ಬಗ್ಗೆ ಹೈಪ್ ಹೆಚ್ಚಿಸಿದೆ. ರಿಷಬ್ ಶೆಟ್ಟಿ ಕೈಯಲ್ಲಿ ತ್ರಿಶೂಲ ಇಟ್ಟುಕೊಂಡು, ಉದ್ದ ಗಡ್ಡವನ್ನು ಬಿಟ್ಟಿದ್ದಾರೆ. ಇನ್ನೊಂದು ಕೈಯಲ್ಲಿ ಕೊಡಲಿ ರೀತಿಯ ಆಯುಧವನ್ನು ಇಟ್ಟುಕೊಂಡು ರೌದ್ರ ಅವತಾರವನ್ನು ತಾಳಿದ್ದಾರೆ. ಯುದ್ದದಲ್ಲಿ ಹೋರಾಡುವ ರೀತಿ ತೋರಿಸಲಾಗಿದೆ. 7 ಭಾಷೆಯಲ್ಲೂ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಅಜನೀಶ್ ಅವರ ಮ್ಯೂಸಿಕ್ ಟೀಸರ್ ನಲ್ಲಿ ವೀಕ್ಷಕರನ್ನು ರೋಮಾಂಚನಗೊಳಿಸಿದೆ.
ಕೆಲ ಮೂಲಗಳ ಪ್ರಕಾರ ʼಕಾಂತಾರʼ ಪ್ರೀಕ್ವೆಲ್ ನಲ್ಲಿ ಪಂಜುರ್ಲಿ ದೈವದ ಮೂಲ ಹಾಗೂ ಹುಟ್ಟಿನ ಕಥೆ ಇರಲಿದೆ ಎನ್ನಲಾಗಿದೆ. ಕ್ರಿ.ಶ. 301-400 ಕಾಲದ ಕಥೆ ಇರಲಿದೆ ಎನ್ನಲಾಗಿದೆ.
ಅಂದಹಾಗೆ ಹೊಂಬಾಳೆ ನಿರ್ಮಾಣದ ʼಕಾಂತಾರʼ ಪ್ರೀಕ್ವೆಲ್ ಈ ಬಾರಿ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ, ಹಿಂದಿ, ಬೆಂಗಾಲಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಮುಂದಿನ ವರ್ಷದ ಬೇಸಿಗೆಯಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆಯಿದೆ.
ಸಿನಿಮಾದ ಬಗ್ಗೆ ರಿಷಬ್ ಶೆಟ್ಟಿ ಹೇಳಿದ್ದೇನು..?
ಇನ್ನು ಮುಹೂರ್ತಕ್ಕೆ ಬರುವ ವೇಳೆ ಮಾಧ್ಯಮದ ಜೊತೆ ಮಾತನಾಡಿದ ನಟ ನಿರ್ದೇಶಕ ರಿಷಬ್ ಶೆಟ್ಟಿ, “ಕಾಂತಾರ ಚಾಪ್ಟರ್ -1” ಶುರು ಮಾಡಿದ್ದೇವೆ. ಅಧ್ಯಾಯ ಎರಡನ್ನು ನೋಡಿ ನೀವು ದೊಡ್ಡ ಹಿಟ್ ಮಾಡಿದ್ದೀರಿ. ಇದರ ಸಂಪೂರ್ಣ ಸಕ್ಸಸ್ ನ್ನು ಕನ್ನಡಿಗರಿಗೆ ಅರ್ಪಿಸಲು ಇಷ್ಟಪಡ್ತೇನೆ. ಇದರ ಮುಂದುವರೆದ ಪಯಣದಲ್ಲಿ ಮುನ್ನುಡಿ ಅಂದರೆ ಹಿಂದೆ ಏನು ನಡೆಯಿತು ಎನ್ನುವುದನ್ನು ಹೇಳಲು ಹೊರಟಿದ್ದೇನೆ.
