‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ತೆರಿಗೆ ವಿನಾಯತಿ ಘೋಷಣೆ – ಯಾವ ರಾಜ್ಯದಲ್ಲಿ ಈ ಸೌಲಭ್ಯ?
- ಮನರಂಜನೆ
- May 7, 2023
- No Comment
- 118
ನ್ಯೂಸ್ ಆ್ಯರೋ : ಹಲವರ ಕೆಂಗಣ್ಣಿಗೆ ಗುರಿಯಾಗಿ ನಿಷೇಧದ ಭೀತಿ ಎದುರಿಸಿದ್ದ ‘ದಿ ಕೇರಳ ಸ್ಟೋರಿ’ ಚಿತ್ರ ಕೊನೆಗೂ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿದೆ. ಕೇರಳದಿಂದ ಮತಾಂತರ ಹೊಂದಿ ಐಸಿಸ್ ಸೇರಿದ್ದ ಮಹಿಳೆಯರ ನೈಜ ಕಥೆ ಹೇಳ ಹೊರಟಿರುವ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.
ಇತ್ತೀಚೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಿತ್ರದ ಬಗ್ಗೆ ಪ್ರಚಾರದ ವೇಳೆ ಪ್ರಸ್ತಾಪಿಸಿದ್ದು ಗಮನ ಸೆಳೆದಿದೆ. ಇದೀಗ ಈ ಸಿನಿಮಾವನ್ನು ಎಲ್ಲರಿಗೂ ತಲುಪಿಸಬೇಕು ಎನ್ನುವ ಕಾರಣಕ್ಕಾಗಿ ಮಧ್ಯಪ್ರದೇಶ ಸರ್ಕಾರವು ತೆರಿಗೆ ವಿನಾಯತಿ ಘೋಷಣೆ ಮಾಡಿದೆ. ಸುದೀಪ್ತೊ ಸೇನ್ ನಿರ್ದೇಶನದ ‘ದಿ ಕೇರಳ ಸ್ಟೋರಿ’ ಸಿನಿಮಾ ಹಿಂದಿ ಜೊತೆಗೆ ಮಲೆಯಾಳಂ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಮೂಡಿ ಬಂದಿದೆ.
ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಬೇಕೆಂದು ಮಧ್ಯ ಪ್ರದೇಶದ ಕೆಲವು ಹಿಂದುಪರ ಸಂಘಟನೆಗಳು, ಬಿಜೆಪಿಯು ತಮ್ಮದೇ ಪಕ್ಷದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ಅ ವರನ್ನು ಒತ್ತಾಯಿಸಿದ್ದವು. ಇದೀಗ ಶಿವರಾಜ್ ಸಿಂಗ್ ಚೌಹಾಣ್ ಈ ಬಗ್ಗೆ ವೀಡಿಯೋ ಒಂದನ್ನು ಪ್ರಕಟಿಸಿದ್ದು, ‘ದಿ ಕೇರಳ ಸ್ಟೋರಿ’ ಸಿನಿಮಾವನ್ನು ಹೊಗಳಿರುವುದಲ್ಲದೆ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ.
”ಮಧ್ಯ ಪ್ರದೇಶದಲ್ಲಿ ಈಗಾಗಲೇ ನಮ್ಮ ಸರ್ಕಾರವು ಮತಾಂತರದ ವಿರುದ್ಧ ಕಾನೂನು ಮಾಡಿದೆ. ಈ ಸಿನಿಮಾ ಜನರಲ್ಲಿ ಜಾಗೃತಿ ಮೂಡಿಸುತ್ತದೆ ಹಾಗಾಗಿ ಈ ಸಿನಿಮಾವನ್ನು ಎಲ್ಲರೂ ನೋಡಬೇಕಿದೆ. ಪಾಲಕರು, ಮಕ್ಕಳೂ ಸಹ ಈ ಸಿನಿಮಾ ನೋಡಬೇಕು. ಹಾಗಾಗಿ ಈ ಸಿನಿಮಾಕ್ಕೆ ರಾಜ್ಯದಲ್ಲಿ ತೆರಿಗೆ ವಿನಾಯಿತಿ ನೀಡಲಾಗುತ್ತಿದೆ” ಎಂದಿದ್ದಾರೆ.
‘ದಿ ಕೇರಳ ಸ್ಟೋರಿ’ ಸಿನಿಮಾವು ಲವ್ ಜಿಹಾದ್, ಮತಾಂತರ, ಭಯೋತ್ಪಾದಕತೆಯ ಷಡ್ಯಂತ್ರವನ್ನು ಬಯಲಿಗೆಳೆಯುತ್ತದೆ. ಇವುಗಳ ಕೆಟ್ಟ ಮುಖವನ್ನು ಬಹಿರಂಗಗೊಳಿಸುವ ಸಿನಿಮಾ ಇದಾಗಿದೆ. ಕ್ಷಣಿಕ ಭಾವುಕತೆಯಲ್ಲಿ, ಹೆಣ್ಣು ಮಕ್ಕಳು ಲವ್ ಜಿಹಾದ್ ಜಾಲದಲ್ಲಿ ಸಿಲುಕಿದರೆ ಅವರ ಜೀವನ ಹೇಗೆ ಹಾಳಾಗಿ ಹೋಗುತ್ತದೆ ಎಂಬುದನ್ನು ಈ ಸಿನಿಮಾ ತೋರಿಸುತ್ತದೆ. ಭಯೋತ್ಪಾದನೆಯ ವಿನ್ಯಾಸಗಳು ವಿವಿಧ ಮುಖಗಳು ಹೇಗಿರುತ್ತವೆ ಎಂಬುದನ್ನೂ ಈ ಸಿನಿಮಾ ತೋರಿಸಿಕೊಡುತ್ತದೆ” ಎಂದು ಅವರು ಪ್ರಶಂಸಿಸಿದ್ದಾರೆ.