Capt. Pranjal : ದೇಶದ ಹೆಮ್ಮೆಯ ಪುತ್ರನಿಗೆ ಕಣ್ಣೀರಿನ ವಿದಾಯ – ಪಂಚಭೂತಗಳಲ್ಲಿ ಲೀನವಾದ ಕ್ಯಾಪ್ಟನ್ ಪ್ರಾಂಜಲ್
- ಟಾಪ್ ನ್ಯೂಸ್
- November 25, 2023
- No Comment
- 187
ನ್ಯೂಸ್ ಆ್ಯರೋ : ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಬುಧವಾರ ಉಗ್ರರ ಜೊತೆಗಿನ ಗುಂಡಿನ ಕಾಳಗದಲ್ಲಿ ಹುತಾತ್ಮರಾದ ಕನ್ನಡಿಗ ಯೋಧ ಎಂ.ವಿ. ಪ್ರಾಂಜಲ್ ಅವರು ಪಂಚಭೂತಗಳಲ್ಲಿ ಲೀನವಾಗಿದ್ದಾರೆ.
ಪ್ರಾಂಜಲ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿಯ ಸೋಮಸುಂದರಪಾಳ್ಯ ಚಿತಾಗಾರದಲ್ಲಿ ನಡೆಯಿತು.
ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಸಿದ್ದು, ಪ್ರಾಂಜಲ್ ಅವರ ತಂದೆ ಅಂತಿಮ ವಿಧಿವಿಧಾನಗಳನ್ನ ನೆರವೇರಿಸಿದರು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸಂಬಂಧಿಕರು, ಸೇನಾಧಿಕಾರಿಗಳು ಸೇರಿ ನೆರದಿದ್ದ ಜನರು ವೀರ ಯೋಧನಿಗೆ ಕಣ್ಣೀರಿನ ವಿದಾಯ ನೀಡಿದರು.
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿ ಬಳಿಯ ನಂದನವನ ಲೇಔಟ್ನ ನಿವಾಸದಲ್ಲಿ ಅಂತಿಮ ದರ್ಶನದ ಬಳಿಕ ಸಕಲ ಸರಕಾರಿ ಗೌರವಗಳೊಂದಿಗೆ ತೆರೆದ ವಾಹನದಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು.
ಕಲ್ಲುಬಾಳು ರಸ್ತೆ ಜಿಗಣಿಯ ಒಡಿಸಿ ಸರ್ಕಲ್, ಜಿಗಣಿ ರಸ್ತೆ ಮೂಲಕ ಹರಪನ್ನಹಳ್ಳಿ – ಕೊಪ್ಪ ಗೇಟ್ – ಬೇಗಿಹಳ್ಳಿ – ಬನ್ನೇರುಘಟ್ಟ ರಸ್ತೆ – ನೈಸ್ ರೋಡ್ – ಕೂಡ್ಲುಗೇಟ್ ಮೂಲಕ ಹಾದು ಬಂದ ಮೆರವಣಿಗೆ ಸೋಮಸುಂದರಪಾಳ್ಯ ಚಿತಾಗಾರದ ಆವರಣದಲ್ಲಿ ಕೊನೆಗೊಂಡಿತು.
ಇನ್ನು ಉಗ್ರರ ಜೊತೆಗಿನ ಗುಂಡಿನ ಕಾಳಗದಲ್ಲಿ ಹುತಾತ್ಮರಾದ ಕನ್ನಡಿಗ ಯೋಧ ಎಂ.ವಿ. ಪ್ರಾಂಜಲ್ ಅವರ ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 50 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.