ಹಿಂದಿನಂತೆ ಈ ಸಿನಿಮಾಕ್ಕೂ ನಿಮ್ಮೆಲ್ಲರ ಹಾರೈಕೆ ಇರಲಿ. ಯಶಸ್ಸನ್ನು ಜವಬ್ದಾರಿಯಾಗಿ ತೆಗೆದುಕೊಂಡು ಅದ್ಭುತವಾಗಿ ಕೆಲಸ ಮಾಡಿಕೊಂಡು ಹೋಗುವತ್ತ ಇಡೀ ತಂಡ ಪ್ರಯತ್ನ ಮಾಡುತ್ತಿದೆ ಎಂದರು. ಆನೆಗುಡ್ಡೆ ನಮ್ಮ ಪ್ರೊಡಕ್ಷನ್ ಹೌಸ್ ಗೆ ವಿಜಯ್ ಕಿರಗಂದೂರು ನಂಬಿದಂಥ ದೇವರು. ನಮಗಂತೂ ಆನೆಗುಡ್ಡೆ ಖಂಡಿತವಾಗಿ ಲಕ್ಕಿ ದೇವರು ಕೂಡ ಹೌದು. ಆದರೆ ಅವರು ಬೆಂಗಳೂರಿನಿಂದ ಆಗಾಗ ಇಲ್ಲಿಗೆ ಬರ್ತಾ ಇರುತ್ತಾರೆ. ಹಾಗಾಗಿ ʼಕಾಂತಾರʼ ಸಿನಿಮಾದ ಮುಹೂರ್ತ ಲಾಸ್ಟ್ ಟೈಮ್ ಕೂಡ ಇಲ್ಲೇ ಮಾಡಿದ್ದು. ಈಗ ಅದೇ ದಾರಿಯಲ್ಲಿ ಹೋಗ್ತಾ ಇದ್ದೇವೆ. ಶೀಘ್ರದಲ್ಲಿ ಶೂಟ್ ಆರಂಭಿಸುತ್ತೇವೆ . ಬಹುಶಃ ಡಿಸೆಂಬರ್ ನಲ್ಲಿ ಶುರು ಮಾಡುತ್ತೇವೆ ಎಂದರು.
ಮಾತು ಮುಂದುವರೆಸಿದ ರಿಷಬ್, ಮೊದಲ ಅಧ್ಯಾಯದ ಬಗ್ಗೆ ಏನನ್ನು ಈಗ ಹೇಳಲ್ಲ. ಮಾತಿಗಿಂತ ಕೆಲಸ ಮುಖ್ಯ. ಸಣ್ಣ ಗ್ಲಿಂಪ್ಸ್ ಹಾಗೂ ಪೋಸ್ಟರ್ ಬಿಟ್ಟಿದ್ದೇವೆ. ಮುಂದೆ ಹೋಗ್ತಾ ಇರುವ ಹಾಗೆ ಸಿನಿಮಾನೇ ಮಾತನಾಡಿದರೆ ಚೆಂದ. ಇಡೀ ಸಿನಿಮಾ ಇಲ್ಲೇ ಸಾಗುವುದರಿಂದ ಸಿನಿಮಾದ ಶೂಟಿಂಗ್ ಬಹುಶಃ ಕರಾವಳಿಯಲ್ಲೇ ಶೂಟ್ ಆಗಲಿದೆ. ಸದ್ಯಕ್ಕೆ ನಾನೇ ಹೀರೋ, ನಾಯಕಿ ಹಾಗೂ ಇತರ ಪಾತ್ರದ ಹುಡುಕಾಟ ಇನ್ನಷ್ಟೇ ನಡೆಯಬೇಕಿದೆ. ಕನ್ನಡದ ಕಲಾವಿದರಿಗೆ ಮೊದಲ ಆದ್ಯತೆ ಇರಲಿದೆ. ಸಿನಿಮಾದಲ್ಲಿ ನಟಿಸಲು ಹೊಸ ಕಲಾವಿದರ ಹುಡುಕಾಟ ನಡೆಯುತ್ತಿದೆ ಎಂದರು. ಕರಾವಳಿ ಹಾಗೂ ಇತರೆ ಭಾಗದ ಕಲಾವಿದರು ಕೂಡ ಇರಲಿದ್ದಾರೆ ಎಂದರು.
ಅಜನೀಶ್ ಮ್ಯೂಸಿಕ್ ಇರಲಿದೆ. ಅರವಿಂದ್ ಕಶ್ಯಪ್ ಛಾಯಗ್ರಹಣ ಇರಲಿದೆ. ಟೆಕ್ನಿಕಲ್ ಟೀಮ್ ಬದಲಾಗಿಲ್ಲ ಸ್ಕ್ರಿಪ್ಟ್ ಕೆಲಸ ಮುಗಿದಿದೆ. ಪ್ರೀ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ ಎಂದರು.
ಆದರೆ ಕಾಂತಾರ ಪ್ರೀಕ್ವೆಲ್ ನ ಮೊದಲ ಲುಕ್ ನೋಡಿದ ಜನ ಫಿದಾ ಆಗಿದ್ದಾರೆ. ಕೆಲವರು ‘ರಿಯಲಿ ಗೂಸ್ ಬಂಪ್ಸ್’ ಅಂತ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರೆದು ಹಂಚಿಕೊಂಡಿದ್ದಾರೆ.