ಕಾಂತಾರ–2 ಸಿನಿಮಾಕ್ಕೆ ಖಾವಂದರ ಅನುಮತಿಗೆ ಸೂಚಿಸಿದ ಅಣ್ಣಪ್ಪ ಪಂಜುರ್ಲಿ– ನೂರು ಬಾರಿ ಯೋಚನೆ ಮಾಡಿ ಹೆಜ್ಜೆಯಿಡಲು ಅಭಯ
- ಮನರಂಜನೆ
- December 13, 2022
- No Comment
- 152
ನ್ಯೂಸ್ ಆ್ಯರೋ: ರಿಷಭ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾ ಸ್ಯಾಂಡಲ್ವುಡ್ನಲ್ಲಿ ಹಲವು ದಾಖಲೆಗಳನ್ನು ಸೃಷ್ಟಿಸಿದೆ. ಕನ್ನಡ ಮಾತ್ರವಲ್ಲದೆ ಹಲವು ಭಾಷೆಗಳಲ್ಲಿ ಜನಮೆಚ್ಚುಗೆ ಗಳಿಸಿದೆ. ಕಾಂತಾರ ಸಿನಿಮಾ ನೋಡಿದ ಬಹುತೇಕ ನಟ– ನಟಿಯರು ಚಿತ್ರವನ್ನು ಹಾಡಿಹೊಗಲಿದ್ದರು. ಕೇವಲ 15 ಕೋಟಿ ಬಜೆಟ್ನ ಈ ಚಿತ್ರ ಬಾಕ್ಸ್ ಆಫೀಸ್ನಲ್ಲೂ ₹ 400 ಕೋಟಿಗೂ ಅಧಿಕ ಗಳಿಕೆ ಮಾಡಿತ್ತು.
ಕಾಂತಾರ ಸಿನಿಮಾ ಯಶಸ್ಸಿನ ಬಳಿಕ ರಿಷಭ್ ಶೆಟ್ಟಿ ತಂಡವು ಕಾಂತಾರ–2 ಮಾಡುತ್ತದೆ ಎಂಬ ಮಾತು ಕೇಳಿಬಂದಿತ್ತು. ಅದಕ್ಕೆ ಪೂರಕವೆಂಬಂತೆ ರಿಷಭ್ ಶೆಟ್ಟಿ ಅವರು ಇತ್ತೀಚೆಗೆ ಮಂಗಳೂರಿನ ಪಚ್ಚನಾಡಿಯಲ್ಲಿ ನಡೆದ ಅಣ್ಣಪ್ಪ ಪಂಜುರ್ಲಿ ದೈವದ ನೇಮೋತ್ಸವದಲ್ಲಿ ಪಾಲ್ಗೊಂಡಿದ್ದರು.
ಕಾಂತಾರ– 2 ಬಗ್ಗೆ ರಿಷಭ್ ಶೆಟ್ಟಿ ಅವರು ದೈವದ ಮುಂದೆ ಪ್ರಶ್ನೆಯಿಟ್ಟಿದ್ದರು. ಈ ವೇಳೆ ದೈವವು ಚಿತ್ರ ತಂಡಕ್ಕೆ ಹಲವು ಷರತ್ತಿನೊಂದಿಗೆ ಅಭಯ ನೀಡಿದೆ.
ಮೊದಲು ಚಿತ್ರ ಮಾಡುವಾಗ ಹತ್ತು ಬಾರಿ ಯೋಚನೆ ಮಾಡಿದ್ದೀರಿ, ಈ ಬಾರಿ ಮಾತ್ರ ನೂರು ಬಾರಿ ಯೋಚನೆ ಮಾಡಿ ಹೆಜ್ಜೆ ಇಡಬೇಕು. ಜೊತೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ ಅನುಮತಿ ಪಡೆಯಲು ದೈವ ಸೂಚನೆ ನೀಡಿದೆ.
ದೈವದ ಅಭಯ ಕುರಿತಂತೆ ದೈವ ನರ್ತಕ ಉಮೇಶ್ ಮಾಧ್ಯಮದವರ ಜತೆ ಮಾಹಿತಿ ಹಂಚಿಕೊಂಡಿದ್ದಾರೆ. ಕಾಂತಾರ–2 ಸಿನಿಮಾ ಮಾಡುವ ಬಗ್ಗೆ ರಿಷಭ್ ಶೆಟ್ಟಿ ಅವರು ದೈವದ ಅಪ್ಪಣೆ ಕೇಳಿದ್ದರು. ಈ ವೇಳೆ ಮೊದಲು ಧರ್ಮಸ್ಥಳ ಮಂಜುನಾಥೇಶ್ವರನ ಅನುಮತಿ ಕೇಳಲು ದೈವ ತಿಳಿಸಿದೆ. ಜೊತೆಗೆ ಕಾಂತಾರದಲ್ಲಿ ಕೆಲಸ ಮಾಡಿದ ಅದೇ ತಂಡದೊಂದಿಗೆ ಅಷ್ಟೇ ಶುದ್ಧಾಚಾರದಿಂದ ಮುಂದುವರಿಯಲು ಅಣ್ಣಪ್ಪ ಪಂಜುರ್ಲಿ ದೈವದ ನುಡಿಯಲ್ಲಿ ಬಂದಿದೆ ಎಂದು ಉಮೇಶ್ ತಿಳಿಸಿದರು.