ಇನ್ಮುಂದೆ ವಿಐಪಿ ವಾಹನಗಳಲ್ಲಿ ಸೈರನ್ ಬದಲಿಗೆ ಕೊಳಲಿನ ಧ್ವನಿ – ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿಕೆ
- ಆಟೋ ನ್ಯೂಸ್
- August 16, 2023
- No Comment
- 176
ನ್ಯೂಸ್ ಆ್ಯರೋ : ವಿಐಪಿ ವಾಹನಗಳ ಮೇಲಿನ ಕೆಂಪು ದೀಪಕ್ಕೆ ಮುಕ್ತಿ ಹಾಡಿದ್ದ ಕೇಂದ್ರ ಸರಕಾರ ಶೀಘ್ರದಲ್ಲಿಯೇ ವಿಐಪಿ ವಾಹನಗಳ ಮೇಲಿನ ಸೈರನ್ ತೆಗೆದು ಹಾಕಲು ನಿರ್ಧರಿಸಿದೆ.
ಸಚಿವ ನಿತಿನ್ ಗಡ್ಕರಿ ಹೇಳಿದ್ದೇನು?
ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಾತನಾಡಿ, ಶಬ್ದ ಮಾಲಿನ್ಯ ನಿಯಂತ್ರಿಸಲು ವಿಐಪಿ ವಾಹನಗಳ ಮೇಲೆ ಇರುವ ಸೈರನ್ ಗೆ ಕೊಕ್ ನೀಡಲು ಮುಂದಾಗಿದ್ದೇವೆ. ವಿಐಪಿ ಕಾರುಗಳ ಮೇಲಿನ ಕೆಂಪು ದೀಪಕ್ಕೆ ಮುಕ್ತಿ ಹಾಡಿದ್ದೆ. ಇದೀಗ ಇನ್ನೊಂದು ಹೆಜ್ಜೆ ಮುಂದಿಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಜನರು ಶಬ್ದ ಮಾಲಿನ್ಯದಿಂದ ಮುಕ್ತರಾಗಬೇಕೆಂದು ಬಯಸುತ್ತೇನೆ ಎಂದು ಪುಣೆಯಲ್ಲಿ ಚಾಂದಿನಿ ಚೌಕ್ ಮೇಲ್ಸೇತುವೆ ಉದ್ಘಾಟಿಸಿ ಅವರು ಮಾತನಾಡಿದರು.
ಹಾರ್ನ್ ಮತ್ತು ಸೈರನ್ ಬದಲಾಗಿ ಕೊಳಲಿನ ಧ್ವನಿಯಂತಹ ಶಾಸ್ತ್ರೀಯ ಸಂಗೀತ ಉಪಕರಣದ ಧ್ವನಿ ಹೊರಡಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಗಡ್ಕರಿ ತಿಳಿಸಿದ್ದಾರೆ. ಅಲ್ಲದೆ ಕಾರಿನ ಮುಂಬದಿ ಸೀಟ್ ನ ಪ್ರಯಾಣಿಕರ ಜೊತೆಗೆ ಹಿಂಬದಿಯ ಪ್ರಯಾಣಿಕರೂ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ ಮಾಡಲು ಚಿಂತನೆ ನಡೆಸಲಾಗುತ್ತಿದೆ. ಎಲ್ಲಾ ವಾಹನಗಳಲ್ಲಿ ವೇಗ ಸೂಚಕ ಎಚ್ಚರಿಕೆ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾರೆ.